- ಬಿಜೆಪಿ ಮಿತ್ರ ಪಕ್ಷಗಳ ಸೋಲಿಸಬೇಕು: ಗುರುಮೂರ್ತಿ - - -
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅವರು, ಪ್ರತಿ ಪ್ರಜೆಯೂ ಸಂವಿಧಾನಬದ್ಧ ಮತದಾನದ ಹಕ್ಕು ಚಲಾಯಿಸಬೇಕು. ಸಮಾನತೆ, ಬಹುತ್ವ, ಒಕ್ಕೂಟ, ಸಂವಿಧಾನದ ಸಂಪೂರ್ಣ ಅನುಷ್ಠಾನಕ್ಕಾಗಿ ನಿರ್ಧರಿಸಿರುವ ಕಾಂಗ್ರೆಸ್ ನೇತೃತ್ವದ ಐಎನ್ಡಿಐಎ ಗೆಲ್ಲಿಸಿ, ಸಂವಿಧಾನ ಬದಲಿಸಲು ಹೊರಟ ಪಕ್ಷಗಳನ್ನು ಸೋಲಿಸಬೇಕು ಎಂದರು.
ಕಾಂಗ್ರೆಸ್ ಪಕ್ಷವು ಸಂವಿಧಾನ ಸಂರಕ್ಷಿಸಿ, ಸಂಪೂರ್ಣ ಅನುಷ್ಠಾನಗೊಳಿಸುವುದಾಗಿ ಘೋಷಿಸಿದೆ. ಎಲ್ಲ ಜಾತಿ, ಧರ್ಮಗಳ, ವ್ಯಕ್ತಿಗಳ ಜನಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆ, ಶೋಷಿತ ಬಹುಜನರಿಗೆ ಶೇ.50 ಮೀರಿ ಮೀಸಲಾತಿ ನೀಡಲು ಸಂವಿಧಾನಕ್ಕೆ ತಿದ್ದುಪಡಿ, ಕೇಂದ್ರ ಬಜೆಟ್ನಲ್ಲಿ ಎಸ್ಸಿ-ಎಸ್ಟಿ ಮತ್ತು ಟಿಎಸ್ಪಿ ಕಾಯ್ದೆ ಜಾರಿ, ಪಂಚನ್ಯಾಯಗಳಾದ ಯುವ ನ್ಯಾಯ, ರೈತ ನ್ಯಾಯ, ಮಹಿಳಾ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆಯ ನ್ಯಾಯಗಳ ಭರವಸೆ ಒಳಗೊಂಡ ನ್ಯಾಯಪತ್ರ ಪ್ರಕಟಿಸಿ, ಆರ್ಥಿಕ ಅಸಮಾನತೆ ನಿವಾರಿಸುವ ಘೋಷಣೆ ಮಾಡಿದೆ. ಉತ್ತರ ಕರ್ನಾಟಕದ 14 ಕ್ಷೇತ್ರ ಒಳಗೊಂಡಂತೆ ರಾಜ್ಯದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಒಕ್ಕೂಟದಿಂದ ದುಂಡು ಮೇಜಿನ ಸಭೆ, ವಿಚಾರ ಸಂಕಿರಣ, ಸಂವಾದ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ರಾಜ್ಯ ಕಾರ್ಯಾಧ್ಯಕ್ಷ ಎಂ.ಗೋವಿಂದರಾಜ, ಎ.ಗೋಪಾಲ್, ಕುಂದವಾಡದ ಮಂಜುನಾಥ, ಬಿ.ಎ.ಕಾಟ್ಕೆ, ವಿಜಯಮ್ಮ, ಚಿತ್ರಲಿಂಗಪ್ಪ, ಪ್ರದೀಪ, ಮಂಜುನಾಥ, ಹಾಲುವರ್ತಿ ಮಹಾಂತೇಶ, ಪಿ.ಜೆ.ಮಹಾಂತೇಶ ಇತರರು ಇದ್ದರು.
ದಾವಣಗೆರೆಯಲ್ಲಿ ಮಂಗಳವಾರ ಡಿಎಸ್ಎಸ್ ಸಂಘಟನೆಗಳ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಎಂ.ಗುರುಮೂರ್ತಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.