ಹೊನ್ನಾಳಿ ತಾಲೂಕಲ್ಲಿ 250ಕ್ಕೂ ಅಧಿಕ ಪಂಪ್‌ಸೆಟ್ ತೆರವು

KannadaprabhaNewsNetwork | Published : Mar 26, 2024 1:21 AM

ಸಾರಾಂಶ

ಹೊನ್ನಾಳಿ ತಾಲೂಕಿನ ಹುಣಸಘಟ್ಟ ಬಳಿ ಭದ್ರಾ ನಾಲೆಯಲ್ಲಿ ಅನಧಿಕೃತವಾಗಿ ಪಂಪ್‍ಸೆಟ್‍ಗಳ ಅಳವಡಿಸಿ, ನೀರು ಬಳಸುತ್ತಿದ್ದರ ವಿರುದ್ಧ ಬೆಸ್ಕಾಂ, ಕಂದಾಯ, ಪೊಲೀಸ್‌ ಹಾಗೂ ನೀರಾವರಿ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿವೆ. ಒಟ್ಟಾರೆ 250ಕ್ಕೂ ಅಧಿಕ ಪಂಪ್‌ಸೆಟ್‌ಗಳು ತೆರವುಗೊಂಡಿವೆ.

ಕನ್ನಡಪ್ರಭ ವಾರ್ತೆ. ಹೊನ್ನಾಳಿ

ತಾಲೂಕಿನ ಹುಣಸಘಟ್ಟ ಬಳಿ ಭದ್ರಾ ನಾಲೆಯಲ್ಲಿ ಅನಧಿಕೃತವಾಗಿ ಪಂಪ್‍ಸೆಟ್‍ಗಳ ಅಳವಡಿಸಿ, ನೀರು ಬಳಸುತ್ತಿದ್ದರ ವಿರುದ್ಧ ಬೆಸ್ಕಾಂ, ಕಂದಾಯ, ಪೊಲೀಸ್‌ ಹಾಗೂ ನೀರಾವರಿ ಇಲಾಖೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿವೆ. ಒಟ್ಟಾರೆ 250ಕ್ಕೂ ಅಧಿಕ ಪಂಪ್‌ಸೆಟ್‌ಗಳು ತೆರವುಗೊಂಡಿವೆ.

ಮಾರ್ಚ್ 21ರಂದೇ ಮುಖ್ಯ ಚಾನಲ್ ಮುಖಾಂತರ ಬೇಸಿಗೆ ಹಂಗಾಮಿನ 220 ಕ್ಯುಸೆಕ್‌ ನೀರು ಹರಿಸಲಾಗಿದೆ. ಆದರೂ, ಪ್ರಾರಂಭದಲ್ಲೇ ರೈತರು ಚಾನಲ್‍ಗೆ ಅಕ್ರಮವಾಗಿ ಪಂಪ್‍ಸೆಟ್‌ಗಳ ಅಳವಡಿಸಿ, ತಮ್ಮ ಜಮೀನುಗಳಿಗೆ ನೀರನ್ನು ಹರಿಸುತ್ತಿದ್ದರು. ಇದರಿಂದಾಗಿ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ಸಾಸ್ವೇಹಳ್ಳಿ, ಬೆನಕನಹಳ್ಳಿ, ಹುಣಸೆಹಳ್ಳಿ, ಕಮ್ಮಾರಗಟ್ಟೆ, ತಕ್ಕನಹಳ್ಳಿ ಹಾಗೂ ಕೊನೆ ಭಾಗದ ರೈತರಿಗೆ ಭದ್ರಾ ನೀರು ಸಿಗುತ್ತಿಲ್ಲ ಎಂಬ ದೊಡ್ಡ ಆರೋಪ ಅಲ್ಲಿಯ ರೈತರಿಂದ ವ್ಯಕ್ತವಾಗಿತ್ತು.

ನಿರಂತರ ದೂರುಗಳ ಮೇರೆಗೆ ಉಪವಿಭಾಗಾಧಿಕಾರಿ ಅಭಿಷೇಕ್ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳ ತಂಡದ ಸಭೆ ನಡೆಸಿ, ಎಲ್ಲ ಅನಧಿಕೃತ ಪಂಪ್‍ಸೆಟ್‍ಗಳ ತೆರವಿಗೆ ಆದೇಶಿಸಿದ್ದರು. ಈ ಹಿನ್ನೆಲೆ ಸೋಮವಾರ ತಾಲೂಕಿನ ಹುಣಸಘಟ್ಟ, ಚನ್ನಮುಂಬಾಪುರ, ಕ್ಯಾಸಿನಕೆರೆ, ಕುಳಗಟ್ಟೆ ಹಾಗೂ ಇನ್ನಿತರ ಗ್ರಾಮಗಳಲ್ಲಿ ಹಾದುಹೋಗುವ ಭದ್ರಾ ಚಾನಲ್‍ನಲ್ಲಿ ಅನಧಿಕೃತವಾಗಿ ಹಾಕಿದ್ದ 250ಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ರೈತರ ಮನವೊಲಿಸಿ ತೆರವು ಮಾಡಿಸಿದ್ದಾರೆ.

ಆರಂಭದಲ್ಲಿ ರೈತರು ಹಾಗೂ ಅಧಿಕಾರಿಗಳ ಮಧ್ಯೆ ಬಿರುಸಿನ ಮಾತುಗಳು ನಡೆದವು. ಆದರೂ, ಅಂತಿಮವಾಗಿ ರೈತರ ಮನವೊಲಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿ, ಪಂಪ್‌ಸೆಟ್‌ ತೆರವುಗೊಳಿಸಿದರು.

ಕಾರ್ಯಾಚರಣೆಯಲ್ಲಿ ಹೊನ್ನಾಳಿ ಎಸಿ ಅಭಿಷೇಕ್, ತಹಸೀಲ್ದಾರ್ ಪುರಂದರ ಹೆಗ್ಡೆ, ಬೆಸ್ಕಾಂ ಎಇಇ ಜಯಪ್ಪ, ನೀರಾವರಿ ಎಇಇ ರಾಜಕುಮಾರ್, ಸಿಪಿಐ ಮುದ್ದುರಾಜು, ಎಎಸ್‍ಐ ಹರೀಶ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

- - -

-25ಎಚ್.ಎಲ್.ಐ2:

ಹುಣಸಘಟ್ಟ ಬಳಿ ಭದ್ರಾ ಚಾನಲ್‍ನಲ್ಲಿ ಅನಧಿಕೃತವಾಗಿ ಹಾಕಿದ್ದ ಪಂಪ್‍ಸೆಟ್‍ಗಳ ತೆರವುಗೊಳಿಸಲಾಯಿತು.

Share this article