ಪಟ್ಟಣದ ಶಿರೋಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಲಕ್ಷ್ಮಿ ಕನಕನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 13ರಿಂದ 20ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಮಾ.18ರಂದು ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವಿ.ಎಲ್. ನಾಡಗೌಡ್ರ ಹೇಳಿದರು.
ಮುಂಡರಗಿ: ಪಟ್ಟಣದ ಶಿರೋಳ ಗ್ರಾಮಕ್ಕೆ ಹೊಂದಿಕೊಂಡಿರುವ ಶ್ರೀ ಲಕ್ಷ್ಮಿ ಕನಕನರಸಿಂಹ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 13ರಿಂದ 20ರ ವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಮಾ.18ರಂದು ಸಂಜೆ 6 ಗಂಟೆಗೆ ಮಹಾರಥೋತ್ಸವ ಜರುಗಲಿದೆ ಎಂದು ದೇವಸ್ಥಾನದ ಧರ್ಮದರ್ಶಿ ವಿ.ಎಲ್. ನಾಡಗೌಡ್ರ ಹೇಳಿದರು.
ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಮಾ. 13ರಂದು ಸಂಜೆ 8 ಗಂಟೆಗೆ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರಿಗೆ ಮಂಗಲ ಸ್ನಾನ, 9 ಗಂಟೆಗೆ ನಾಂದಿ ದೇವತಾ ಸ್ಥಾಪನೆ. 10 ಗಂಟೆಗೆ ಕಲ್ಯಾಣೋತ್ಸವ ನಂತರ ಮಹಾನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ ಬ್ರಹ್ಮ ಸಂತರ್ಪಣೆ ನಡೆಯಲಿದೆ.
ಮಾ.14ರಂದು ಪ್ರಾತಃಕಾಲ ಸುಪ್ರಭಾತ, ಉದಯರಾಗ, ಅರಿದಾಸ ಕೀರ್ತನೆ, ಸಳಾದಿಪಠಣ. 10 ಗಂಟೆಗೆ ಪಂಚಾಮೃತ ಅಭಿಷೇಕ, ಶಂಖಾಭಿಷೇಕ, ಪೂಜಾ ಪುಷ್ಪಾಲಂಕಾರ. 11 ಗಂಟೆಗೆ ವಾಯು ಸ್ಥಿತಿ ಪಠಣ, ನವಗ್ರಹ ಸ್ತೋತ್ರ, ನರಸಿಂಹ ಸುಳಾದಿಪಠಣ. ಮಧ್ಯಾನ 1 ಗಂಟೆಗೆ ಮಹಾನೈವೇದ್ಯ, ಮಂಗಳಾರತಿ ಹಾಗೂ ಬ್ರಹ್ಮ ಸಂತರ್ಪಣೆ. ಸಾಯಂಕಾಲ ಬ್ರಾಹ್ಮಣ ಸಮಾಜದವರಿಂದ ಲಘು ರಥೋತ್ಸವ. 8 ಗಂಟೆಗೆ ಪಾಲಕಿ ಸೇವಾ, ಮಹಾ ಮಂಗಳಾರತಿ, ಪ್ರಸಾದ ವಿತರಿಸಲಾಗುವುದು.
ಮಾ.15ರಂದು ಪ್ರಾತಃಕಾಲ ಸುಪ್ರಭಾತದಿಂದ ಸಂಜೆಯವರೆಗೆ ಎಲ್ಲ ಪೂಜಾ ಕೈಂಕರ್ಯಗಳು ಅಭಿಷೇಕಗಳು ಜರುಗಲಿದ್ದು, ಸಾಯಂಕಾಲ ಹಾಲುಮತ ಹಾಗೂ ಉಪ್ಪಾರ ಮೂಲ ಕನಕಪುರ ನಿವಾಸಿಗಳಿಂದ ಲಘು ರಥೋತ್ಸವ ಜರುಗಲಿದೆ. ನಂತರ ಪಾಲಕಿ ಸೇವಾ ಮಹಾಮಂಗಳಾರತಿ ಪ್ರಸಾದ ವಿತರಣೆ ಜರುಗಲಿದೆ. ಮಾ.16ರಂದು ಪ್ರಾತಃಕಾಲ ಸುಪ್ರಭಾತದಿಂದ ಸಂಜೆಯವರೆಗೆ ಎಲ್ಲ ಪೂಜಾ ಕೈಂಕರ್ಯಗಳು, ಅಭಿಷೇಕಗಳು ಜರುಗಲಿದ್ದು, ಸಾಯಂಕಾಲ ವಾಲ್ಮೀಕಿ ಸಮಾಜದವರಿಂದ ಲಘು ರಥೋತ್ಸವ, ನಂತರ ಕುಟುಂಬ ಯಾತ್ರೆ, ಪಾಲಕಿಸೇವಾ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರುಗಲಿದೆ.
ಮಾ.17ರಂದು ಸುಪ್ರಭಾತದಿಂದ ಎಲ್ಲ ಪೂಜಾ ಕೈಂಕರ್ಯಗಳು, ಅಭಿಷೇಕಗಳು ಜರುಗಲಿದ್ದು, ಬೆಳಗ್ಗೆ 9ಗಂಟೆಗೆ ಪಂಚಾಮೃತ ಅಭಿಷೇಕ, ಕುಂಕುಮ ಪೂಜೆ, ಆಭರಣ ಹಾಗೂ ಪುಷ್ಪಾಲಂಕಾರ, ರಥಾ ಕಳಸಾರೋಹಣ, ವಿಶ್ವಕರ್ಮ ಸಮಾಜದವರಿಂದ ಲಘು ರಥೋತ್ಸವ ಜರಗಲಿದೆ. ನಂತರ ಮಹಾ ಮಂಗಳಾರತಿ ಹಾಗೂ ನೈವೇದ್ಯ ಜರುಗಲಿದೆ. 1 ಗಂಟೆಗೆ ಬ್ರಾಹ್ಮಣ ಹಾಗೂ ವೈಶ ಸಮಾಜದವರಿಂದ ಗರುಡಾರತಿ ಸೇವೆ ನಂತರ ಬ್ರಹ್ಮ ಸಂತರ್ಪಣೆ. ಸಾಯಂಕಾಲ 5 ಗಂಟೆಗೆ ಹಾಲುಮತ ಹಾಗೂ ಆರ್ಯ ಸಮಾಜದವರಿಂದ ಗರುಡಾರತಿ ಸೇವೆ ಹಾಗೂ ದೀಡ ನಮಸ್ಕಾರ ಸೇವೆ ಜರುಗಲಿದೆ. ರಾತ್ರಿ 9 ಗಂಟೆಗೆ ಪಾಲಿಕೆ ಸೇವ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರುಗಲಿದೆ.
ಮಾ.18ರಂದು ಪ್ರಾತಃಕಾಲ ವಿವಿಧ ನಿಯಮಾವಳಿಗಳು ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ಹರಿಜನ ಸಮಾಜ ಬಾಂಧವರಿಂದ ಗರುಡಾರತಿ ಸೇವೆ, ನಂತರ ಪಂಚಾಮೃತ ಅಭಿಷೇಕ, ಶಂಖಾಭಿಷೇಕ, ವಿಶೇಷ ಪೂಜಾಲಂಕಾರ. ಬೆಳಗ್ಗೆ 10.30 ಕ್ಕೆ ಶ್ರೀ ಲಕ್ಷ್ಮಿ ನರಸಿಂಹ ಮಲ್ಲಿಕಾರ್ಜುನ ದರ್ಶನ ಗುಡ್ಡದಮೇಲೆ ರುದ್ರ ಪುಷ್ಕರಣೆ ಸ್ನಾನ, ದಾಸೋಹ, ಮಹಾಮಂಗಳಾರತಿ ಹಾಗೂ ದೇವಾಲಯ ಪ್ರವೇಶ. ಮಧ್ಯಾಹ್ನ 1 ಗಂಟೆಗೆ ರಥ ಬಲಿಹರಣ ಪೂಜಾ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ನಂತರ ಲಕ್ಷ್ಮಿ ಕನಕನರಸಿಂಹ ರಥಾರೋಹಣ, ಬ್ರಹ್ಮ ರಥೋತ್ಸವ ಸಾಂಗತ ನಿಯಮ. ಸಾಯಂಕಾಲ 6ಗಂಟೆಗೆ ಮಹಾ ರಥೋತ್ಸವ ಜರುಗಲಿದ್ದು, ಸಂಜೆ 8 ಗಂಟೆಗೆ ಪಾಲಕಿಸೇವೆ, ತೊಟ್ಟಿಲು ಪೂಜಾ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಜರಗಲಿದೆ. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ 19ರಂದು ಜಾತ್ರಾ ಕಾರ್ಯಕ್ರಮಗಳು ಜರುಗಿ, ಮಾ.20ರಂದು ಪೂರ್ಣಗೊಳ್ಳಲಿವೆ ಎಂದು ವಿ.ಎಲ್.ನಾಡಗೌಡ್ರ ತಿಳಿಸಿದರು. ಹಿರಿಯರಾದ ವೈ.ಎನ್. ಗೌಡರ್ ಮಾತನಾಡಿ, ಇಲ್ಲಿ ಶ್ರೀ ಲಕ್ಷ್ಮಿ ಕನಕನರಸಿಂಹ ದೇವರ ಜಾತ್ರೆ ಕಳೆದ ಅನೇಕ ವರ್ಷಗಳಿಂದ ಜಾತ್ಯಾತೀತವಾಗಿ ಜರುಗುವುದರಿಂದ ಈ ಜಾತ್ರಾ ಸಂದರ್ಭದಲ್ಲಿ 8 ದಿನಗಳ ಕಾಲ ಮಂಗಲ ಕಾರ್ಯಗಳು ನಡೆಯುವುದರಿಂದ ಇಲ್ಲಿ ಹಿಂದಿನಿಂದಲೂ ಕಾಮದಹನವನ್ನು ನಿಷೇಧಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಾಗರಾಜ ಹೊಂಬಳಗಟ್ಟಿ, ರಾಜು ದಾವಣಗರೆ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.