ಮುಂಡಗೋಡಗೆ ಲಗ್ಗೆ ಇಟ್ಟ ಕುರಿಗಳ ಹಿಂಡು

KannadaprabhaNewsNetwork |  
Published : Nov 26, 2023, 01:15 AM IST
ಮುಂಡಗೋಡ: ಕುರಿಗಳ ಹಿಂಡಿನೊಂದಿಗೆ ಕುರುಬರು ಮುಂಡಗೋಡ ತಾಲೂಕಿಗೆ ಲಗ್ಗೆ ಇಡುತ್ತಿರುವ ಚಿತ್ರಗಳು | Kannada Prabha

ಸಾರಾಂಶ

ಬತ್ತದ ಕಣಜ ಎಂದೇ ಹೆಸರು ವಾಸಿಯಾಗಿರುವ ಮುಂಡಗೋಡ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಬರುತ್ತಾರೆ.

ಸಂತೋಷ ದೈವಜ್ಞ

ಮುಂಡಗೋಡ:

ತೀವ್ರ ಬರದ ನಡುವೆಯೂ ಮಳೆಗಾಲ ಮುಗಿದು ಬತ್ತ ಕಟಾವು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಬಯಲು ಸೀಮೆ ಪ್ರದೇಶದ ಕುರಿಗಳ ಹಿಂಡು ತಂಡೋಪತಂಡವಾಗಿ ಮುಂಡಗೋಡ ಕಡೆಗೆ ಪಾದಾರ್ಪಣೆ ಮಾಡುತ್ತಿದ್ದು, ಎಲ್ಲಿ ನೋಡಿದರೂ ಈಗ ಕುರಿಗಳ ಹಿಂಡು ಕಾಣಸಿಗುತ್ತಿವೆ.

ಮಳೆಗಾಲ ಮುಗಿದು ಬತ್ತದ ಸುಗ್ಗಿ ಆರಂಭವಾಗುತ್ತಿದ್ದಂತೆ ಕುರುಬರು ತಮ್ಮ ನೂರಾರು ಸಂಖ್ಯೆಯ ಕುರಿಗಳೊಂದಿಗೆ ಊರೂರು ಅಲೆದು ರೈತರ ಗದ್ದೆಯಲ್ಲಿ ತಮ್ಮ ಕುರಿಗಳೊಂದಿಗೆ ಟಿಕಾಣಿ ಹೂಡಿ ರೈತರಿಂದ ಧಾನ್ಯ ಪಡೆಯುವ ಸಂಪ್ರದಾಯ ಮೊದಲಿನಿಂದಲೂ ಬಂದಿದೆ. ಅದೇ ರೀತಿ ಈ ವರ್ಷವು ಕೂಡ ಕುರುಬರು ಕುರಿಗಳ ಹಿಂಡಿನೊಂದಿಗೆ ಕುಟುಂಬ ಸಮೇತ ಕುದುರೆ ಹಾಗೂ ನಾಯಿಗಳೊಂದಿಗೆ ಈ ಭಾಗಕ್ಕೆ ಲಗ್ಗೆ ಇಡುತ್ತಿದ್ದಾರೆ.

ನಿಪ್ಪಾಣಿ, ಸಂಕೇಶ್ವರ, ಅಥಣಿ, ಗೋಕಾಕ, ಚಿಕ್ಕೋಡಿ ಮುಂತಾದ ಕಡೆಯ ಕುರುಬರು ಮಳೆಗಾಲ ಮುಗಿಯುತ್ತಿದ್ದಂತೆ ಗುಳೇ ಹೊರಟು ಈ ಭಾಗಕ್ಕೆ ಲಗ್ಗೆ ಇಡುತ್ತಾರೆ. ಪ್ರತಿ ವರ್ಷ ಇಲ್ಲಿಯ ಪ್ರಧಾನ ಬೆಳೆ ಬತ್ತದ ಫಸಲು ಬರುವ ಈ ವೇಳೆಯಲ್ಲಿ ಈ ಭಾಗ ಪ್ರವೇಶಿಸುವ ಕುರುಬರು, ಕೆಲ ತಿಂಗಳುಗಳ ಕಾಲ ತಿರುಗಾಡಿ ತಮ್ಮ ಕುರಿಗಳ ಸಂತಾನೋತ್ಪತ್ತಿ ಮಾಡಿಕೊಂಡು ಮಳೆಗಾಲ ಆರಂಭವಾಗುವ ಮುನ್ನ ಮರಳಿ ತಮ್ಮ ಊರಿಗೆ ಹೋಗುವುದು ಸಾಮಾನ್ಯ.

ಬತ್ತದ ಕಣಜ ಎಂದೇ ಹೆಸರು ವಾಸಿಯಾಗಿರುವ ಮುಂಡಗೋಡ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಬರುತ್ತಾರೆ. ಒಂದು ದಿನ ಒಂದು ಕಡೆ ಠಿಕಾಣಿ ಹೂಡಿದರೆ ಇನ್ನೊಂದು ದಿನ ಮತ್ತೊಂದು ಊರಿನ ರೈತರ ಭೂಮಿಯಲ್ಲಿ ಬೀಡು ಬಿಡುತ್ತಾರೆ. ಇದರಿಂದ ಕುರಿಗಳಿಗೆ ಮೇವು ಸಿಗುತ್ತದೆ. ಅಲ್ಲದೆ ರೈತರ ಗದ್ದೆಗಳಿಗೆ ಗೊಬ್ಬರ ಸಿಕ್ಕಂತೆಯು ಆಗುತ್ತದೆ. ಇದರಿಂದ ರೈತರು ಕೂಡ ಕುರಿ ಹಿಂಡು ತಮ್ಮ ಗದ್ದೆಯಲ್ಲಿ ಬೀಡು ಬಿಡಲಿ ಎಂದು ಬಯಸುತ್ತಾರೆ.

ಕುರುಬರು ವರ್ಷದಲ್ಲಿ ೬ ತಿಂಗಳು ಹಗಲು, ರಾತ್ರಿ, ಚಳಿ, ಗಾಳಿ, ಬಿಸಿಲು ಎಂಬುವುದನ್ನು ಲೆಕ್ಕಿಸದೇ ವರ್ಷದಲ್ಲಿ ಅರ್ಧ ಕಾಲ ತಮ್ಮ ಬಳಗ ಕಟ್ಟಿಕೊಂಡು ಊರು, ಕೆರೆ ಅಲೆಯುತ್ತಾರೆ. ನೂರಾರು ಸಂಖ್ಯೆ ಕುರಿಗಳೊಂದಿಗೆ ಇಲ್ಲಿಗೆ ಆಗಮಿಸುವ ಇವರು ಒಂದಕ್ಕೆ ನಾಲ್ಕು ಪಟ್ಟು ಕುರಿಗಳ ಸಂತತಿ ಹೆಚ್ಚಿಸಿಕೊಂಡು ಮರಳುತ್ತಾರೆ. ಅಲ್ಲದೆ ರೈತರ ಭೂಮಿಯಲ್ಲಿ ಬೀಡು ಬಿಡಲು ದಿನಕ್ಕೆ ಇಂತಿಷ್ಟು ದವಸ-ಧಾನ್ಯದ ಫಸಲು ರೈತರಿಂದ ಪಡೆದುಕೊಳ್ಳುತ್ತಾರೆ. ಕುರಿಗಳ ತಂಡ ಕೃಷಿ ಗದ್ದೆಯಲ್ಲಿ ವಾಸ ಮಾಡಿ ಮೂತ್ರ ಹಾಗೂ ಹಿಕ್ಕಿ ಹಾಕುವುದರಿಂದ ಗೊಬ್ಬರ ದೊರೆತಂತಾಗುತ್ತದೆ. ಹಾಗಾಗಿ ರೈತರೂ ಕೂಡ ಕುರಿಗಳ ತಂಡವನ್ನು ವಾಸ ಮಾಡಿಸಿಕೊಳ್ಳಲು ಮುಗಿಬಿಳುತ್ತಾರೆ.

ಸದ್ಯ ಬತ್ತದ ಕೊಯ್ಲು ಆರಂಭವಾಗಿದ್ದು ಖಾಲಿಯಾಗುವ ಬತ್ತದ ಭೂಮಿಯಲ್ಲಿ ಬೀಡು ಬಿಡಲು ನಿತ್ಯ ಕುರಿಗಳ ಹಿಂಡು ಆಗಮಿಸುತ್ತಿದೆ. ಈ ಬಾರಿ ಮಳೆ ಕೊರೆತಯಿಂದಾಗಿ ಬತ್ತದ ಫಸಲು ಕೂಡ ಕೈ ಕೊಟ್ಟಿದ್ದು, ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ಇಲ್ಲಿಯ ರೈತರು ಸಿಕ್ಕಷ್ಟು ಸಿಗಲಿ ಎಂದು ಫಸಲನ್ನು ಕಟಾವು ಮಾಡಿಸುತ್ತಿದ್ದಾರೆ. ಈ ಮಧ್ಯೆ ನಿರಾಶೆಯ ನಡುವೆಯೂ ಕುರುಬ ಸಮುದಾಯ ಪ್ರತಿ ವರ್ಷದಂತೆ ಈ ಬಾರಿ ಕೂಡ ಆಗಮಿಸಿದ್ದು, ಎಲ್ಲೆಂದರಲ್ಲಿ ಬೀಡು ಬಿಟ್ಟಿದ್ದಾರೆ. ಒಟ್ಟಾರೆ ಕುರಿಗಳ ಹಿಂಡು ಬೀಡು ಬಿಡುವುದರಿಂದ ರೈತರ ಭೂಮಿ ಫಲವತ್ತಾಗುವುದರೊಂದಿಗೆ ಕುರುಬರ ಕುರಿಗಳ ಸಂತಾನೋತ್ಪತ್ತಿ ಕೂಡ ಆಗುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ