ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಹಾಳಾದ ಹೆದ್ದಾರಿಗೆ ವಾಹನ ಸವಾರರ ಪರದಾಟ

KannadaprabhaNewsNetwork | Published : Jun 10, 2025 12:39 AM

ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ 65 ಹಾಳಾಗಿ ವರ್ಷ ಕಳೆದರೂ ದುರಸ್ತಿ ಇಲ್ಲ

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಮಲ್ಪೆ-ಮೊಳಕಾಲ್ಮುರು ರಾಜ್ಯ ಹೆದ್ದಾರಿ 65 ಬಿ.ಜಿ.ಕೆರೆ ಸಮೀಪದಲ್ಲಿ ಅಲ್ಲಲ್ಲಿ ಹಾಳಾಗಿ ವರ್ಷ ಕಳೆದರೂ ದುರಸ್ತಿ ಇಲ್ಲದೆ ವಾಹನ ಸವಾರರು ತಗ್ಗು ಗುಂಡಿಗಳ ಮದ್ಯೆ ಸಾಗಲು ನಿತ್ಯ ಪರಿತಪಿಸುವಂತಾಗಿದೆ.

ಬಿ.ಜಿ.ಕೆರೆಯ ಕೆಳಗಿನ ಬಸ್ ನಿಲ್ದಾಣದಿಂದ ಸಾಗಿ ಬರುವ ಹೆದ್ದಾರಿ ಸುಮಲತಾ ಬಸ್ ಮಾಲೀಕರ ಮನೆಯ ಮುಂಬಾಗ, ರಾಷ್ಟ್ರೀಯ ಹೆದ್ದಾರಿಯ ಅಂಡರ್ ಪಾಸ್ ಸಮೀಪದ ಬೋವಿ ಕಾಲೋನಿಯ ರಸ್ತೆಯ ಹಮ್ಸ್ ಸಮೀಪ, ಅನತೀ ದೂರದ ಸೋಲಾರ್ ಪಾರ್ಕ್ ಸಮೀಪದಲ್ಲಿ ಡಾಂಬರು ಕಿತ್ತು ಸಂಪೂರ್ಣವಾಗಿ ಹಾಳಾಗಿದೆ. ಆಳುದ್ದದ ಗುಂಡಿಗಳಿಂದ ವಾಹನ ಸವಾರರು ನಿತ್ಯ ಪರಿತಪಿಸುವಂತಾಗಿದೆ. ಇನ್ನು ಸೋಲಾರ್ ಪಾರ್ಕ್ ಸಮೀಪದಲ್ಲಿ ತುಂಗಭದ್ರಾ ಹಿನ್ನೀರಿನ ಕಾಮಗಾರಿಗೆ ಹೆದ್ದಾರಿಗೆ ಅಡ್ಡಲಾಗಿ ಅಗೆದಿರುವ ರಸ್ತೆ ವರ್ಷ ಕಳೆದರೂ ಇಂದಿಗೂ ದುರಸ್ತಿಯಾಗಿಲ್ಲ.

ಹೇಳಿಕೇಳಿ ರಾಜ್ಯ ಹೆದ್ದಾರಿ 65 ಇದಾಗಿದ್ದು ಮೊಳಕಾಲ್ಮುರು, ಕೊಂಡ್ಲಹಳ್ಳಿ, ಕೊನಸಾಗರ, ಮರ್ಲಹಳ್ಳಿ, ನೇತ್ರನಹಳ್ಳಿ, ಚಳ್ಳಕೆರೆ ತಾಲೂಕಿನ ಹನುಮಂತನ ಹಳ್ಳಿ, ಗೌರ ಸಮುದ್ರ, ಒಬ್ಬಣ್ಣನ ಹಳ್ಳಿ ಸೇರಿದಂತೆ ಪಕ್ಕದ ಆಂಧ್ರದ ನೂರಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತದೆ.

ಇದರಿಂದಾಗಿ ದಿನದ 24ಗಂಟೆ ವಾಹನ ಸಂಚಾರ ವಿರುತ್ತದೆ. ದ್ವಿಚಕ್ರ ವಾಹನ, ಅಟೋ ಸೇರಿದಂತೆ ಬಾರಿ ತೂಕದ ವಾಹನಗಳ ಓಡಾಟ ಅಧಿಕವಾಗಿರುತ್ತದೆ ಈಗಿದ್ದರೂ ಗ್ರಾಮದ ಮಧ್ಯ ಬಾಗದಲ್ಲಿಯೇ ಹೆದ್ದಾರಿ ಅದ್ವಾನ ಗೊಂಡರೂ ಸಂಬಂದಿಸಿದ ಇಲಾಖೆ ದುರಸ್ತಿಗೆ ಮುಂದಾಗದಿರುವುದು ಸಮಸ್ಯೆಯನ್ನು ಇನ್ನಷ್ಟು ಹೆಚ್ಚಾಗುವಂತಾಗಿದೆ.

ಶಾಲಾ ಮಕ್ಕಳನ್ನು ತುಂಬಿಕೊಂಡು ಸಾಗುವ ಆಟೋಗಳು, ಸರ್ಕಾರಿ ಸಾರಿಗೆ, ಖಾಸಗೀ ಬಸ್ ಗಳು ಗರ್ಭಿಣಿ ಬಾಣಂತಿಯರನ್ನು ಹೊತ್ತು ತರುವ ತುರ್ತು ವಾಹನಗಳು ಸೇರಿದಂತೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಿವೆ. ಗುಂಡಿಗಳನ್ನು ದಾಟುವಾಗ ಸ್ವಲ್ಪ ಯಮಾರಿದರೂ ಅಪಘಾತಗಳು ಸಂಭವಿಸುವುದನ್ನು ಅಲ್ಲಗಳೆಯುವಂತಿಲ್ಲ.

ಮಳೆಗಾಲದಲ್ಲಿ ರಸ್ತೆ ಇನ್ನಷ್ಟು ಹದಗೆಡುತ್ತದೆ. ಸ್ಥಳದಲ್ಲಿ ಕೆಸರು ಗದ್ದೆಯಂತಾಗುತ್ತದೆ. ನೀರು ನಿಂತು ಗುಂಡಿಗಳ ಆಳ ತಿಳಿಯದೆ ಹಲವು ಬಾರಿ ದ್ವಿಚಕ್ರ ವಾಹನಗಳು ಅಪಘಾತ ಸಂಭವಿಸಿ ಗಾಯಗೊಂಡಿರುವ ಘಟನೆಗಳು ಜರುಗಿವೆ. ವಾಹನ ಸಾಗುವಾಗ ಕೊಚ್ಚೆ ನೀರು ರಸ್ತೆ ಪಕ್ಕದ ಮನೆಗಳಿಗೂ ಚಿಮ್ಮುತ್ತಿದೆ. ಹದಗೆಟ್ಟ ರಸ್ತೆಯ ಕುರಿತು ಸಾರ್ವಜನಿಕರು ಹಿಡಿ ಶಾಪ ಹಾಕುವುದು ಕಾಣ ಸಿಗುತ್ತಿದೆ. ಇನ್ನಾದರೂ ಸಂಬಂದಿಸಿದ ಲೋಕಪಯೋಗಿ ಇಲಾಖೆ ಅಧಿಕಾರಿಗಳು ಹೆದ್ದಾರಿಯಲ್ಲಿನ ಗುಂಡಿಗಳನ್ನು ದುರಸ್ತಿ ಗೊಳಿಸಲು ಮುಂದಾಗುತ್ತರಾ ಎಂಬುದನ್ನು ಕಾದು ನೋಡಬೇಕಿದೆ.