50ಕ್ಕೂ ಅಧಿಕ ಶೆಡ್‌ ಜಲಾವೃತ, ಹೊಲಕ್ಕೆ ನುಗ್ಗಿ ಬೆಳೆ ಹಾನಿ

KannadaprabhaNewsNetwork | Published : Jul 29, 2024 12:57 AM

ಸಾರಾಂಶ

ಘಟಪ್ರಭೆಗೆ ಅಪಾರ ನೀರು ಹರಿದು ಬಂದಿದ್ದರಿಂದ ಮುಧೋಳ -ಯಾದವಾಡ ಮತ್ತು ಮಾಚಕನೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಜಲಾಶಯದಿಂದ ಘಟಪ್ರಭೆ ನದಿಗೆ ಹರಿದು ಬರುತ್ತಿರುವ ನೀರಿನ ರಭಸಕ್ಕೆ ನದಿ ದಂಡೆಯ ತಗ್ಗು ಪ್ರದೇಶಗಳು ಸೇರಿದಂತೆ ಹೊಲಗದ್ದೆಗಳು ಜಲಾವೃತಗೊಂಡಿವೆ.

ಕನ್ನಡಪ್ರಭ ವಾರ್ತೆ ಮುಧೋಳ

ಘಟಪ್ರಭೆಗೆ ಅಪಾರ ನೀರು ಹರಿದು ಬಂದಿದ್ದರಿಂದ ಮುಧೋಳ -ಯಾದವಾಡ ಮತ್ತು ಮಾಚಕನೂರು ಸೇತುವೆಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ. ಜಲಾಶಯದಿಂದ ಘಟಪ್ರಭೆ ನದಿಗೆ ಹರಿದು ಬರುತ್ತಿರುವ ನೀರಿನ ರಭಸಕ್ಕೆ ನದಿ ದಂಡೆಯ ತಗ್ಗು ಪ್ರದೇಶಗಳು ಸೇರಿದಂತೆ ಹೊಲಗದ್ದೆಗಳು ಜಲಾವೃತಗೊಂಡಿವೆ. ಮುಧೋಳ ನಗರದ ಕುಂಬಾರ ಗಲ್ಲಿ, ಜುಂಜರಕೊಪ್ಪ ಗಲ್ಲಿಯಲ್ಲಿರುವ 50ಕ್ಕೂ ಅಧಿಕ ತಾತ್ಕಾಲಿಕ ಶೆಡ್‌ಗಳು ಜಲಾವೃತಗೊಂಡಿವೆ. ಶೆಡ್‌ಗಳಲ್ಲಿ ವಾಸಿಸುವ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ. ಇದೇ ರೀತಿ ನದಿಗೆ ಹೆಚ್ಚುವರಿ ನೀರು ಹರಿದು ಬಂದರೆ ನಗರದ ಕಾಂಬಳೆ ಗಲ್ಲಿ, ಸಮಗಾರ ಗಲ್ಲಿ, ಬುರುಡ ಗಲ್ಲಿ ಸೇರಿದಂತೆ ಇತರೆ ಗಲ್ಲಿಯೂ ಜಲಾವೃತಗೊಳ್ಳಲಿವೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ:

ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿರುವ ಕುಟುಂಬದವರು ತಮಗೆ ವಾಸಿಸಲು ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆ ಮತ್ತು ಕಂದಾಯ ಅಧಿಕಾರಿಗಳು ಶೆಡ್‌ಗಳಲ್ಲಿ ವಾಸಿಸುವ ಕುಟುಂಬಗಳ ವಿವರವನ್ನು ಪಡೆದುಕೊಂಡಿದ್ದಾರೆ.

ಮುಧೋಳ ಸಮೀಪ ಹರಿದಿರುವ ಘಟಪ್ರಭೆ ತುಂಬಿ ಹರಿಯುತ್ತಿರುವ ನಯನ ನದಿಯ ನಯನ ಮನೋಹರ ದೃಶ್ಯವನ್ನು ವೀಕ್ಷಿಸಲು ನಗರದ ಜನತೆ ತಂಡೋಪತಂಡವಾಗಿ ಹೋಗುತ್ತಿದ್ದಾರೆ. ಪ್ರವಾಹ ಎದುರಿಸಲು ತಾಲೂಕಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೇ ನದಿ ಪಾತ್ರದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಿ, ಅವರ ಕಾಳಜಿ ಮಾಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ಮುಧೋಳ ಮತ್ತು ಮಾಚಕನೂರ ಸೇತುವೆ ಮೇಲೆ ಜನ ಮತ್ತು ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ, ಯಾವುದೇ ರೀತಿನ ಅವಘಡಗಳು ಆಗದಂತೆ ನೋಡಿಕೊಳ್ಳಲು ಇಲ್ಲಿ ಪೊಲೀಸ್ ಅವರನ್ನು ಕೂಡಾ ನಿಯೋಜಿಸಲಾಗಿದೆ. ಭಾನುವಾರ ಮತ್ತೆ ಹಿಡಕಲ್ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಘಟಪ್ರಭೆ ನದಿಯ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಲಿದೆ. ಇದರಿಂದ ನದಿಪಾತ್ರದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

Share this article