ಸಂಸದ ಪ್ರತಾಪ್‌ ಸಿಂಹ ಅಪ್ಪಟ ಹಿಂದುತ್ವವಾದಿ

KannadaprabhaNewsNetwork |  
Published : Dec 16, 2023, 02:00 AM IST
ಪೋಟೋ: 15ಎಸ್‌ಎಂಜಿಕೆಪಿ04: ಕೆ.ಎಸ್‌.ಈಶ್ವರಪ್ಪ  | Kannada Prabha

ಸಾರಾಂಶ

ಪಾರ್ಲಿಮೆಂಟ್‌ಗೆ ಸ್ಮೋಕ್‌ ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ. ಸಂಸದ ಪ್ರತಾಪ್ ಸಿಂಹರಿಗೆ ಪರ ಬ್ಯಾಟಿಂಗ್‌, ಜಗದೀಶ್‌ ಶೆಟ್ಟರ್‌ ಸಿಎಂ ಬಿಜೆಪಿಗೆ ಬರುವ ಬಗ್ಗೆ ಪ್ರತಿಕ್ರಿಯೆ.

ಪಾರ್ಲಿಮೆಂಟ್‌ಗೆ ಸ್ಮೋಕ್‌ ಬಾಂಬ್‌ ಪ್ರಕರಣ ಸಂಬಂಧ ಈಶ್ವರಪ್ಪ ಪ್ರತಿಕ್ರಿಯೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪಾರ್ಲಿಮೆಂಟ್‌ಗೆ ಸ್ಮೋಕ್‌ ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಸ್‌ ಕೊಟ್ಟ ಮಾತ್ರಕ್ಕೆ ಕಾಂಗ್ರೆಸ್‌ನವರು ಸಂಸದ ಪ್ರತಾಪ್ ಸಿಂಹರಿಗೆ ದೇಶದ್ರೋಹಿ ಪಟ್ಟ ಕಟ್ಟಲು ಹೊರಟಿದ್ದಾರೆ. ಅವರು ದೇಶದ್ರೋಹಿ ಅಲ್ಲ, ಅಪ್ಪಟ ಹಿಂದು ಭಕ್ತ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಸತ್ತಿನ ಮೇಲೆ ಇಂತಹ ಘಟನೆ ಆಗಬಾರದಿತ್ತು. ಅದನ್ನು ಖಂಡಿಸುತ್ತೇನೆ. ಸಂಸದ ಪ್ರತಾಪ್‌ ಸಿಂಹ ಪಾಸ್ ಕೇಳಿದಾಗ ಕೊಟ್ಟಿದ್ದಾರೆ. ಅವನು ಒಳ್ಳೆಯವನಾ, ಕೆಟ್ಟವನಾ, ದ್ರೋಹಿನಾ ಅಂತಾ ಗೊತ್ತಿರಲ್ಲ. ಸಾವಿರಾರು ಜನಕ್ಕೆ ಎಲ್ಲರೂ ಪಾಸ್ ಕೊಡ್ತಾರೆ. ಇವರು ಅದೇ ರೀತಿ ಪಾಸ್ ಕೊಟ್ಟಿದ್ದಾರೆ ಎಂದು ಸಮರ್ಥಿಸಿಕೊಂಡರು.

ಈ ಹಿಂದೆ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆದಾಗ ಶಾಸಕರ ಕುರ್ಚಿಯ ಮೇಲೆ ಹೋಗಿ ಯಜಮಾನ ಮನುಷ್ಯ ಕುಳಿತಿದ್ದರು. ಕೆಲವು ಆಚಾತುರ್ಯಗಳು ನಡೆಯುತ್ತವೆ. ಬೇಕು ಅಂತ ನಡೆಸುವುದಕ್ಕೂ, ಹಾಗೆಯೇ ಆಗುವುದಕ್ಕೂ ವ್ಯತ್ಯಾಸ ಇದೆ ಎಂದರು.

ಶೆಟ್ಟರ್‌ ಸಿಎಂ ಆಗ್ತಾರೆ ಅಂತ ಅಂದುಕೊಂಡಿದ್ದರಾ?:

ಶೆಟ್ಟರ್ ಅವರನ್ನು ನಾನು ಬಿಜೆಪಿಗೆ ಕರೆದುಕೊಂಡು ಬರುತ್ತೀನಿ ಅಂತಾ ಹೇಳಿದ್ನಾ. ಅದು ನನ್ನ ಕೆಲಸ ಅಲ್ಲ. ನನಗೆ ಮಾಡಲು ಬೇಕಾದಷ್ಟು ಕೆಲಸ ಇದೆ. ಅವರ ಮನೆಗೆ ಹೋಗಿ ನೀನು ಬಂದ್ರೆ ದೇಶ ಉಳಿಯೋದು, ಪಕ್ಷ ಉಳಿಯೋದು ಅಂತಾ ಹೇಳಿದ್ನಾ ಎಂದು ಶೆಟ್ಟರ್ ಹೇಳಿಕೆ ವಿಚಾರಕ್ಕೆ ಕೆ.ಎಸ್‌.ಈಶ್ವರಪ್ಪ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ಸಿನವರು ಸ್ವಾರ್ಥಿಗಳು. ಶೆಟ್ಟರ್ ರಕ್ತದಲ್ಲಿ ಹಿಂದು ರಕ್ತ ಹರಿಯುತ್ತಿದೆ. ಅವರ ತಂದೆಯವರು ಹಿಂದುಪರ ಇದ್ದವರು. ಅವರಿಗೆ ಆ ಪಕ್ಷ ಒಗ್ಗುವುದಿಲ್ಲ, ಹೀಗಾಗಿ ಬರುತ್ತಾರೆ ಎಂದಿದ್ದೇನೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗ್ತೀನಿ ಅಂತ ಜೀವನದಲ್ಲಿ ಅಂದುಕೊಂಡಿದ್ರಾ. ಈಗ ಕಾಂಗ್ರೆಸ್‌ನವರು ಅವರನ್ನು ಸಿಎಂ, ಪಿಎಂ ಮಾಡ್ತಾರಾ ನೋಡೋಣ ಎಂದು ಕಿಡಿಕಾರಿದರು.

75 ವರ್ಷದ ನಂತರ ಸ್ವಾತಂತ್ರ್ಯದ ಸಾರ್ಥಕ ದೊರೆಯುತ್ತಿದೆ. ಮಥುರಾ ದೇವಸ್ಥಾನ ಸಮಿತಿ ಸರ್ವೇ ಮಾಡಬೇಕು ಅಂತಾ ಕೋರ್ಟ್ ತೀರ್ಪು ನೀಡಿದೆ. ಪ್ರಪಂಚದ ಕೃಷ್ಣ ಭಕ್ತರಿಗೆ ಸಂತೋಷವಾಗಿದೆ. ಕಾಶಿ ವಿಶ್ವನಾಥನ ಪಕ್ಕದಲ್ಲಿ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ. ಅಲ್ಲಿಯೂ ಕೋರ್ಟ್ ಆದೇಶದಂತೆ ಸರ್ವೇ ನಡೆಯುತ್ತಿದೆ. ರಾಮಮಂದಿರ ನಿರ್ಮಾಣ ಸಂಪೂರ್ಣ ಮುಗಿದಿದೆ. ಜನವರಿ 23ಕ್ಕೆ ರಾಮ ಮಂದಿರ ಉದ್ಘಾಟನೆ ಆಗುತ್ತದೆ. ಆರ್ಟಿಕಲ್ 370 ರದ್ದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಲಭಿಸಿದೆ ಎಂದರು.

ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ನಾಮಕರಣಕ್ಕೆ ಹುನ್ನಾರ ನಡೆಯುತ್ತಿದೆ. ಕೆಲವರು ಟಿಪ್ಪು ಹುಟ್ಟಿದವರಿಗೆ ಆಡಿದ್ದಂಗೆ ಆಡ್ತಿದ್ದಾರೆ. ಅವರೆಲ್ಲಾ ಪಾಕಿಸ್ತಾನದಲ್ಲಿ ಹುಟ್ಟಬೇಕಿತ್ತು. ಅವರಿಗೆಲ್ಲಾ ಇವತ್ತಲ್ಲ ನಾಳೆ ಉತ್ತರ ಖಂಡಿತ ಸಿಗುತ್ತದೆ ಎಂದು ಹರಿಹಾಯ್ದರು.

ಕೇರಳ ಸರ್ಕಾರ ಮೂಲಸೌಕರ್ಯ ಒದಗಿಸಲಿ :

ಶಬರಿಮಲೆ ಭಕ್ತರಿಗೆ ಮೂಲಭೂತ ಸೌಲಭ್ಯ ಕೊಡುವುದರಲ್ಲಿ ಕೇರಳ ಸರಕಾರ ವಿಫಲವಾಗಿದೆ. ನಾನೂ ಕೂಡ ಎರಡು ಬಾರಿ ಶಬರಿಮಲೆಗೆ ಹೋಗಿದ್ದೇನೆ. ಆಗ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಈಗ ಅಲ್ಲಿ ಹಿಂದು ವಿರೋಧಿ ಕೃತ್ಯಗಳು ವ್ಯವಸ್ಥಿತವಾಗಿ ನಡೆಯುತ್ತಿವೆ. ಕಳೆದ ವರ್ಷ ಶಬರಿಮಲೆ ಭಕ್ತರಿಂದ ₹೩೧೦ ಕೋಟಿ ಹಣ ಸಂಗ್ರಹವಾಗಿದೆ. ಈ ಹಣವನ್ನು ಮೂಲಭೂತ ಸೌಕರ್ಯಕ್ಕಾಗಿ ಬಳಸಬೇಕು. ಕುಡಿಯುವ ನೀರು, ರಸ್ತೆ ವ್ಯವಸ್ಥೆ ಮಾಡಬೇಕು ಎಂದು ಕೇರಳ ಸರ್ಕಾರವನ್ನು ಆಗ್ರಹಿಸಿದರು.

ಕೇರಳ ಸರ್ಕಾರ ಬೇಕು ಅಂತಾನೆ ಭಕ್ತರಿಗೆ ತೊಂದರೆ ಕೊಡುತ್ತಿದೆ. ಅಯ್ಯಪ್ಪ ಸ್ವಾಮಿ ಭಕ್ತರಿಗೆ ಆಗಿರುವ ತೊಂದರೆ ಬಗ್ಗೆ ಸರ್ವೇ ಮಾಡಿ ರಿಪೋರ್ಟ್ ಕೊಡಿ ಅಂತಾ ಕೋರ್ಟ್ ಆದೇಶ ಮಾಡಿದೆ. ಆನ್ ಲೈನ್ ವ್ಯವಸ್ಥೆ ಇದ್ದರೂ ಆನ್ ಲೈನ್ ವ್ಯವಸ್ಥೆಯಲ್ಲಿ ಮೋಸ ಮಾಡ್ತಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿ ಕೇರಳ ಸರ್ಕಾರದ ಮುಜರಾಯಿ ಇಲಾಖೆ ಕೈಯಲ್ಲಿದೆ. ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಕೇರಳ ಸರ್ಕಾರ ಮುಂದಾಗಬೇಕು ಎಂದರು.

ಇಲ್ಲದಿದ್ದರೆ ರಾಜ್ಯದ ಅಯ್ಯಪ್ಪ ಭಕ್ತರು ಸೇರಿಕೊಂಡು ಕೇರಳದಲ್ಲಿ ದೊಡ್ಡ ಆಂದೋಲನ ನಡೆಸಬೇಕಾಗುತ್ತದೆ. ಕೇರಳ ಸರ್ಕಾರ ಬೇಕು ಅಂತಾನೇ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು. ದೇವಸ್ಥಾನವನ್ನು ಕೇಂದ್ರ ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳಬೇಕು. ಮೃತಪಟ್ಟ ಮಗುಗೆ ಹಾಗೂ ಗಾಯಗೊಂಡ ಭಕ್ತನಿಗೆ ಕೇರಳ ಸರ್ಕಾರ ಪರಿಹಾರ ಕೊಡಬೇಕು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎನ್.ಡಿ ಸತೀಶ್‌, ಜಗದೀಶ್ ಮತ್ತಿತರರು ಇದ್ದರು.

- - -

15ಎಸ್‌ಎಂಜಿಕೆಪಿ04: ಕೆ.ಎಸ್‌.ಈಶ್ವರಪ್ಪ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ