ಶುದ್ಧ ಕಾಯಕದಿಂದ ಮುಕ್ತಿ ಮಾರ್ಗ ಸಾಧ್ಯ: ಡಾ. ಮಹಾಲಕ್ಷ್ಮೀ

KannadaprabhaNewsNetwork | Published : May 31, 2024 2:15 AM

ಸತ್ಯ, ಶುದ್ಧ ಕಾಯಕದಿಂದ ಮಾತ್ರ ಮುಕ್ತಿ ಮಾರ್ಗ ಪಡೆಯಲು ಸಾಧ್ಯ.

ಕನ್ನಡ ಜಾಗೃತಿ ಭವನದಲ್ಲಿ ನಡೆದ ಮಾಸಿಕ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದಲ್ಲಿ ಪತ್ರಕರ್ತೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಸತ್ಯ, ಶುದ್ಧ ಕಾಯಕದಿಂದ ಮಾತ್ರ ಮುಕ್ತಿ ಮಾರ್ಗ ಪಡೆಯಲು ಸಾಧ್ಯ ಎಂದು ಪತ್ರಕರ್ತೆ ಡಾ. ಸಿ. ಮಹಾಲಕ್ಷ್ಮಿ ಹೇಳಿದರು.

ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ ಅರಳ ಹಳ್ಳಿಯ ಶ್ರೀ ರಾಜರಾಜೇಶ್ವರಿ ಬೃಹನ್ಮಠದಿಂದ ಹಮ್ಮಿಕೊಳ್ಳಲಾಗಿದ್ದ ಐದನೇಯ ಮಾಸಿಕ ಶಿವಾನುಭವ ಗೋಷ್ಠಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ಬಡವರಿಗೆ, ದೀನ ದಲಿತರಿಗೆ, ರೋಗಿಗಳಿಗೆ, ಅನಾಥರಿಗೆ ಸೇವೆ ಮಾಡುವುದೇ ನಿಜವಾದ ಸೇವೆ. ಹಾಗಾಗಿ ಸತ್ಯ, ಶುದ್ಧ ಕಾಯಕದಿಂದ ಬಂದಂತಹ ಲಾಭದಲ್ಲಿ ಸ್ವಲ್ಪವಾದರೂ ಸೇವೆ ಮಾಡಿದರೆ ಅದೇ ಜಂಗಮ ಸೇವೆ. ಅದರಿಂದ ಮುಕ್ತಿ ಮಾರ್ಗ ಸೇರಲು ಸಾಧ್ಯ ಎಂದು ತಿಳಿಸಿದರು.

ಉಪನ್ಯಾಸಕ ಹನುಮಂತಪ್ಪ ಹೆಗ್ಗಡೆ ಮಾತನಾಡಿ, ದೀನ ದಲಿತರ ಸೇವೆಯೇ ಪುಣ್ಯ, ಸೇವೆಯ ಹೊರತುಪಡಿಸಿ ಜಗತ್ತಿನಲ್ಲಿ ಪುಣ್ಯದ ಕೆಲಸವಿಲ್ಲ. ಹಾಗಾಗಿ ಎಲ್ಲರೂ ನಿಸ್ವಾರ್ಥ ಸೇವೆ ಮಾಡೋಣ, ಅದರಿಂದಲೇ ಶಿವನ ಒಲುಮೆ ಸಾಧ್ಯ ಎಂದು ತಿಳಿಸಿದರು.ಯೋಗ ಶಿಕ್ಷಕಿ ಜಯಶ್ರೀ ಹಳ್ಯಾಳ ಮಾತನಾಡಿ, ನಿರಾಕಾರನಾದಂತಹ ಶಿವನನ್ನು ಒಲಿಸಲು ಅಂತರಂಗ ಶುದ್ಧಿಯಿಂದ ಮಾತ್ರ ಸಾಧ್ಯ ಎಂದರು.

ವೇದ ಮೂರ್ತಿ ಶಿವಾನಂದಯ್ಯ ತಾತ ಸೂಳೆಕಲ್ ಸಾನಿಧ್ಯ ವಹಿಸಿದ್ದರು.

ವಿಶ್ವನಾಥ ಗವಿಸಿದ್ದಯ್ಯ ಹಿರೇಮಠ, ಹನುಮಂತಪ್ಪ ಹೆಗಡೆ, ಸಂದೇಶ ಹಿರೇಮಠ್ ಅವರನ್ನು ಸನ್ಮಾನಿಸಲಾಯಿತು.

ಜಂಗಮ ಸಮಾಜದ ಯುವ ಮುಖಂಡರಾದ ವಿರೂಪಾಕ್ಷಯ್ಯಸ್ವಾಮಿ ಸಂಗಾಪುರ, ಡಾ. ಶರಭಯ್ಯ, ಮಹಾತೇಶ ಶಾಸ್ತ್ರಿ ಗಂಗಾವತಿ, ನಾಗರತ್ನಮ್ಮ, ಶಾಮಿದ ಸಾಬ್ ಲಾಟಿ, ದೇವಣ್ಣ ಮಾಸ್ತರು, ಎಸ್.ಬಿ. ಹಿರೇಮಠ ಕಣ್ಣೂರು ಉಪಸ್ಥಿತರಿದ್ದರು.

ರೇವಣ ಸಿದ್ದಯ್ಯ ತಾತ ನಿರೂಪಿಸಿದರು. ಬಸಯ್ಯ ಶಾಸ್ತ್ರಿ ಸೂಳೆಕಲ್, ವಿರೂಪಾಕ್ಷಪ್ಪ ಹಿರೇ ಜಂತಕಲ್ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿತು.