ಕನ್ನಡಪ್ರಭ ವಾರ್ತೆ ಕೋಲಾರರೈತರು ಕಟ್ಟಿ ಬೆಳೆಸಿದ್ದ ಹೈನೋಧ್ಯಮ ಸಂಸ್ಥೆ, ರೈತರನ್ನು ಬಿಟ್ಟು ಹಣವಂತರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದ ಪರಿಣಾಮ ಬುಧವಾರ ಕೋಲಾರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಲಕ್ಷ ಲಕ್ಷ ಹಣದ ಜೊತೆಗೆ ಚಿನ್ನ, ಬೆಳ್ಳಿ ಉಡುಗರೆಗಳನ್ನ ಮತದಾರರ ನೀಡಲಾಗಿದೆ. ಇದು ಕೋಮುಲ್ ಚುನಾವಣೆಯ ವಿಶೇಷ.ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಜಿದ್ದಾಜಿದ್ದಿನಿಂದ ನಡೆದಿದ್ದು, ಮಾಲೂರು ಶಾಸಕ ನಂಜೇಗೌಡ ಆವಿರೋಧ ಆಯ್ಕೆಯಾಗಿರುವ ಹಿನ್ನೆಲೆ ೧೨ ಸ್ಥಾನಗಳಿಗೆ ಒಟ್ಟು ೨೯ ಅಭ್ಯರ್ಥಿಗಳು ಕಣದಲ್ಲಿದ್ದು, ೮೫೫ ಜನ ಮತದಾರರಿದ್ದರು. ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆಯಾಗುತ್ತಿದ್ದಂತೆ ತಮ್ಮ ತಮ್ಮ ಮತದಾರರನ್ನು ಹಿಡಿದಿಟ್ಟುಕೊಳ್ಳಲು ಪ್ರವಾಸ, ಉಡುಗೊರೆಗಳನ್ನ ನೀಡಲಾಗಿದೆ.
ಈ ಬಾರಿ ವಿಶೇಷವಾಗಿ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ನಿರ್ದೇಶಕರ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡಿದ್ದು ತೀವ್ರ ಕುತೂಹಲ ಮೂಡಿಸಿದಲ್ಲದೆ ಪ್ರತಿಷ್ಟೆಯಲ್ಲಿ ನಿರ್ಮಾಣವಾಗಿತ್ತು. ಈ ಮೊದಲೇ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕಯಾಗಿದ್ದು, ಇನ್ನು ಕಣದಲ್ಲಿದ್ದ ೨೯ ಅಭ್ಯರ್ಥಿಗಳ ಪೈಕಿ ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ-9 ಮತ್ತು ೪ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಆಯ್ಕೆಯಾದ ಅಭ್ಯರ್ಥಿಗಳುಶಾಸಕ ನಂಜೇಗೌಡ ಅವಿರೋಧ ಆಯ್ಕೆ ಸೇರಿದಂತೆ ಕಾಂಗ್ರೆಸ್ ಬೆಂಬಲಿತ ಎಸ್.ಎನ್.ನಾರಾಯಣಸ್ವಾಮಿ, ಜಯಸಿಂಹ ಕೃಷ್ಣಪ್ಪ, ಕೆ.ಕೆ.ಮಂಜು, ಹನುಮೇಶ್, ಚಂಚಿಮಲೆ ರಮೇಶ್, ಶ್ರೀನಿವಾಸ್, ಮಹಾಲಕ್ಷ್ಮಿ, ಕಾಂತಮ್ಮ ಆಯ್ಕೆಯಾಗಿದ್ದು, ಎನ್ಡಿಎ ಪಕ್ಷದಿಂದ ಕಾಡೇನಹಳ್ಳಿ ನಾಗರಾಜ್, ಸಾಮೇಗೌಡ, ನಾಗರಾಜ್ ಮತ್ತು ವಡಗೂರು ಹರೀಶ್ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಅಭ್ಯರ್ಥಿಗಳು ಆಯ್ಕೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಕೋಲಾರ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶರಕ ಚುನಾವಣೆ ಮುಗಿದಿದ್ದು, ೧೩ ನಿರ್ದೇಶಕರ ಸ್ಥಾನಗಳ ಪೈಕಿ ೯ ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಗೆಲುವು ಸಾಧಿಸಿದರೆ, ೪ ಸ್ಥಾನಗಳಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳ ಗೆಲುವಾಗಿದೆ. ಈ ಪೈಕಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಮಾಲೂರು ಶಾಸಕ ಕೆ.ವೈ.ನಂಜೇಗೌಡ ಸಹ ಸೇರಿದ್ದಾರೆ. ಈ ಮಧ್ಯೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಶಾಸಕರ ಮಧ್ಯೆಯೆ ಪೈಪೋಟಿ ಏರ್ಪಟ್ಟಿದ್ದು, ಕಾಂಗ್ರೆಸ್ನಲ್ಲೇ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ.
ಕೋಲಾರ ಈಶಾನ್ಯ ಕ್ಷೇತ್ರದಲ್ಲಿ ೭೩ ಮತದಾರರಿದ್ದು, ಎಂ.ಗೋಪಾಲಗೌಡ-೩೦, ಬಿ.ಎಂ.ಶಂಕರೇಗೌಡ-೦, ಹಾಗೂ ಡಿ.ವಿ.ಹರೀಶ್-೪೩ ಮತ ಪಡೆದಿದ್ದಾರೆ. ಕೋಲಾರ ನೈರುತ್ಯ ಕ್ಷೇತ್ರದಲ್ಲಿ ೭೬ ಮತದಾರರಿದ್ದು ಡಿ.ನಾಗರಾಜ್-೪೫ ಹಾಗೂ ಎನ್.ಸೋಮಶೇಖರ್-೨೯ ಮತಗಳನ್ನ ಪಡೆದಿದ್ದಾರೆ. ಕೋಲಾರ ವೇಮಗಲ್ ಕ್ಷೇತ್ರದಲ್ಲಿ ೮೨ ಮತದಾರರಿದ್ದು, ಟಿ.ವಿ. ಕೃಷ್ಣಪ್ಪ ೧೩, ಬಿ.ರಮೇಶ್ ೬೯ ಮತ ಪಡೆದಿದ್ದಾರೆ.
ಮಾಲೂರು ಕಸಬಾ ಕ್ಷೇತ್ರದಲ್ಲಿ ೬೨ ಮತದಾರರಿದ್ದು, ಎಸ್.ಕೃಷ್ಣಾರೆಡ್ಡಿ-೧೦, ಎಂ.ಎನ್.ಶ್ರೀನಿವಾಸ್-೫೨ ಮತ ಪಡೆದಿದ್ದಾರೆ. ಶ್ರೀನಿವಾಸಪುರ ಅಡ್ಡಗಲ್ ಕ್ಷೇತ್ರದಲ್ಲಿ ೮೪ ಮತದಾರರಿದ್ದು, ಎಂ.ಬೈರಾರೆಡ್ಡಿ-೩೩, ಕೆ.ಕೆ.ಮಂಜುನಾಥ್-೫೧ ಮತ ಪಡೆದಿದ್ದಾರೆ.
ಶ್ರೀನಿವಾಸಪುರ ಯಲ್ದೂರು ಕ್ಷೇತ್ರ ೮೪ ಮತದಾರರ ಪೈಕಿ ಎಲ್.ಶಶಿಕಲಾ-೨೫, ಹನುಮೇಶ್.ಎನ್ -೫೯ ಪಡೆದಿದ್ದಾರೆ. ಬಂಗಾರಪೇಟೆ ಕ್ಷೇತ್ರದಲ್ಲಿ ೫೪ ಮತಗಳಿದ್ದು ಎಸ್.ಎನ್.ನಾರಾಯಣಸ್ವಾಮಿ-೪೨, ಬಿ.ಎಂ.ವೆಂಕಟೇಶ್-೧೨ ಮತ ಪಡೆದಿದ್ದಾರೆ.