ದೊಡ್ಡಬಳ್ಳಾಪುರ: ಹಸಿರು ಸಿರಿಯಲ್ಲಿ ಸಾರ್ಥಕ್ಯವನ್ನು ಕಂಡ ಶತಾಯುಷಿ ವೃಕ್ಷ ಮಾತೆ ಸಾಲು ಮರದ ತಿಮ್ಮಕ್ಕ ನಿಧನರಾದ ಹಿನ್ನಲೆ ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ಸಂಜೆ ಶ್ರದ್ದಾಂಜಲಿ, ಸಸಿ ನಮನ ಹಾಗೂ ನುಡಿನಮನ ಕಾರ್ಯಕ್ರಮ ನಡೆಯಿತು.
ನುಡಿ ನಮನ ಸಲ್ಲಿಸಿ ಮಾತನಾಡಿದ ಪ್ರಾಂಶುಪಾಲ ಡಾ.ವಿಜಯಕಾರ್ತಿಕ್, ಸಾಲು ಮರದ ತಿಮ್ಮಕ್ಕ ಅವರ ಜೀವನವನ್ನು ಆದರ್ಶವಾಗಿ ಪರಿಗಣಿಸಿ, ಹಸಿರು ಸಂಪತ್ತನ್ನು ವೃದ್ದಿಸುವ ಸಂಕಲ್ಪ ಮಾಡಬೇಕು. ಜನ್ಮದಿನ, ನೆನಪಿನ ಕಾರ್ಯಕ್ರಮಗಳಲ್ಲಿ ಸಸಿಗಳನ್ನು ಉಡುಗೊರೆ ನೀಡುವ ಹಾಗೂ ನೆಟ್ಟು ಬೆಳೆಸುವ ಪರಿಪಾಠ ಬೆಳೆಯಬೇಕು ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರೊ.ರವಿಕಿರಣ್ ಕೆ.ಆರ್ ಮಾತನಾಡಿ, ಮಕ್ಕಳಿಲ್ಲದ ತಿಮ್ಮಕ್ಕ ದಂಪತಿಗಳು ಸಾಲು ಮರಗಳನ್ನು ನೆಟ್ಟು ಮಕ್ಕಳ ರೀತಿಯಲ್ಲಿ ಆರೈಕೆ ಮಾಡಿ ಬೆಳೆಸಿವ ಮೂಲಕ ಪರಿಸರದ ಕೈಂಕರ್ಯವನ್ನು ನಿಸ್ವಾರ್ಥವಾಗಿ ಮಾಡಿದ್ದಾರೆ. ಹಸಿರೀಕರಣದ ಆಶಯವನ್ನು ಸಾಕಾರಗೊಳಿಸಿದ ಅವರು, ಎಲೆಮರೆ ಕಾಯಿಯಂತೆ ಪರಿಸರದ ಕಾಯಕ ಮಾಡುತ್ತಿದ್ದರು. ದಿನಪತ್ರಿಕೆಯೊಂದರ ವರದಿ ಅವರನ್ನು ಇಡೀ ದೇಶಕ್ಕೆ ಪರಿಚಯಿಸಿತ್ತು. ಬಳಿಕ ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಅವರಿಗೆ ರಾಷ್ಟ್ರೀಯ ಪುರಸ್ಕಾರ ಘೋಷಿಸಿದ್ದರು. ಅವರ ಅನನ್ಯ ಸೇವೆ ಇಂದಿಗೂ ಮಾದರಿಯಾಗಿ ಉಳಿದಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಕೆ.ಸುನಿಲ್ಕುಮಾರ್, ಡಾ.ಮಂಜುನಾಥ್, ಮೀನಾಕ್ಷಿ, ಅಲ್ಲಾಭಕ್ಷ್, ಡಾ.ಮಮತ, ಡಾ.ಶಿಲ್ಪಕಲಾ ದೈಹಿಕ ಶಿಕ್ಷಣ ನಿರ್ದೇಶಕ ದಾದಾಫೀರ್, ವ್ಯವಸ್ಥಾಪಕ ಎಸ್.ಯತಿನ್ ಮತ್ತಿತರರು ಉಪಸ್ಥಿತರಿದ್ದರು.
14ಕೆಡಿಬಿಪಿ1- ದೊಡ್ಡಬಳ್ಳಾಪುರದ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಾಲು ಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮ ನಡೆಯಿತು.