ಕಾರವಾರ:
ಮುದಗಾ ಅಂಗನವಾಡಿ ಕಾರ್ಯಕರ್ತೆ ನೇಮಕಾತಿ ವೇಳೆ ಮನಸ್ಸಿಗೆ ಬಂದಂತೆ ನೇಮಕ ಮಾಡಲಾಗಿದೆ ಎಂದು ಅಮದಳ್ಳಿ ಗ್ರಾಪಂ ಸದಸ್ಯ ದೇವಾನಂದ ಚಂಡೇಕರ್ ಆರೋಪಿಸಿದರು.ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಅಂಗನವಾಡಿಯಲ್ಲಿ ನಿರಾಶ್ರಿತರೇ ಅಂಗನವಾಡಿ ಕಾರ್ಯಕರ್ತೆ ಇದ್ದರು. ಅವರ ನಿವೃತ್ತಿ ನಂತರ ನೇಮಕಾತಿ ಮಾಡುವ ವೇಳೆ ನಿರಾಶ್ರಿತರನ್ನು ಬಿಟ್ಟು ಬೇರೆಯವರನ್ನು ನೇಮಕ ಮಾಡಲಾಗಿದೆ. ಕಾಲನಿಯಿಂದ ೬ ಕಿಲೋ ಮೀಟರ್ ದೂರವಿರುವ ಒಬ್ಬರನ್ನು ಕಾರ್ಯಕರ್ತೆಯಾಗಿ ನೇಮಕ ಮಾಡಲಾಗಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದಾದ ನಂತರ ಅಂಗನವಾಡಿಗೆ ಮಕ್ಕಳನ್ನು ಕಳಿಸದೇ ಬಾಗಿಲು ಹಾಕಲಾಗಿತ್ತು. ಈಗ ಬಾಗಿಲು ತೆಗೆದು ಅಂಗನವಾಡಿ ಪ್ರಾರಂಭಿಸಿದ್ದಾರೆ. ಮುದಗಾ ಕಾಲನಿಯಲ್ಲಿ ಇರುವವರೆಲ್ಲ ನಿರಾಶ್ರಿತರು. ನಿರಾಶ್ರಿತರಿಗೆ ಭೂಮಿ ನೀಡುವ ವೇಳೆ ಉದ್ಯೋಗ ಕೊಡುವುದಾಗಿ ಹೇಳಿದ್ದರು. ಆದರೆ ಉದ್ಯೋಗ ಕೊಟ್ಟಿರಲಿಲ್ಲ. ಈಗ ಸಿಗಬೇಕಾಗಿದ್ದ ಅಂಗನವಾಡಿಯಲ್ಲಿನ ಹುದ್ದೆಯನ್ನೂ ಬೇರೆಯವರಿಗೆ ಸಿಗುವಂತೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಅಲ್ಲಿರುವ ಶಾಲೆ, ಆಸ್ಪತ್ರೆ, ಅಂಗನವಾಡಿಯಲ್ಲಿ ನಿರಾಶ್ರಿತರಿಗೆ ಉದ್ಯೋಗ ಕೊಡುವಂತೆ ನ್ಯಾಯಾಲಯವೇ ತಿಳಿಸಿದ್ದು ಈಗ ಅದನ್ನು ಉಲ್ಲಂಘಿಸಲಾಗಿದೆ. ಅಂಗನವಾಡಿ, ಶಾಲೆ, ಆಸ್ಪತ್ರೆ ಸರ್ಕಾರದ ಹಣದಿಂದ ಆಗಿಲ್ಲ. ಬದಲಾಗಿ ನಿರಾಶ್ರಿತರ ಹಣದಿಂದ ಮಾಡಲಾಗಿದೆ.ಯಾರದ್ದೋ ಒತ್ತಡಕ್ಕೆ ಮಣಿದು ನಿರಾಶ್ರಿತರಿಗೆ ಸಿಗಬೇಕಾಗಿದ್ದ ಉದ್ಯೋಗ ತಪ್ಪಿಸಿ ಬೇರೆಯವರಿಗೆ ಸಿಗುವಂತೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ನಿರಾಶ್ರಿತರೇ 16 ಜನ ಅರ್ಜಿ ಸಲ್ಲಿಸಿದ್ದರು. ಅವರಿಗೆ ಉದ್ಯೋಗ ವಂಚಿತರಾಗಿದ್ದಾರೆ. ಈಗ ಮಕ್ಕಳನ್ನು ಅಂಗನವಾಡಿಗೆ ಕಳಿಸದಂತೆ ನಿರಾಶ್ರಿತರು ನಿರ್ಧರಿಸಿದ್ದು ಜಿಲ್ಲಾಧಿಕಾರಿ, ಶಾಸಕರು, ಸಚಿವರು ಈ ಬಗ್ಗೆ ಗಮನಹರಿಸಿ ಕೂಡಲೇ ನಿರಾಶ್ರಿತರಿಗೆ ಆಗುವ ಅನ್ಯಾಯ ತಡೆಯಲಿ ಎಂದು ಹೇಳಿದರು.ಈ ವೇಳೆ ಅಶೋಕ ಎಂ. ಅರ್ಗೇಕರ್, ಭಾರತಿ ಬೊಬ್ರುಕರ, ಕಲಾವತಿ ದುರ್ಗೆಕರ, ಪ್ರವೀಣ ದುರ್ಗೆಕರ, ಮಂಜುನಾಥ ಕೊಡಾರಕ್, ಅಶ್ವಿನಿ ತಾಂಡೇಲ ಉಪಸ್ಥಿತರಿದ್ದರು.