ಕನ್ನಡಪ್ರಭ ವಾರ್ತೆ ಮಳವಳ್ಳಿ
ಮೂರು ದಶಕಗಳ ನಂತರ ಮಂಡ್ಯದಲ್ಲಿ ಡಿ.20ರಿಂದ ಮೂರು ದಿನಗಳ ಕಾಲ ನಡೆಯಲಿರುವ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಜನರು ಭಾಗವಹಿಸಿ ಕನ್ನಡ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಬೇಕೆಂದು ತಹಸೀಲ್ದಾರ್ ಡಾ.ಎಸ್.ವಿ.ಲೋಕೇಶ್ ತಿಳಿಸಿದರು.ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಸಂಚರಿಸುತ್ತಿರುವ ಕನ್ನಡ ರಥವು ಭಾನುವಾರ ಗಡಿ ಭಾಗದ ಬೆಂಡರವಾಡಿ ಗ್ರಾಮದ ಮೂಲಕ ತಾಲೂಕು ಪ್ರವೇಶಿಸಿದ ವೇಳೆ ಸ್ವಾಗತಿಸಿ ಬರಮಾಡಿಕೊಂಡ ನಂತರ ಮಾತನಾಡಿದರು.
ಕನ್ನಡ ಭಾಷೆ ಸಾಹಿತ್ಯದ ಶ್ರೀಮಂತಿಕೆಯ ಪ್ರತಿರೂಪವಾಗಿ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುತ್ತಿದೆ. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದೊಂದಿಗೆ ಸಮ್ಮೇಳನದ ಯಶ್ವಸಿಗೆ ಮುಂದಾಗಬೇಕು. ಸಮ್ಮೇಳನದ ಪ್ರಚಾರಕ್ಕಾಗಿ ಕನ್ನಡ ರಥವು ತಾಲೂಕಿನಲ್ಲಿ ಐದು ದಿನಗಳ ಕಾಲ ಸಂಚರಿಸಲಿದೆ ಎಂದರು.ತಾಪಂ ಇಒ ಎಚ್.ಜಿ.ಶ್ರೀನಿವಾಸ್ ಮಾತನಾಡಿ, ಡಿ.1 ರಿಂದ ಡಿ.5ರವರೆಗೆ ತಾಲೂಕಿನ 39 ಗ್ರಾಮ ಪಂಚಾಯ್ತಿಗಳು ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಕನ್ನಡ ರಥವು ಸಂಚರಿಸಲಿದೆ. ಮೂರು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ವಿಶ್ವದೆಲ್ಲೆಡೆಯ ಕನ್ನಡಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಿಂದ ಎಲ್ಲರೂ ಭಾಗಿಯಾಗುವಂತೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.
ಪ್ರತಿ ಮನ-ಮನೆಗಳಲ್ಲೂ ಕನ್ನಡ ಎನ್ನುವ ಉದ್ದೇಶದಿಂದ ರಥವು ತಾಲೂಕಿಗೆ ಬಂದಿದೆ. ಎಲ್ಲರೂ ಕಡ್ಡಾಯವಾಗಿ ಸಮ್ಮೇಳನದಲ್ಲಿ ಪಾಲ್ಗೋಳ್ಳಬೇಕು ಎಂದು ಮನವಿ ಮಾಡಿದರು.ವಿದ್ಯಾರ್ಥಿಗಳ ಕುಂಭಮೇಳ ಹಾಗೂ ಜಾನಪದ ಹಾಗೂ ಕನ್ನಡ ಗೀತೆಯೊಂದಿಗೆ ನೃತ್ಯ ಪ್ರದರ್ಶನದೊಂದಿಗೆ ಕನ್ನಡರಥಕ್ಕೆ ಸ್ವಾಗತ ಕೋರಲಾಯಿರು. ನಂತರ ವಿಧ ಗಾಮಗಳಲ್ಲಿ ಕನ್ನಡ ರಥಯಾತ್ರೆಯೂ ಸಂಚಾರ ಮುಂದುವರಿಸಿತು.
ಈ ವೇಳೆ ಕಸಾಪದ ತಾಲೂಕು ಘಟಕದ ಅಧ್ಯಕ್ಷ ಚೇತನ್ ಕುಮಾರ್, ಗ್ರೇಡ್-2 ತಹಸೀಲ್ದಾರ್ ಬಿ.ವಿ.ಕುಮಾರ್, ಡಿವೈಎಸ್ಪಿ ವಿ.ಕೃಷ್ಣಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ತಾಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್, ಸೆಸ್ಕ್ ಎಇಇ ಎಚ್.ಎಸ್.ಪ್ರೇಮ್ ಕುಮಾರ್, ಡಾ.ಸಂಜಯ್, ಡಾ.ಸಚಿನ್ ಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಬೆಂಡರವಾಡಿ ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ, ಉಪಾಧ್ಯಕ್ಷೆ ಶ್ರುತಿ, ಪ್ರಭಾರ ಅಭಿವೃದ್ಧಿ ಅಧಿಕಾರಿ ಎಚ್.ಎಂ.ಅಭಿಷೇಕ್ಮಹೇಶ್, ಎಚ್.ಇ.ಅಪ್ಪೇಗೌಡ, ದೇವರಾಜು ಕೊದೇನಕೊಪ್ಪಲು, ಸಿದ್ದರಾಜು, ಮಾದೇಗೌಡ, ಚುಂಚಣ್ಣ, ಪ್ರಕಾಶ್ ಸೇರಿದಂತೆ ಇತರರು ಇದ್ದರು.