ಕನ್ನಡಪ್ರಭ ವಾರ್ತೆ ಉಡುಪಿ
ರಾಜೀವ ಗಾಂಧಿ ವಸತಿ ನಿಗಮದಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕ ಬಿ.ಆರ್. ಪಾಟೀಲರೇ ಹೇಳಿದ್ದಾರೆ. ರಾಜಕಾರಣ ಏನೇ ಇರಲಿ ಪಾಟೀಲರು ಕಂಡದ್ದು ಕಂಡಹಾಗೆ ಹೇಳುವವರು, ಆದ್ದರಿಂದ ಭ್ರಷ್ಟಾಚಾರ ನಡೆದಿರುವುದು ಕನ್ನಡಿಯಷ್ಟೇ ಸ್ಪಷ್ಟವಾಗಿದೆ. ತಕ್ಷಣ ಮುಖ್ಯಮಂತ್ರಿ ಅವರು ವಸತಿ ಮಂತ್ರಿಯ ರಾಜಿನಾಮೆ ಪಡೆಯಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಹ ಭ್ರಷ್ಟಾಚಾರವೇ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಅವರು ಹೇಳಿದ್ದಾರೆ. ಆದರೆ ಬಡವರಿಗಾದ ಅನ್ಯಾಯ ಸಹಿಸುವುದಿಲ್ಲ ಎಂದು ಸಿಎಂ ಹೇಳುತ್ತಾರೆ, ನಿಗಮದ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆ ಮಾಡುತ್ತಾರೆ, ತಮ್ಮ ತಾಕತ್ತು ತೋರಿಸುತ್ತಾರೆ ಎಂದು ಭಾವಿಸಿದ್ದೆ, ಆದರೆ ಅವರು ಹಾಗೇ ಮಾಡಿಲ್ಲ, ಅವರ ಈ ನಿರ್ಲಿಪ್ತತೆ ಸರಿಯಲ್ಲ ಎಂದರು.ಈ ಹಗರಣದ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತನಾಡಿ ಹೋರಾಟ ಕೈಗೆತ್ತಿಕೊಳ್ಳುತ್ತೇವೆ, ಬಿಜೆಪಿ ರಾಜ್ಯಾದ್ಯಂತ ಹೋರಾಟ ಮಾಡಲಿದೆ ಎಂದರು. ಕಾಂಗ್ರೆಸ್ ಸರ್ಕಾರ ಚಕ್ರವರ್ತಿ ಸೂಲಿಬೆಲೆ ಅವರ ಭಾಷಣಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡಿತ್ತು, ಈಗ ಹಿಂದೂ ಮುಖಂಡ ಶ್ರೀಕಾಂತ ಶೆಟ್ಟಿ ಅವರು ಶಿವಾಜಿ ಮಹರಾಜರ ಕಾರ್ಯಕ್ರಮಕ್ಕೆ ಬಾಗಲಕೋಟೆಗೆ ಹೋಗದಂತೆ ನಿರ್ಬಂಧಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಗೃಹ ಇಲಾಖೆ ಮೂಲಕ ಹಿಂದ್ವತ್ವದ ಧ್ವನಿ ಉಡುಗಿಸಲು ಹೊರಟಿದೆ ಎಂದು ಆರೋಪಿಸಿದ ಕೋಟ, ಹಿಂದುತ್ವದ ಬಗ್ಗೆ, ಶಿವಾಜಿ ಬಗ್ಗೆ ಮಾತನಾಡಲು ಯಾಕೆ ತಡೆಯುತ್ತೀರಿ ? ಗೃಹ ಸಚಿವರೇ, ಮುಖ್ಯಮಂತ್ರಿಗಳೇ ಎಷ್ಟು ದಿನ ಈ ರೀತಿಯ ನಡವಳಿಕೆ ಮುಂದುವರಿಸ್ತೀರಿ ? ಎಂದು ಪ್ರಶ್ನಿಸಿದರು. ನರೇಗಾದ ಕಾರ್ಮಿಕರಿಗೆ ಕೇಂದ್ರದಿಂದ 5 ತಿಂಗಳಿಂದ ಹಣ ಬಂದಿಲ್ಲ ಸಚಿವೆ ಹೆಬ್ಬಾಳ್ಕರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಾನು ರಾಜ್ಯದ ಗ್ರಾಮಿಣಾಭಿವೃದ್ದಿ ಪ್ರಧಾನ ಕಾರ್ಯದರ್ಶಿ ಜೊತೆ ಮಾತನಾಡಿದ್ದೇನೆ. ಕೇಂದ್ರದಿಂದ ಹಣ ಬಿಡುಗಡೆ ಆಗಿದೆ, ತಾಂತ್ರಿಕ ಕಾರಣದಿಂದ ಕಾರ್ಮಿಕರಿಗೆ ನೀಡುವುದು ವಿಳಂಬ ಆಗಿದೆ ಎಂದಿದ್ದಾರೆ. ಸಚಿವೆ ಅವರು ಸಂಸದರನ್ನು ಟೀಕೆ ಮಾಡುವ ಮುಂಚೆ ಆಲೋಚಿಸಿ ಎಂದರು.