೧ ತಿಂಗಳಿಂದ ಕಚೇರಿಯಲ್ಲಿ ಉಪ ನೋಂದಣಿಣಾಧಿಕಾರಿ ಇಲ್ಲ
ಪಟ್ಟಣದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ೧ ತಿಂಗಳಿಂದ ಉಪ ನೋಂದಣಾಧಿಕಾರಿ ಇಲ್ಲದೆ ಇರುವುದರಿಂದ ಯಾವುದೇ ನೋಂದಣಿ ಕೆಲಸ ಕಾರ್ಯ ನಡೆಯದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮುಕಳೆಪ್ಪ ಕ್ಯಾತಿಯ ಯೂಟ್ಯೂಬರ್ ಖ್ವಾಜಾ ಬಂದೇನವಾಜ್ ಹಿಂದು ಯುವತಿಯೊಂದಿಗೆ ವಿವಾಹ ನೋಂದಣಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ೧ ತಿಂಗಳ ಹಿಂದೆ ನಖಲಿ ದಾಖಲೆ ಸೃಷ್ಟಿಸಿ ಕಾನೂನು ಬಾಹಿರವಾಗಿ ವಿವಾಹ ಮಾಡಿಸಲಾಗಿದೆ ಎನ್ನುವ ಆರೋಪದ ಬಗ್ಗೆ ಇಲ್ಲಿಯ ಉಪನೋಂದಣಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಉಪನೋಂದಣಾಧಿಕಾರಿ ಹಾಗೂ ಸಿಬ್ಬಂದಿ ಕಾಣೆಯಾಗಿದ್ದಾರೆ.೨ ದಿನ ಕಚೇರಿಗೆ ಬೀಗ ಹಾಕಲಾಗಿತ್ತು. ಬಳಿಕ ಪಕ್ಕದ ಯಲ್ಲಾಪುರ ಹಾಗೂ ಸಿದ್ದಾಪುರ ಉಪನೋಂದಣಾಧಿಕಾರಿಯನ್ನು ವಾರದಲ್ಲಿ ೨ ದಿನಗಳ ಕಾಲ ಇಲ್ಲಿ ಕಾರ್ಯನಿರ್ವಹಿಸುವಂತೆ ನಿಯೋಜಿಸಲಾಗಿತ್ತು. ೧೦-೧೨ ದಿನ ಅವರು ವಾರದಲ್ಲಿ ೨ ದಿನ ಕಾರ್ಯನಿರ್ವಹಿಸಿದರು. ನಂತರ ಬರಲೇ ಇಲ್ಲ. ಸದ್ಯ ಯಲ್ಲಾಪುರ ಮತ್ತು ಕಾರವಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಇಬ್ಬರು ಕಂಪ್ಯೂಟರ್ ಆಪರೇಟರ್ಗಳು ನಾಮಕೆವಾಸ್ತೆ ಬಾಗಿಲು ತೆರೆದು ಸಂಜೆಯ ವರೆಗೆ ಕುಳಿತಿರುತ್ತಾರೆ.
ಜಿಲ್ಲೆಯ ಯಾವುದೇ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿಗೆ ಅವಕಾಶವಿರುವುದರಿಂದ ಅಗತ್ಯವಿರುವವರು ಪಕ್ಕದ ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಿಗೆ ತೆರಳಿ ತಮ್ಮ ನೋಂದಣಿ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಇನ್ನುಳಿದ ವಿವಾಹ ನೋಂದಣಿ, ಇಸಿ ಸೇರಿ ವಿವಿಧ ಕೆಲಸಗಳನ್ನು ಮಾಡಿಕೊಳ್ಳಲಾಗದೆ ಪರದಾಡುವಂತಾಗಿದೆ. ಇದರಿಂದ ಮುಂಡಗೋಡ ನೋಂದಣಾಧಿಕಾರಿ ಕಚೇರಿ ಇದ್ದರೂ ಇಲ್ಲದಂತಾಗಿದೆ.