ಜೀವದ ಹಂಗು ತೊರೆದು ಗಾರಂಪಳ್ಳಿ ನದಿಯಲ್ಲಿ ಈಜುಗಾರನಿಂದ ರೀಲ್ಸ್
-----ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನಲ್ಲಿ ಮಳೆಯ ಅರ್ಭಟ ಹೆಚ್ಚಾಗಿದ್ದು ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯದಿಂದ ಹೆಚ್ಚುವರಿ ನೀರು ಮುಲ್ಲಾಮಾರಿ ನದಿಗೆ ಹರಿಯಲು ಬಿಟ್ಟಿದ್ದರಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಇರುವ ನದಿ ಮೈದುಂಬಿ ಹರಿಯುತ್ತಿದೆ.ತಾಲೂಕಿನಲ್ಲಿ ಅಬ್ಬರದ ಮಳೆಯಿಂದ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ಕೋಡಿಗಳಿಂದ ರಭಸವಾಗಿ ಹರಿಯುತ್ತಿವೆ. ಸಾಲೇಬೀರನಳ್ಳಿ, ದೋಟಿಕೊಳ, ಧರ್ಮಸಾಗರ, ಹಸರಗುಂಡಗಿ, ಖಾನಾಪೂರ, ಐನಾಪೂರ, ತುಮಕುಂಟಾ, ಹುಲಸಗೂಡ, ಮುಕರಂಬಾ, ಚಂದನಕೇರಾ, ಕೊಳ್ಳುರ, ಹೂಡದಳ್ಳಿ, ಪಂಗರಗಾ, ಅಲ್ಲಾಪೂರ ಕೆರೆಗಳಿಂದ ಕೋಡಿಗಳ ಮೂಲಕ ನೀರು ಉಕ್ಕಿ ಮೈದುಂಬಿ ಹರಿಯುತ್ತಿವೆ ಎಂದು ಸಣ್ಣ ನೀರಾವರಿ ಇಲಾಖೆ ಎಇಇ ಶಿವಾಜಿ ಜಾಧವ್ ತಿಳಿಸಿದ್ದಾರೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ೪೫೦೦ಕ್ಯುಸೆಕ್ ಹೆಚ್ಚುವರಿ ನೀರು ನದಿಗೆ ಹರಿಯಲು ಬಿಟ್ಟಿದ್ದರಿಂದ ಚಿಮ್ಮನಚೊಡ, ತಾಜಲಾಪೂರ, ಕನಕಪೂರ, ಗಾರಂಪಳ್ಳಿ, ಗರಗಪಳ್ಳಿ, ಪೋಲಕಪಳ್ಳಿ, ಅಣವಾರ ಗ್ರಾಮಗಳ ರಸ್ತೆ ಸಂಪರ್ಕ ಕಲ್ಪಿಸುವ ಬ್ಯಾರೇಜಗಳ ಮೇಲೆ ಪ್ರವಾಹ ನೀರು ರಭಸವಾಗಿ ಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರ ಸೋಮವಾರ ಮಧ್ಯಾಹ್ನದವರೆಗೆ ಸ್ಥಗಿತವಾಗಿತ್ತು. ದನಕರುಗಳು ಹೊಲಕ್ಕೆ ಹೋಗಲು ತೊಂದರೆ ಪಡಬೇಕಾಯಿತು.ತಾಲೂಕಿನ ಮುಲ್ಲಾಮಾರಿ ನದಿಯ ನೀರಿನ ಪ್ರವಾಹ ಉಕ್ಕಿ ಹರಿದಿದ್ದರಿಂದ ತೆಲಂಗಾಣ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹಲಕೋಡ ಸೇತುವೆ ಮೇಲಿಂದ ಪ್ರವಾಹ ಉಕ್ಕಿ ಹರಿದಿದೆ. ಅಲ್ಲದೇ ಗರಗಪಳ್ಳಿ ಗ್ರಾಮದ ಬ್ಯಾರೇಜ್ ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಸೇಡಂ, ಚಿಂಚೋಳಿ, ತೆಲಂಗಾಣ ರಾಜ್ಯಕ್ಕೆ ಹೋಗಲು ಗ್ರಾಮಸ್ಥರು ಪರದಾಡುತ್ತಿದ್ದರು. ಅನಿವಾರ್ಯವಾಗಿ ಸುಲೇಪೇಟ ಮಾರ್ಗದ ಮೂಲಕ ತಮ್ಮ ಊರುಗಳಿಗೆ ತೆರಳಿದ್ದಾರೆ.
ಕನಕಪೂರ, ತಾಜಲಾಪೂರ, ಗಾರಂಪಳ್ಳಿ, ನಿಮಾಹೊಸಳ್ಳಿ ಅನೇಕ ರೈತರ ಹೊಲಗಳಿಗೆ ನುಗ್ಗಿದ್ದರಿಂದ ಬೆಳೆದು ನಿಂತಿರುವ ತೊಗರಿ ಬೆಳೆಗಳು ನೀರಿನ ರಭಸಕ್ಕೆ ಕೊಚ್ಚಿಕೊಂಡುಹೋಗಿವೆ ಎಂದು ಕನಕಪೂರ ಗ್ರಾಮಸ್ಥರ ಶ್ರೀಧರ ವಗ್ಗಿ ಕಣ್ಣೀರು ಸುರಿದ್ದಾರೆ.ಸರಕಾರದಿಂದ ಕೂಡಲೇ ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪೋಟೊ:೨೨ಜಿಯು-ಸಿಎಚ್ಐ೧
ಚಿಂಚೋಳಿ ತಾಲೂಕಿನ ಮಳೆ ಅಬ್ಬರದಿಂದ ಮುಲ್ಲಾಮಾರಿ ನದಿ ಪ್ರವಾಹದಿಂದ ಮೈದುಂಬಿ ಹರಿಯುತ್ತಿದೆ.ಎ) ಗಾರಂಪಳ್ಳಿ ಸೇತುವೆ ಮೇಲಿಂದ ಈಜುಗಾರ ರೀಲ್ಸ ಮಾಡುತ್ತಿರುವುದು.