ರಟ್ಟೀಹಳ್ಳಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸೋಮವಾರದಿಂದ ಅಧಿಕೃತವಾಗಿ ದೇಶದ ಜನತೆಗೆ ಜಿಎಸ್ಟಿ ದರ ಇಳಿಕೆ ಮಾಡಿದ್ದರಿಂದ ಬಡ, ಮಧ್ಯಮ ವರ್ಗಕ್ಕೆ 350ಕ್ಕೂ ಹೆಚ್ಚಿನ ಉತ್ಪನ್ನಗಳು ಇನ್ನಷ್ಟು ಅಗ್ಗದ ದರದಲ್ಲಿ ದೊರೆಯಲಿವೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.
ಪಟ್ಟಣದ ಭಗತ್ಸಿಂಗ ವೃತ್ತದಲ್ಲಿ ಸೋಮವಾರದಿಂದ ಜಿಎಸ್ಟಿ ತೆರಿಗೆ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜಿಎಸ್ಟಿ ದರ ಇಳಿಕೆಯಿಂದ ದೇಶಾದ್ಯಂತ ಉಳಿತಾಯ ಉತ್ಸವ ಪ್ರಾರಂಭವಾಗಿದೆ. ಇದು ಕೇಂದ್ರ ಸರಕಾರ ನೀಡುತ್ತಿರುವ ಗ್ಯಾರಂಟಿ. ಇಂತಹ ಗ್ಯಾರಂಟಿಗಳಿಂದ ಬಡ ಜನತೆ ಹರ್ಷಗೊಂಡಿದ್ದಾನೆ, ಸಿದ್ದರಾಮಯ್ಯ ನೀಡುತ್ತಿರುವ ಬಿಟ್ಟಿ ಭಾಗ್ಯಗಳಿಂದ ರಾಜ್ಯದ ಜನತೆಯ ಆರ್ಥಿಕ ಸ್ಥಿತಿ ಸುಧಾರಿಸುವುದಿಲ್ಲ, ರಾಜ್ಯ ದಿವಾಳಿಯಾಗಲಿದೆ ಎಂದು ಆರೋಪಿಸಿದರು.
ನವರಾತ್ರಿಯ ಮೊದಲ ದಿನದಲ್ಲಿ ದೇಶದ ಜನತೆ ಇಂದೇ ದೀಪಾವಳಿ ಆಚರಿಸುವಂತಾಗಿದೆ. ಈ ಹಿಂದೆ ಇದ್ದ ಶೇ.5, ಶೇ.12, ಶೇ.18, ಶೇ.28ರಷ್ಟು ಇದ್ದ ಜಿಎಸ್ಟಿ ದರ ಶೇ.5 ಹಾಗೂ ಶೇ.18ಕ್ಕೆ ಕಡಿತವಾದ್ದರಿಂದ 350ಕ್ಕೂ ಹೆಚ್ಚಿನ ಅಗತ್ಯ ವಸ್ತುಗಳು ಅತೀ ಕಡಿಮೆ ದರದಲ್ಲಿ ದೊರೆಯುವಂತಾಗಿದೆ. ಒಬ್ಬ ರೈತ 35 ಎಚ್ಪಿ ಟ್ರ್ಯಾಕ್ಟರ್ ಖರೀದಿ ಮಾಡಿದರೆ 41ಸಾವಿರ ರು. ಉಳಿತಾಯವಾಗಲಿದೆ. ಅದೇ ರೀತಿ ಇನ್ನೂ ಅನೇಕ ವಸ್ತುಗಳ ಮೇಲಿದ್ದ ದರ ಕಡಿಮೆಯಾದ್ದರಿಂದ ದೇಶಾದ್ಯಂತ ಸಂಭ್ರಮಾಚರಣೆ ಮಾಡುವಂತಾಗಿದೆ ಎಂದರು.ಹಿಂದೂ ಧರ್ಮವನ್ನು ಒಡೆದಾಳುವ ದೃಷ್ಟಿಯಿಂದ ಜಾತಿಗಣತಿಯಲ್ಲಿ 48 ಉಪ ಜಾತಿಗಳನ್ನು ಸೇರಿಸಲಾಗಿದೆ ಹಾಗೂ ಇನ್ನೂ ಅನೇಕ ಹಿಂದೂ ವಿರೋಧಿ ನಿಲುವುಗಳನ್ನ ಮುನ್ನೆಲೆಗೆ ತಂದು ಹಿಂದೂಗಳಿಗೆ ಅನ್ಯಾಯ ಮಾಡುವ ಹುನ್ನಾರ ನಡೆಯುತ್ತಿದೆ. ಅದಕ್ಕೆ ರಾಜ್ಯ ಬಿಜೆಪಿ ಯಾವತ್ತು ಸುಮ್ಮನೆ ಕೂರುವುದಿಲ್ಲ ಅದರ ವಿರುದ್ಧ ಧ್ವನಿ ಎತ್ತಿ ಹಿಂದೂಗಳನ್ನು ಜಾಗೃತಗೊಳಿಸಲಾಗುವುದು. ಆದ್ದರಿಂದ ರಾಜ್ಯ ಬಿಜೆಪಿ ನಾಯಕರು ಸಭೆ ನಡೆಸಿ ಜನಗಣತಿ ಸಂದರ್ಭದಲ್ಲಿ ಕಡ್ಡಾಯವಾಗಿ ಮೊದಲು ಹಿಂದೂ ಅಂತ ಬರೆಸಿ ಆ ನಂತರ ಅವರವರ ಜಾತಿ ನಮೂದು ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ತಾಲೂಕಾಧ್ಯಕ್ಷ ದೇವರಾಜ ನಾಗಣ್ಣನವರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜಿಎಸ್ಟಿ ಕಡಿಮೆ ಮಾಡಿದ್ದರಿಂದ ಬಡ ಮಧ್ಯಮ ವರ್ಗಕ್ಕೆ ಸಾಕಷ್ಟು ಅನಕೂಲವಾಗುವುದಲ್ಲದೆ ಜನರ ಹಣ ಉಳಿತಾಯವಾಗುತ್ತದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ವಿಕಸಿತ ಭಾರತವಾಗುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರು ದಾಪುಗಾಲು ಹಾಕುತ್ತಿರುವುದು ಅತ್ಯಂತ ಹೆಮ್ಮೆ ಪಡುವಂತಾಗಿದೆ ಎಂದರು.ಹಿರೇಕೆರೂರ ಬಿಜೆಪಿ ತಾಲೂಕಾಧ್ಯಕ್ಷ ಕಬ್ಬಿಣಕಂತಿ ಮಠ, ಆರ್.ಎನ್. ಗಂಗೋಳ, ಮಾಲತೇಶಗೌಡ ಗಂಗೋಳ, ರವಿಶಂಕರ ಬಾಳಿಕಾಯಿ, ಶಂಭಣ್ಣ ಗೂಳಪ್ಪನವರ, ರವಿ ಹದಡೇರ, ಬಸವರಾಜ ಕಟ್ಟಿಮನಿ, ವೀರನಗೌಡ ಮಕರಿ, ರಾಜುಗೌಡ ಪಾಟೀಲ್, ಹನಮಂತಪ್ಪ ಗಾಜೇರ, ಪ್ರಕಾಶ ಕೊರವರ, ಪ್ರಭುಗೌಡ ಎಡಚಿ, ಶ್ರೀನಿವಾಸ ಬೈರೋಜಿಯವರ, ವಿಶ್ವ ಬೆಳಕೆರಿ, ಪ್ರಕಾಶ ಬಣಕಾರ, ಸುನೀಲ ಕಟ್ಟಿಮನಿ, ಬಸಣ್ಣ ಬಾಗೋಡಿ, ಸಿದ್ದು ಹಲಗೇರಿ ಮುಂತಾದವರು ಇದ್ದರು.