ಎಸ್.ಎಂ. ಸೈಯದ್
ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಪಟ್ಟಣಕ್ಕೆ ಪ್ರತಿದಿನ ನೆರೆಯ ತಾಲೂಕಿನ ಅನೇಕ ಗ್ರಾಮಗಳ ನೂರಾರು ವಾಹನಗಳು ಸ್ಥಳೀಯ ರಸ್ತೆ ಸೇರಿ ಪ್ರಮುಖ ವೃತ್ತಗಳಲ್ಲಿ ಸಂಚಾರ ಮಾಡುತ್ತವೆ. ಆದರೆ ಸರಾಸರಿ ಹತ್ತು ವಾಹನಗಳಲ್ಲಿ ೧ ವಾಹನದ ನೋಂದಣಿ ಸಂಖ್ಯೆ ಮರೆಮಾಚಿದ್ದು ಹಾಗೂ ಮತ್ತೊಂದು ಬೈಕ್ ನಂಬರ್ ಪ್ಲೇಟ್ ಇಲ್ಲದಿರುವುದು ಕಂಡುಬರುತ್ತಿದೆ. ಆದರೆ ಸಂಬಂಧಿಸಿದ ಅಧಿಕಾರಿಗಳು ವಾಹನ ನೋಂದಣಿ ಸಂಖ್ಯೆ ತಿರುಚುತ್ತಿರುವವ ವಾಹನಗಳತ್ತ ಗಮನ ಹರಿಸುತ್ತಿಲ್ಲ. ಪರಿಣಾಮ ವಾಹನ ನೋಂದಣಿ ಸಂಖ್ಯೆ ತಿರುಚುವ ಕ್ರಿಯೆ ಸಾಂಕ್ರಾಮಿಕದಂತೆ ಹರಡುವ ಸಾಧ್ಯತೆ ದಟ್ಟವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.ಸಫಲವಾಗದ ಸುಗಮ ಸಂಚಾರ: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ, ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ತಂತ್ರಜ್ಞಾನ ಅಳವಡಿಸಿಕೊಂಡಿದ್ದು, ಪಟ್ಟಣದ ಹೃದಯ ಭಾಗವಾಗಿರುವ ಕಾಲಕಾಲೇಶ್ವರ ವೃತ್ತ ಸೇರಿ, ದುರ್ಗಾ ವೃತ್ತ, ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮುಂಭಾಗ ಹಾಗೂ ಪ್ರಮುಖ ರಸ್ತೆ ಸೇರಿ ಅಂದಾಜು ೧೯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.
ಹೀಗಾಗಿ ಪಟ್ಟಣದ ಪ್ರಮುಖ ವೃತ್ತ, ರಸ್ತೆ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಸೇರುವ ಜನದಟ್ಟನೆ ಮತ್ತು ಉಂಟಾಗುವ ವಾಹನ ದಟ್ಟಣೆಯ ದೃಶ್ಯಗಳನ್ನು ಪೊಲೀಸ್ ಠಾಣೆಯಲ್ಲಿನ ಟಿವಿ ಪರದೆಯಲ್ಲಿ ವೀಕ್ಷಿಸಲಾಗುತ್ತಿದೆ. ಜನದಟ್ಟಣೆ ಹಾಗೂ ವಾಹನ ದಟ್ಟಣೆ ನಿವಾರಣೆಗೆ ಅಗತ್ಯ ಸಂದೇಶವನ್ನು ಕ್ಷಣಾರ್ಧದಲ್ಲಿ ಪೊಲೀಸ್ ಠಾಣೆಯ ಮೂಲಕ ಕರ್ತವ್ಯದಲ್ಲಿನ ಸಿಬ್ಬಂದಿಗೆ ರವಾನಿಸಿ ಸುಗಮ ಸಂಚಾರಕ್ಕೆ ಪರಿಹಾರ ಕಂಡುಕೊಳ್ಳಲು ಸಿಟಿ ಕ್ಯಾಮೆರಾ ದೃಶ್ಯಗಳು ಸಹಕಾರಿಯಾಗಿವೆ. ಆದರೆ ಕಾಲಕಾಲೇಶ್ವರ ವೃತ್ತ ಸೇರಿ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಅಡ್ಡಾದಿಡ್ಡಿ ನಿಲ್ಲುವ ವಾಹನಗಳು ಹಾಗೂ ಸಂಚಾರ ನಿಯಮಗಳನ್ನು ಗಾಳಿಗೆ ತೂರುತ್ತಿರುವ ಪರಿಣಾಮ ಪಟ್ಟಣದಲ್ಲಿ ಸುಗಮ ಸಂಚಾರದ ಅರ್ಥ ತಿಳಿಯುತ್ತಿಲ್ಲ ಎಂದು ವಾಹನ ಸವಾರರು ಗೋಳಿಡುತ್ತಿದ್ದಾರೆ.ರಸ್ತೆ ಅತಿಕ್ರಮಣ: ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಅಳವಡಿಸಿರುವ ಟ್ರಾಫಿಕ್ ಸಿಗ್ನಲ್ ಯಾವಾಗ ಆರಂಭ ಇರುತ್ತದೆ, ಯಾವಾಗ ಬಂದ್ ಆಗುತ್ತದೆ ಎಂಬುದು ವಾಹನ ಸವಾರರಿಗೆ ತಿಳಿಯದಂತಾಗಿದೆ. ರೋಣ, ಕುಷ್ಟಗಿ, ಬಸ್ ನಿಲ್ದಾಣ ಸೇರಿ ಜೋಡು ರಸ್ತೆಯಲ್ಲಿನ ಪಾದಚಾರಿಗಳ ರಸ್ತೆಯನ್ನು ಮನಸೋ ಇಚ್ಛೆ ಅಂಗಡಿಕಾರರು ಅತಿಕ್ರಮಣ ಮಾಡಿದ್ದು, ಪಾದಚಾರಿಗಳ ರಸ್ತೆ ಮಾಯವಾಗಿದೆ.
ಪಟ್ಟಣದಲ್ಲಿ ಕೆಲವರು ಬೈಕ್ ಗಳ ನೋಂದಣಿ ಸಂಖ್ಯೆ ತಿರುಚುವುದು ಹಾಗೂ ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಆಗುವ ತಪ್ಪುಗಳ ಬಗ್ಗೆ ಜಾಗೃತಿ ಜತೆಗೆ ಅಂತಹ ವಾಹನಗಳ ಮಾಲೀಕರ ಮೇಲೆ ಕಾನೂನು ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಬೇಕು. ಅಲ್ಲದೆ ಸಂಚಾರ ನಿಯಮಗಳ ಪಾಲನೆ ವಿಷಯದಲ್ಲಿ ಪೊಲೀಸರು ಮುಕ್ತವಾಗಿ ಕರ್ತವ್ಯ ನಿರ್ವಹಿಸಲು ರಾಜಕೀಯ ವ್ಯಕ್ತಿಗಳು ಹಾಗೂ ಪ್ರತಿಯೊಬ್ಬರೂ ಪೊಲೀಸರಿಗೆ ಸಹಕರಿಸಬೇಕು ಎಂದು ಗಜೇಂದ್ರಗಡ ವಕೀಲ ಎಂ.ಎಸ್. ಹಡಪದ ಹೇಳಿದರು.