ನರಗುಂದ: ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ನಾಲ್ಕು ಬಾರಿ ಪಿ.ಸಿ. ಗದ್ದಿಗೌಡರು ಆಯ್ಕೆಯಾಗಿದ್ದರೂ ಈ ಭಾಗದ ಸಮಸ್ಯೆಯ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ, ಅವರ ಸ್ಥಿತಿ ಗಂಡಸೂ ಅಲ್ಲ ಹೆಂಗಸು ಅಲ್ಲ ಎನ್ನುವ ಹಾಗೆ ಆಗಿದೆ ಎಂದು ಸಚಿವ ಶಿವಾನಂದ ಪಾಟೀಲ ಕೀಳು ಹೇಳಿಕೆ ನೀಡಿದ್ದಾರೆ.
ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತರು ಮಹದಾಯಿ, ಕಳಸಾ-ಬಂಡೂರಿ ಜಾರಿಗಾಗಿ ಹಲವು ವರ್ಷಗಳಿಂದ ಹೋರಾಡುತ್ತಿದ್ದಾರೆ. ಈ ಕ್ಷೇತ್ರದಿಂದ ಹೆಚ್ಚಿನ ಮತ ಪಡೆದು ಆಯ್ಕೆಯಾದ ಪಿ.ಸಿ. ಗದ್ದಿಗೌಡರ ಅಧಿವೇಶನದಲ್ಲಿ ಮಹದಾಯಿ ಅಥವಾ ಕೃಷ್ಣಾ ಯೋಜನೆ ಬಗ್ಗೆ ಮಾತನಾಡಿಲ್ಲ. ಗದ್ದಿಗೌಡರು ನನಗೆ ಆತ್ಮೀಯ ಸ್ನೇಹಿತರು. ಆದರೆ ಈ ವ್ಯಕ್ತಿಗೆ ಗಂಡಸೂ ಅಲ್ಲ, ಹೆಂಗಸೂ ಅಲ್ಲ ಎನ್ನುವ ಶಬ್ದ ಸೂಕ್ತವಾಗುತ್ತದೆ ಎಂದರು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿ, ಈ ದೇಶಕ್ಕೆ ಸ್ವಾತಂತ್ರ್ಯ ತಂದ ಕೊಟ್ಟ ಪಕ್ಷ ಕಾಂಗ್ರೆಸ್. ಆದರೆ ಬಿಜೆಪಿಯವರು ದೇಶಕ್ಕೆ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಾರೆ. ಈ ದೇಶದಲ್ಲಿ ಜಲಾಶಯ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ, ತಂತ್ರಜ್ಞಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಮಾಡಿದೆ. ಮೇಲಾಗಿ ಗಾಂಧಿ ಮನೆತನದವರು ದೇಶಕ್ಕಾಗಿ ಜೀವ ತ್ಯಾಗ ಮಾಡಿದ್ದಾರೆ ಎಂದರು.ಬಿಜೆಪಿ ವಿರೋಧ ಪಕ್ಷದ ನಾಯಕರ ಮೇಲೆ ಐಟಿ, ಸಿಬಿಐ ಸಂಸ್ಥೆಗಳನ್ನು ಬಿಟ್ಟು, ಪ್ರಕರಣ ದಾಖಲಿಸಿ ಜೈಲಿಗೆ ಹಾಕಿಸುತ್ತಿದೆ. ಈ ಬಾರಿ ಮತದಾರರು ಜಾಗ್ರತೆಯಿಂದ ಮತದಾನ ಮಾಡಬೇಕು. ಏಕೆಂದರೆ ಬಿಜೆಪಿಯವರು ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ಕಗ್ಗೂಲೆ ಮಾಡಲು ಹೊರಟಿದ್ದಾರೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರು ಇದ್ದರು.