ಚಿಂಥನ ಮಂಥನ ಸಭೆಯ ನಿರ್ಣಯಗಳಿಗೆ ಮೂಜಗು ಶ್ರೀಗಳ ವಿರೋಧ

KannadaprabhaNewsNetwork |  
Published : Mar 30, 2024, 12:54 AM IST
ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು. | Kannada Prabha

ಸಾರಾಂಶ

ಕಳೆದ 2 ದಿನಗಳ ಹಿಂದೆಯಷ್ಟೇ ನಗರದ ಮೂರುಸಾವಿರ ಮಠದಲ್ಲಿ ನಡೆದ ಲಿಂಗಾಯತ ಮಠಾಧೀಶರ ಚಿಂಥನ ಮಂಥನ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಈಗ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಅಪಸ್ವರವೆತ್ತಿದ್ದಾರೆ.

ಹುಬ್ಬಳ್ಳಿ:

ಕಳೆದ 2 ದಿನಗಳ ಹಿಂದೆಯಷ್ಟೇ ನಗರದ ಮೂರುಸಾವಿರ ಮಠದಲ್ಲಿ ನಡೆದ ಲಿಂಗಾಯತ ಮಠಾಧೀಶರ ಚಿಂಥನ ಮಂಥನ ಸಭೆಯಲ್ಲಿ ಕೈಗೊಂಡ ನಿರ್ಣಯದ ಕುರಿತು ಈಗ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಅಪಸ್ವರವೆತ್ತಿದ್ದಾರೆ. ಪ್ರಹ್ಲಾದ ಜೋಶಿ ಅವರ ಆಯ್ಕೆಯ ಬಗ್ಗೆ ತಮ್ಮದು ಅಪಸ್ವರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶ್ರೀಮಠದಲ್ಲಿ 2 ದಿನಗಳ ಹಿಂದೆ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ನಡೆದ ಚಿಂಥನ ಮಂತನ ಸಭೆಯಲ್ಲಿ ಧಾರವಾಡ ಲೋಕಸಭಾ ಮತಕ್ಷೇತ್ರದಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ನೀಡಿರುವ ಟಿಕೆಟನ್ನು ಬಿಜೆಪಿ ವರಿಷ್ಠರು ಮಾ. 31ರೊಳಗೆ ಬದಲಿಸಬೇಕು. ಇಲ್ಲದಿದ್ದರೆ ಏ. 2ರಂದು ನಮ್ಮ ನಿರ್ಧಾರ ಪ್ರಕಟಿಸಬೇಕಾಗುತ್ತದೆ ಎಂಬ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯಕ್ಕೆ ಮೂಜಗು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಭೆಯಲ್ಲಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಸೇರಿದಂತೆ 40ಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಪಾಲ್ಗೊಂಡಿದ್ದರು. ಆದರೆ, ಮೂರುಸಾವಿರ ಮಠದ ಶ್ರೀಗಳು ಶುಕ್ರವಾರ ಸಂಜೆ ಅಧಿಕೃತ ಪ್ರಕಟಣೆ ಹೊರಡಿಸಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

ಪತ್ರದಲ್ಲೇನಿದೆ:

ಪ್ರಹ್ಲಾದ ಜೋಶಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದ ಮೂಜಗು, ಶ್ರೀಮಠವು ಯಾವಾಗಲೂ ರಾಜಕೀಯ ಅಂತರ ಕಾಯ್ದುಕೊಂಡು ಬಂದಿದೆ. ಎಲ್ಲ ರಾಜಕೀಯ ಪಕ್ಷಗಳನ್ನು ಸಮನಾಗಿ ಕಾಣುತ್ತಾ ಬಂದಿದೆ. ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಶ್ರೀಮಠಕ್ಕೆ ಆಗಮಿಸಿ ಆಶೀರ್ವಾದ ತೆಗೆದುಕೊಂಡು ಹೋಗುತ್ತಾರೆ. ಸರ್ವರನ್ನು ಸಮಭಾವದಿಂದ ಕಾಣುವುದು ಶ್ರೀಮಠದ ಸದ್ಭಾವನೆಯಾಗಿದೆ. ಯಾವಾಗಲೂ ಮಠವು ರಾಜಕೀಯ ಪ್ರೇರಿತ ಹೇಳಿಕೆ ಕೊಟ್ಟಿಲ್ಲ ಮತ್ತು ಕೊಡುವುದೂ ಇಲ್ಲ. ಇಂದಿಗೂ ಅದನ್ನು ನಾವು ಕಾಯ್ದುಕೊಂಡು ಬಂದಿದ್ದೇವೆ. ಯಾವುದೇ ಒಂದು ರಾಜಕೀಯ ಪಕ್ಷದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದರೆ ಆ ಪಕ್ಷದ ಕಾರ್ಯಕರ್ತರು ಮತ್ತು ವರಿಷ್ಠರಿಗೆ ಸಂಬಂಧಪಟ್ಟದ್ದು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಆಯ್ಕೆಗೆ ವಿರೋಧ ಮಾಡಿಲ್ಲ. ಅವರ ಮತ್ತು ನಮ್ಮ ನಡುವೆ ವೈಯಕ್ತಿಕವಾಗಿ ಬಾಂಧವ್ಯವು ತುಂಬಾ ಚೆನ್ನಾಗಿರುತ್ತದೆ. ಪ್ರಹ್ಲಾದ ಜೋಶಿ ಅವರು ಕೂಡಾ ಶ್ರೀಮಠದೊಡನೆ ಸೌಹಾರ್ದಯುತವಾಗಿ ಸದಾ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ ಎಂದು ಅಧಿಕೃತವಾಗಿರುವ ಪತ್ರ ಶ್ರೀಮಠದಿಂದ ಬಿಡುಗಡೆಯಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬೈನಿಂದ ಊಟಿಯವರೆಗೆ ಸೈಕಲ್ ಪ್ರವಾಸ
ಸಾಹೇಬ್ರ ನೀರ್ ಬರದಿದ್ರ ನಾವ್ ಬರ್ಬಾದಾಗ್ತೇವ್ರಿ: ರೈತರ ಅಳಲು