ಸಿದ್ದಾಪುರ: ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಏಳಿಗೆಯನ್ನು ಕೆಲವರಿಂದ ಸಹಿಸಲಾಗುತ್ತಿಲ್ಲ. ಹಾಗಾಗಿಯೇ ಈ ಷಡ್ಯಂತ್ರ ಹೂಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಕರೆದಿರುವುದು ಮತ್ತೊಮ್ಮೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನ. ಅವರಿಗೆ ಬೂಕರ್ ಪ್ರಶಸ್ತಿ ದೊರೆತಿರುವುದಕ್ಕೆ ತುಂಬ ಖುಷಿಯಿದೆ. ಸಿದ್ದರಾಮಯ್ಯನವರ ಆಹ್ವಾನವನ್ನು ಬಾನು ಮುಷ್ತಾಕ್ ತಿರಸ್ಕರಿಸಬೇಕು. ಬಾನು ತಮ್ಮ ಮುತ್ಸದ್ಧಿ ಹಾಗೂ ಹಿರಿತನವನ್ನು ತೋರಿಸಬೇಕು ಎಂದರು.
ಜೆಡಿಎಸ್ ಪ್ರಮುಖ ಉಪೇಂದ್ರ ಪೈ ಮಾತನಾಡಿ, ಧರ್ಮದ ಮೇಲೆ ಅಪಪ್ರಚಾರವಾಗುತ್ತಿರುವ ಈ ಸಂದರ್ಭದಲ್ಲಿ ನಾವು ಹಿಂದೂಗಳೆಲ್ಲ ಒಟ್ಟಾಗಬೇಕು. ಧಾರ್ಮಿಕ ಕ್ಷೇತ್ರದಲ್ಲಿ ಹೊರತುಪಡಿಸಿ ಶಿಕ್ಷಣ ಕ್ಷೇತ್ರದಲ್ಲೂ ಶ್ರೀಕ್ಷೇತ್ರ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಕಮ್ಯುನಿಸ್ಟ್, ಎಡಪಂಥೀಯ ಮತ್ತು ಅಪಪ್ರಚಾರದಿಂದಾಗಿ ನಮ್ಮಲ್ಲಿ ಒಗ್ಗಟ್ಟು ಇಲ್ಲವಾಗಿದೆ ಎಂದರು.ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ಕೆ.ಜಿ. ನಾಯ್ಕ ಮಾತನಾಡಿ, ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳನ್ನು ಅಪವಿತ್ರ ಮಾಡಲು ಅನೇಕ ದುಷ್ಟ ಶಕ್ತಿಗಳು ತೊಡಗಿಕೊಂಡಿವೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಮಡಿವಾಳ ಮಾತನಾಡಿ, ನಾವೆಲ್ಲ ಒಟ್ಟಾಗುವಂತಹ ಪರಿಸ್ಥಿತಿ ಈಗ ಬಂದಿದೆ. ಧರ್ಮಸ್ಥಳದ ಪವಿತ್ರತೆಗೆ ಧಕ್ಕೆ ತರುವ ಹಾಗೂ ಹಿಂದೂಗಳನ್ನು ಒಡೆಯುವ ನಿಟ್ಟಿನಲ್ಲಿ ಷಡ್ಯಂತ್ರ ನಡೆಯುತ್ತಿದೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕೆಲವು ನೀಚ ರಾಜಕಾರಣಿಗಳಿಂದ ಈ ಕೃತ್ಯ ನಡೆಯಿತು ಎಂದರು.ಪಟ್ಟಣದ ರವೀಂದ್ರನಗರದ ಗಂಗಾಂಬಿಕಾ ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ತಹಸೀಲದಾರ ಕಚೇರಿಯೆದುರು ಸಮಾವೇಶಗೊಂಡಿತು. ಪ್ರತಿಭಟನೆಯಲ್ಲಿ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಧರ್ಮಸ್ಥಳದ ಅಪಾರ ಭಕ್ತರು ಪಾಲ್ಗೊಂಡಿದ್ದರು.