ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಕನಕ ಗುರುಪೀಠದ ಆವರಣದಲ್ಲಿ ಕನಕ ಜಯಂತ್ಯುತ್ಸವ ಹಾಗೂ 8ನೇ ವರ್ಷದ ಲಕ್ಷದೀಪೋತ್ಸವ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಶನಿವಾರ ನಡೆದ ಸಿರಿಧಾನಗಳ ಸಂಸ್ಕರಣೆ, ಮೌಲ್ಯವರ್ಧನೆ ಸರಪಳಿ, ಉತ್ಪಾದಕರು, ಮಾರುಕಟ್ಟೆದಾರರ ಸಿರಿಧಾನ್ಯ ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 60 ಸಾವಿರ ಎಕರೆ ಪ್ರದೇಶದಲ್ಲಿ ರಾಗಿ, 40 ಸಾವಿರ ಎಕೆರೆ ಪ್ರದೇಶದಲ್ಲಿ ಸಾವೆ, 4 ಸಾವಿರ ಎಕರೆ ಜೋಳ ಬೆಳೆಯಲಾಗುತ್ತಿದೆ. ಸಾವೆ ಬೆಳೆಗೆ 2024ರಲ್ಲಿ ಮಾರುಕಟ್ಟೆ ಕುಸಿತ ಆಗಿತ್ತು. ಇದರಿಂದ ರೈತರು ಆರ್ಥಿಕ ಸಂಕಷ್ಠ ಅನುಭವಿಸಿದ್ದರು ಈ ಹಿನ್ನೆಲೆಯಲ್ಲಿ ರೈತರೊಂದಿಗೆ ಸಭೆ ನಡೆಸಿ ಸಾವೆಗೆ 5000 ಸಾವಿರ ರು. ಬೆಂಬಲ ಬೆಲೆ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೆವು. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಸಾವೆ ಬೆಳೆಗೆ 5000 ರು ಕನಿಷ್ಠ ಬೆಂಬಲ ಬೆಲೆ ನೀಡಿದೆ ಎಂದರು,ರಾಯಚೂರು ಸಾವಯವ ಕೃಷಿ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ. ಬಸವೆಣ್ಣಪ್ಪ ಮಾತನಾಡಿ ಆರೋಗ್ಯದಲ್ಲಿನ ದುಷ್ಟಪರಿಣಾಮಕ್ಕೆ ರಾಸಾಯನಿಕ ಕೃಷಿ ಪದ್ಧತಿ ಪ್ರಮುಖ ಕಾರಣ. ಭೂಮಿಯ ಫಲವತ್ತತೆ ಕಾಪಾಡಲು ಜಾನುವಾರು, ಕುರಿ, ಕೋಳಿ ಸಾಕಾಣಿಕೆ ಮಾಡಿ ಅದರ ಗೊಬ್ಬರ ಬಳಕೆ ಮಾಡಬೇಕು. ಸಾವಯವ ಗೊಬ್ಬರ ಹೆಚ್ಚಿನ ಅದ್ಯತೆ ನೀಡಬೇಕು ಎಂದರು.
ಕನಕ ಗುರುಪೀಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಕೃಷಿ ಇಲಾಖೆ ಸಿರಿಧಾನ್ಯ ಬೆಳೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕನಕದಾಸರು 600 ವರ್ಷಗಳ ಹಿಂದೆ ರಾಗಿ ಮತ್ತು ಅಕ್ಕಿಯ ಉದಾಹರಣೆ ಮೂಲಕ ಸಿರಿಧಾನ್ಯಗಳ ಮಹತ್ವ ಸಾರಿದ್ದಾರೆ ಎಂದರು.
ಚಿಕ್ಕಮಗಳೂರು ಬಸವತತ್ವ ಗುರುಪೀಠ ಮರುಳಸಿದ್ಧ ಸ್ವಾಮೀಜಿ ಮಾತನಾಡಿ ಸಿರಿಧಾನ್ಯ ಬೆಳೆಗಾರರಿಗೆ ಬೆಂಬಲ ಬೆಲೆ ಕೊಡಿಸುವ ಮೂಲಕ ಬಿಜಿ ಗೋವಿಂದಪ್ಪ ರೈತರ ಬದುಕಿಗೆ ಜೀವನಾಡಿ ಆಗಿದ್ದಾರೆ. ಕನಕದಾಸರು ಕೂಡ ಸಿರಿಧಾನ್ಯಗಳ ಮಹತ್ವದ ಬಗ್ಗೆ ರಾಮಧಾನ್ಯ ಚರಿತ್ರೆಯಲ್ಲಿ ಉಲ್ಲೇಖ ಮಾಡಿದ್ದಾರೆ ಎಂದರು.ವಿರಕ್ತ ಮಠದ ಚನ್ನಬಸಪ್ಪ ಸ್ವಾಮೀಜಿ, ಬಬ್ಬೂರು ಪಾರಂ ಕೃಷಿ ವಿಜ್ಞಾನಿಗಳಾದ ಡಾ.ನಂದಿನಿ, ಓಂಕಾರಪ್ಪ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಕರಿಯಮ್ಮ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಗಿ ಶಿವಮೂರ್ತಿ, ನಿರ್ದೇಶಕ ಧರಣೇಶಪ್ಪ, ಆಗ್ರೋ ಶಿವಣ್ಣ, ಕಾರೇಹಳ್ಳಿ ಬಸವರಾಜ್, ಕೃಷಿ ಇಲಾಖೆ ಉಪ ಜಂಟಿ ನಿರ್ದೇಶಕ ಶಿವಕುಮಾರ್, ಸಹಾಯಕ ನಿರ್ದೇಶಕ ಸಿ ಎಸ್. ಈಶ, ನರೇಶ್ ಜೆಂಕರ್, ಚೇತನ್ ಮತ್ತಿತರರು ಇದ್ದರು.