ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಮನೆಯ ಪಕ್ಕದಲ್ಲಿರುವ ಹೊಟೇಲಿನ ತ್ಯಾಜ್ಯ ನೀರು ಬಾವಿಗಳಿಗೆ ಸೇರುತ್ತಿರುವುದರಿಂದ ಕುಡಿಯಲು ಅಯೋಗ್ಯವಾಗಿದ್ದು, ಈ ಬಗ್ಗೆ ಪುರಸಭೆ ಸಹಿತ ವಿವಿಧ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಅವರು ಮೌನವಾಗಿದ್ದಾರೆಂದು ಗಾಂಧಿನಗರ ಪ್ರದೇಶದ ಜನರು ಆರೋಪಿಸಿದ್ದಾರೆ.ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಾಂಧಿನಗರ ಪ್ರದೇಶದ ಅಣ್ಣು ಎಂಬವರ ಮನೆಯ ಕುಡಿಯುವ ನೀರಿನ ಬಾವಿಗೆ ಹೊಟೇಲಿನ ತ್ಯಾಜ್ಯ ನೀರು ಕಳೆದ ನಾಲ್ಕು ವರ್ಷಗಳಿಂದ ಸೇರುತ್ತಿದ್ದು, ಕುಡಿಯಲು ಅಯೋಗ್ಯವಾಗಿದೆ. ಆ ಬಾವಿಯ ನೀರನ್ನು ಐದು ಕುಟುಂಬಗಳು ಉಪಯೋಗಿಸುತ್ತಿದ್ದಾರೆ. ಬಾವಿಯ ನೀರು ಕಲುಷಿತಗೊಂಡಿದ್ದರಿಂದ ನೀರು ವಾಸನೆ ಬೀರುತ್ತಿತ್ತು. ಇದರಿಂದಾಗಿ ನೀರು ಕುಡಿಯಲು ಮತ್ತು ಇತರ ಕೆಲಸಗಳಿಗೆ ಬಳಕೆ ಮಾಡಲು ಸಾಧ್ಯವಾಗದೆ ಅವರು ಮತ್ತೊಂದು ಬಾವಿ ತೋಡಿದರು. ಆದರೆ ಇದೀಗ ಆ ಬಾವಿಯ ನೀರು ಕೂಡ ಕಲುಷಿತಗೊಂಡಿದ್ದು, ಕುಡಿಯಲು ಮತ್ತು ಮನೆ ಬಳಕೆಗೆ ಸೂಕ್ತವಾಗಿಲ್ಲ.
ಈ ಬಗ್ಗೆ ನಾರಾಯಣ ಮತ್ತು ಅಣ್ಣು, ಪುರಸಭೆಗೆ ದೂರು ನೀಡಿದಾಗ ಪರಿಶೀಲಿಸಿದ ಅಧಿಕಾರಿಗಳು, ಬಾವಿಗೆ ಹೋಟೆಲ್ನ ತ್ಯಾಜ್ಯ ನೀರಿನ ಒಸರಿನಿಂದಾಗಿ ಬಾವಿಯ ನೀರು ಕಲುಷಿತಗೊಂಡಿರುವ ಬಗ್ಗೆ ಪರಿಶೀಲಿಸಿ ಮೌಖಿಕವಾಗಿ ಸೂಕ್ತ ವ್ಯವಸ್ಥೆ ಮಾಡುವಂತೆ ಹೋಟೆಲ್ನವರಿಗೆ ಸೂಚಿಸಿದ್ದಲ್ಲದೆ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಶುದ್ಧೀಕರಣ ಘಟಕ ಸ್ಥಾಪನೆ ಮಾಡಿ ಉದ್ಯಮದ ತ್ಯಾಜ್ಯ ನೀರಿನ ಸಂಸ್ಕರಣೆಗೆ ಸಂಪರ್ಕ ಕಲ್ಪಿಸುವುದು ಹಾಗೂ ದೂರುದಾರರ ಬಾವಿ ನೀರನ್ನು ಸ್ವಚ್ಛಗೊಳಿಸಿ ಕೊಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಪುರಸಭಾ ಕಾಯ್ದೆಯಂತೆ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.ಆದರೆ ಈವರೆಗೆ ಹೋಟೆಲ್ನವರು ಯಾವುದೇ ವ್ಯವಸ್ಥೆ ಮಾಡಿಲ್ಲ. ಅಲ್ಲದೆ ಪುರಸಭೆಯ ಅಧಿಕಾರಿಗಳು ಕೂಡಾ ಮತ್ತೆ ಕ್ರಮಕೈಗೊಂಡಿಲ್ಲವೆಂದು ನಾರಾಯಣ್ ಮತ್ತು ಅಣ್ಣು ಆರೋಪಿಸಿದ್ದಾರೆ.ತಾವು ಪುರಸಭೆಗೆ ಮಾತ್ರವಲ್ಲದೆ ದ.ಕ. ಜಿಲ್ಲಾಧಿಕಾರಿಗೆ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿಗೆ, ಜಿಲ್ಲಾ ಆರೋಗ್ಯ ಅಧಿಕಾರಿಗೆ, ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಗೆ, ಮೂಡುಬಿದಿರೆ ತಹಸೀಲ್ದಾರ್ಗೆ, ಸಮುದಾಯ ಆರೋಗ್ಯ ಕೇಂದ್ರಕ್ಕೂ ದೂರು ನೀಡಿದ್ದು, ಆದರೆ ಪ್ರಯೋಜನವಾಗಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
,,,,,,,,,,,,,,,,,,ಪುರಸಭೆಯು ಎರಡು ದಿನಕ್ಕೊಮ್ಮೆ ನೀರು ಬಿಡುತ್ತಿರುವುದರಿಂದ ತಾವು ಪ್ರತಿದಿನ ಒಂದೊಂದು ಸಾವಿರ ಹಣಕೊಟ್ಟು ಟ್ಯಾಂಕ್ ಮೂಲಕ ನೀರು ತರಿಸಿ ಉಪಯೋಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡವರಾಗಿರುವ ತಮಗೆ ಹಣಕೊಟ್ಟು ನೀರು ತರಿಸಲು ಕಷ್ಟ ಸಾಧ್ಯವಾಗಿದೆ.
। ಮೋಹನ್, ನಾರಾಯಣ ಅವರ ಪುತ್ರ.....................
ಹೊಟೇಲ್ನವರನ್ನು ಕರೆಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಲುಷಿತ ನೀರು ವಿಲೇವಾರಿಗೆ ವ್ಯವಸ್ಥೆ ಮಾಡಿಕೊಳ್ಳಲು ಹಾಗೂ ಅಲ್ಲಿಯವರೆಗೆ ವ್ಯವಹಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ .-ಇಂದು, ಮುಖ್ಯಾಧಿಕಾರಿ, ಮೂಡುಬಿದಿರೆ ಪುರಸಭೆ.