ಎನ್.ಎಚ್. 206 ಅಭಿವೃದ್ಧಿಗೆ 51 ಕೋಟಿಗೂ ಹೆಚ್ಚು ಅನುದಾನ: ಜಿ.ಎಚ್.ಶ್ರೀನಿವಾಸ್

KannadaprabhaNewsNetwork | Published : Mar 16, 2025 1:49 AM

ಸಾರಾಂಶ

ತರೀಕೆರೆ, ತರೀಕೆರೆ ಪಟ್ಟಣದ ಎನ್.ಎಚ್. 206 ರಸ್ತೆ ಅಭಿವೃದ್ಧಿಗೆ ₹51. 65 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

- ಪುರಸಭೆ ನೂತನ ಉಪಾಧ್ಯಕ್ಷರಾಗಿ ಪಾರ್ವತಮ್ಮ ತಿಮ್ಮಯ್ಯ ಅವಿರೋಧ ಆಯ್ಕೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಪಟ್ಟಣದ ಎನ್.ಎಚ್. 206 ರಸ್ತೆ ಅಭಿವೃದ್ಧಿಗೆ ₹51. 65 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ಆರಂಭಿಸಲಾಗಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ಶನಿವಾರ ಪುರಸಭೆಗೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಪಾರ್ವತಮ್ಮ ತಿಮ್ಮಯ್ಯ ಅವರಿಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಈಡಿಗ ಸಮಾಜಕ್ಕೆ ಉಪಾಧ್ಯಕ್ಷ ಸ್ಥಾನ ಪಕ್ಷ ನೀಡಿರುವುದು ಸಂತಸ ತಂದಿದೆ. ಪಟ್ಟಣದ ಅಭಿವೃದ್ಧಿಗೆ ಸಿಎಂ ವಿಶೇಷ ಅನುದಾನದಡಿ ₹೭ ಕೋಟಿ ಒದಗಿಸಲಾಗಿದೆ. ಯುಜಿಡಿ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಪುರಸಭೆ ಪ್ರಗತಿಗೆ ಮತ್ತಷ್ಟು ಅನುದಾನ ಕೊಡಿಸ ಲಾಗುವುದು ಎಂದು ತಿಳಿಸಿದರು.ಪಾರ್ವತಮ್ಮ ತಿಮ್ಮಯ್ಯ ಮಾತನಾಡಿ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಈಡಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಅವಕಾಶ ಮಾಡಿಕೊಟ್ಟಿದೆ. ಪಕ್ಷ ಮತ್ತು ಪುರಸಭೆ ಸದಸ್ಯರು ವಿಶ್ವಾಸವಿಟ್ಟು ನೀಡಿದ ಸ್ಥಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದರು.ಪುರಸಭೆ ಅಧ್ಯಕ್ಷ ವಸಂತಕುಮಾರ್ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಸ ಲಾಗು ವುದು. ಪುರಸಭೆಯಲ್ಲಿ ಮೊಟ್ಟ ಮೊದಲ ಬಾರಿಗೆ ಈಡಿಗ ಸಮುದಾಯಕ್ಕೆ ಅವಕಾಶ ದೊರೆತಿದೆ ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್ ಮಾತನಾಡಿ, ಅಧಿಕಾರ ಸುಲಭವಾಗಿ ದೊರಕುವುದಿಲ್ಲ. ಸಿಕ್ಕ ಅವಕಾಶ ವನ್ನು ಒಳ್ಳೆಯ ಕೆಲಸ ಮಾಡಲು ಮೀಸಲಿಡೋಣ ಎಂದು ಹೇಳಿದರು.

ಹಿಂದಿನ ಉಪಾಧ್ಯಕ್ಷೆ ಗಿರಿಜಾಪ್ರಕಾಶ್‌ ವರ್ಮ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಪಾರ್ವತಮ್ಮ ತಿಮ್ಮಯ್ಯ ಒಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿಯಾಗಿದ್ದ ತಹಸೀಲ್ದಾರ್ ವಿಶ್ವಜಿತ್ ಮೆಹತಾ ಅವಿರೋಧ ಆಯ್ಕೆ ಪ್ರಕಟಿಸಿದರು.ಪುರಸಭೆ ಸದಸ್ಯ ಟಿ.ದಾದಾಪೀರ್, ಟಿ.ಜಿ.ಶಶಾಂಕ್, ಟಿ.ಎಂ.ಭೋಜರಾಜ್, ಪರಮೇಶ್, ದಿವ್ಯಾ, ಪುರಸಭೆ ಮಾಜಿ ಅಧ್ಯಕ್ಷ ಟಿ.ಎಸ್. ಪ್ರಕಾಶ್‌ವರ್ಮ, ಎಂ.ನರೇಂದ್ರ, ಟಿ.ಎಸ್.ರಮೇಶ್,, ಪುರಸಭೆ ನಾಮಿನಿ ಸದಸ್ಯ ಅದಿಲ್ ಪಾಷ ಮತ್ತಿತರರು ಮಾತನಾಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಚ್.ಪ್ರಶಾಂತ್, ಮುಖಂಡ ಪರಶುರಾಮ್, ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ಕೃಷ್ಣಪ್ಪ, ಸಮಾಜದ ಮುಖಂಡರಾದ ರಾಘವೇಂದ್ರ, ಹೊನ್ನಪ್ಪ, ಟಿ.ಜೆ.ರಂಗನಾಥ್, ಕೃಷ್ಣಮೂರ್ತಿ, ಸುರೇಶ್ ಹಾಗೂ ಪುರಸಭೆ ಸದಸ್ಯರು, ಅಧಿಕಾರಿಗಳು ಭಾಗವಹಿಸಿದ್ದರು.

15ಕೆಟಿಆರ್.ಕೆ4ಃ

ತರೀಕೆರೆ ಪುರಸಭೆ ಉಪಾಧ್ಯಕ್ಷರಾಗಿ ಆವಿರೋಧ ಆಯ್ಕೆಯಾದ ಪಾರ್ವತಮ್ಮ ತಿಮ್ಮಯ್ಯ ಅವರನ್ನು ಶಾಸಕ ಜಿ.ಎಚ್.ಶ್ರೀನಿವಾಸ್, ಪುರಸಭೆ ಅಧ್ಯಕ್ಷ ವಸಂತಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಯು.ಫಾರೂಕ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಪರಶುರಾಮ್, ಈಡಿಗ ಸಮಾಜದ ಮುಖಂಡ ರಾಘವೇಂದ್ರ ಅಭಿನಂದಿಸಿದರು.

Share this article