16 ಸಾವಿರಕ್ಕೂ ಅಧಿಕ ಉದ್ಯೋಗಾವಕಾಶ ಲಭ್ಯ । ಇದು 15ನೇ ಆವೃತ್ತಿ
ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಆಯೋಜನೆಗೊಂಡಿರುವ 15ನೇ ಆವೃತ್ತಿಯ ‘ಆಳ್ವಾಸ್ ಪ್ರಗತಿ’ ಬೃಹತ್ ಉದ್ಯೊಗ ಮೇಳಕ್ಕೆ ವಿದ್ಯಾಗಿರಿ ಆವರಣ ಸಂಪೂರ್ಣ ಸಿದ್ಧಗೊಂಡಿದ್ದು, ಶುಕ್ರವಾರ ಹಾಗೂ ಶನಿವಾರ ನಡೆಯುವ ಕಾರ್ಯಕ್ರಮದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ನೇಮಕಾತಿದಾರರಿಗೆ ವ್ಯವಸ್ಥಿತ ಸೌಲಭ್ಯಗಳನ್ನು ಒದಗಿಸಲಾಗಿದೆ.ಈವರೆಗೆ 305 ಕಂಪನಿಗಳು ನೋಂದಾಯಿಸಿಕೊಂಡು ವಿವಿಧ ಹುದ್ದೆಗಳಿಗೆ 2 ದಿನಗಳೂ ನೇಮಕಾತಿ ನಡೆಸಲಿವೆ. ಈಗಾಗಲೇ 11,509 ಅಭ್ಯರ್ಥಿಗಳು ಆನ್ಲೈನ್ ಮೂಲಕ ಈಗಾಗಲೇ ನೋಂದಾಯಿಸಿಕೊಂಡಿದ್ದು, ಶುಕ್ರವಾರ ಸ್ಥಳದಲ್ಲೇ ನೇರವಾಗಿ ನೋಂದಾಯಿಸಿಕೊಳ್ಳಲು ಅವಕಾಶವಿದೆ.ಎಐ ಆಧಾರಿತ ವಿಶೇಷ ಚಾಟ್ಬೋಟ್: ಈ ಬಾರಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಎಐ ಆಧಾರಿತ ವಿಶೇಷ ಚಾಟ್ ಬೋಟ್ ತಂತ್ರಜ್ಞಾನ ತಯಾರಿಸಲಾಗಿದ್ದು, ಅಭ್ಯರ್ಥಿಗಳು ತಮ್ಮ ರೆಸ್ಯೂಮ್ಗಳನ್ನು ಕ್ಯೂಆರ್ ಕೋಡ್ ಮೂಲಕ ಸ್ಕ್ಯಾನ್ ಮಾಡಿದಾಗ ತಮ್ಮ ವಿದ್ಯಾರ್ಹತೆಗೆ ಹೊಂದುವ ಹುದ್ದೆ ಹಾಗೂ ಕಂಪನಿಗಳ ವಿವರವನ್ನು ಪಡೆಯಬಹುದಾಗಿದೆ. ಇದರೊಂದಿಗೆ ಕಂಪನಿಗಳ ವಿವರಗಳಿರುವ ಅಭ್ಯರ್ಥಿ ಸಹಾಯಕ ಕೈಪಿಡಿ, ಅಗತ್ಯವಿರುವವರಿಗೆ ವಸತಿ ವ್ಯವಸ್ಥೆ, ಐಟಿಐ, ಡಿಪ್ಲೊಮೊ ಕಾಲೇಜುಗಳಿಗೆ ವಾಹನ ಸೌಲಭ್ಯ ಹಾಗೂ ಅಭ್ಯರ್ಥಿ ಸಹಾಯ ಕೇಂದ್ರಗಳು ಇರಲಿವೆ.ಒರಿಯಂಟೇಶನ್ ಕಾರ್ಯಕ್ರಮ: ಈ ಬಾರಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ- ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಮಂಗಳೂರು, ಉಳ್ಳಾಲ, ಕಾಪು, ಕಾರ್ಕಳ, ಬೈಂದೂರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸ್ಥಳಿಯ ಶಾಸಕರ ಬೆಂಬಲದೊಂದಿಗೆ ಸುಮಾರು 2500 ಜನರಿಗೆ ಉದ್ಯೋಗ ಮಾಹಿತಿ ಶಿಬಿರ ಆಯೋಜನೆ ಮಾಡಲಾಗಿತ್ತು. ಉದ್ಘಾಟನೆ: ಶುಕ್ರವಾರ ಬೆಳಗ್ಗೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಮಂಗಳೂರು ವಿವಿ ಕುಲಪತಿ ಪಿ. ಎಲ್ ಧರ್ಮ, ಶಾಸಕ ಉಮಾನಾಥ್ ಕೋಟ್ಯಾನ್ ಹಾಗೂ ಅವಿಭಜಿತ ದ.ಕ ಜಿಲ್ಲೆಯ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.