ದೇಗುಲ ಆವರಣ ಸ್ವಚ್ಛಗೊಳಿಸಿದ ಸಂಸದ, ಶಾಸಕರು

KannadaprabhaNewsNetwork | Published : Jan 15, 2024 1:49 AM

ರಾಷ್ಟ್ರವ್ಯಾಪಿ ದೇಗುಲ ಸ್ವಚ್ಛತಾ ಅಭಿಯಾನ ಹಿನ್ನೆಲೆ ಶಿವಮೊಗ್ಗ ನಗರದ ಹೊಳೆಹೊನ್ನೂರು ರಸ್ತೆ ರೈಲ್ವೆ ಗೇಟ್‌ ಪಕ್ಕದ ಅರಕೇಶ್ವರ ದೇಗುಲದಲ್ಲಿ ಭಾನುವಾರ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ ಪೊರಕೆ ಹಿಡಿದು ಕಸ ಗುಡಿಸಿದರು. ಅಲ್ಲದೇ, ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಸಹ ರಾಮೇಶ್ವರ ದೇಗು ಮೆಟ್ಟಿಲುಗಳ ಸ್ವಚ್ಛಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಷ್ಟ್ರವ್ಯಾಪಿ ದೇಗುಲ ಸ್ವಚ್ಛತಾ ಅಭಿಯಾನ ಹಿನ್ನೆಲೆ ನಗರದ ಹೊಳೆಹೊನ್ನೂರು ರಸ್ತೆ ರೈಲ್ವೆ ಗೇಟ್‌ ಪಕ್ಕದಲ್ಲಿರುವ ಅರಕೇಶ್ವರ ದೇಗುಲದಲ್ಲಿ ಭಾನುವಾರ ಶಿವಮೊಗ್ಗ ಬಿಜೆಪಿ ವತಿಯಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ ಪೊರಕೆ ಹಿಡಿದು ಶ್ರಮದಾನ ಮಾಡಿದರು. ಈ ಸಂದರ್ಭ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸಂಕ್ರಾಂತಿಯಂದು ಸೂರ್ಯ ತನ್ನ ಪಥ ಬದಲಿಸಿಕೊಂಡು ಹೆಚ್ಚು ಬೆಳಕು ನೀಡುತ್ತಾನೆ. ಇಂತಹ ಸಂದರ್ಭ ನಮ್ಮ ವಾಸ ಸ್ಥಳದ ಸಮೀಪದ ದೇವಸ್ಥಾನದ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಈ ಆಂದೋಲನಕ್ಕೆ ನಾವು ಕೈ ಜೋಡಿಸಿದ್ದೇವೆ. ರಾಜಕಾರಣ ಅಂದರೆ ಚುನಾವಣೆಗೆ ಸೀಮಿತಗೊಳ್ಳದೇ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದರು.

ವಿಧಾನ ಪರಿಷತ್ತು ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್.‌ ಅರುಣ್‌, ಪ್ರಮುಖರಾದ ಗಿರೀಶ್‌ ಪಟೇಲ್‌ ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಈ ಸಂದರ್ಭ ಹಾಜರಿದ್ದರು.

- - - ಬಾಕ್ಸ್‌ ರಾಮೇಶ್ವರ ದೇಗುಲ ಆವರಣ ಸ್ವಚ್ಛಗೊಳಿಸಿದ ಶಾಸಕ ಜ್ಞಾನೇಂದ್ರ- ತೀರ್ಥಹಳ್ಳಿಯಲ್ಲಿ ಶಾಸಕರಿಗೆ ಸಾಥ್‌ ನೀಡಿದ ಮುಖಂಡರು, ಬೆಂಬಲಿಗರು

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ದೇಗುಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಧಾರ್ಮಿಕ ಕೇಂದ್ರದ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಆ ಮೂಲಕ ದೇಶದ ಜನತೆಗೆ ಮಾದರಿಯಾಗಿದ್ದಾರೆ. ಪ್ರಧಾನಿ ನಡೆಯನ್ನು ಅನುಸರಿಸಿದ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಭಾನುವಾರ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಆವರಣವನ್ನು ಪೊರಕೆ ಹಿಡಿದು ಸ್ವಚ್ಛಗೊಳಿಸುವ ಮೂಲಕ ಸ್ವಚ್ಚ ಭಾರತ್ ಆಶಯ ಮೆರೆದರು. ಪಕ್ಷದ ಮುಖಂಡರು, ಹತ್ತಾರು ಬೆಂಬಲಿಗರು ಶಾಸಕರಿಗೆ ಸಾತ್‌ ನೀಡಿದರು.

ದೇವಸ್ಥಾನ ಆವರಣವನ್ನು ಗುಡಿಸಿ, ಸ್ವಚ್ಛಗೊಳಿಸಿದರು. ಕಳೆದ ಮೂರು ದಿನಗಳಿಂದ ನಡೆದ ಜಾತ್ರೆ ಸಂದರ್ಭದಲ್ಲಿ ನೆರೆದಿದ್ದ ದೇವಾಲಯ ಆವರಣದಲ್ಲಿ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯಗಳು ಸಂಗ್ರಹವಾಗಿದ್ದವು. ಅವೆಲ್ಲವನ್ನೂ ಒಟ್ಟುಗೂಡಿಸಿ ತ್ಯಾಜ್ಯ ಸಾಗಿಸಲು ನೆರವಾದರು.

ಶ್ರಮದಾನದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಪಪಂ ಸದಸ್ಯ ಸಂದೇಶ್ ಜವಳಿ, ಬಿಜೆಪಿ ಮುಖಂಡರಾದ ತೂದೂರು ಗ್ರಾಪಂ ಮಾಜಿ ಅಧ್ಯಕ್ಷ ಮಧುರಾಜ ಹೆಗ್ಡೆ, ತಾಪಂ ಮಾಜಿ ಸದಸ್ಯ ಕವಿರಾಜ್ ಬೇಗುವಳ್ಳಿ, ಪ್ರಶಾಂತ್ ಕುಕ್ಕೆ ಚಂದವಳ್ಳಿ ಸೋಮಶೇಖರ್ ಮುಂತಾದವರು ಇದ್ದರು.- - - -13ಎಸ್‌ಎಂಜಿಕೆಪಿ03: ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್‌.ಎನ್‌.ಚನ್ನಬಸಪ್ಪ ಭಾನುವಾರ ಹೊಳೆಹೊನ್ನೂರು ರಸ್ತೆ ರೈಲ್ವೆ ಗೇಟ್‌ ಪಕ್ಕದ ಅರಕೇಶ್ವರ ದೇಗುಲ ಆವರಣವನ್ನು ಸ್ವಚ್ಛಗೊಳಿಸಿದರು. -14ಟಿಟಿಎಚ್01: ಶಾಸಕ ಆರಗ ಜ್ಞಾನೇಂದ್ರ ಮತ್ತು ಮುಖಂಡರು, ಬೆಂಬಲಿಗರು ಭಾನುವಾರ ತೀರ್ಥಹಳ್ಳಿ ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ಕಸ ಗುಡಿಸಿ, ಶ್ರಮದಾನ ಮೆರೆದರು.