- ತರೀಕೆರೆಯಲ್ಲಿ ಪುರಸಭಾ ಕಾರ್ಯಾಲಯದಿಂದ 2026-27ನೇ ಸಾಲಿನ ಬಜೆಟ್ ಪೂರ್ವಬಾವಿ ಸಭೆ
ಕರ್ನಾಟಕ ಪುರಸಭೆಗಳ ವೆಚ್ಚದ ನಿಯಮಗಳ ಕಾಯ್ದೆ 1986ರನ್ನು ಸರ್ಕಾರ ತಿದ್ದುಪಡಿ ಮಾಡಬೇಕು ಇದರ ಅನ್ವಯ ಹಣ ವಿನಿಯೋಗದ ನಿಯಮಗಳು ಸಡಿಲವಾಗಬೇಕು ಎಂದು ಸದಸ್ಯ ಟಿ.ದಾದಾಪೀರ್ ಒತ್ತಾಯಿಸಿದರು.
ಮಂಗಳವಾರ ಪುರಸಭೆಯಲ್ಲಿ ಅಧ್ಯಕ್ಷ ವಸಂತಕುಮಾರ್ ಅಧ್ಯಕ್ಷತೆಯಲ್ಲಿ ನಡೆದ 2026-27ನೇ ಸಾಲಿನ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಮಾತನಾಡಿ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಸದಸ್ಯರ ಸಲಹೆಗಳನ್ನು ಕಾಟಾಚಾರಕ್ಕೆ ಪಡೆಯಲಾಗುತ್ತಿದೆ. ಕೌನ್ಸಿಲ್ ವಿವೇಚನಾತ್ಮಕರ ಪ್ರಕಾರ್ಯಗಳಡಿ ನಿರ್ದಿಷ್ಟ ಕಾರ್ಯಕ್ರಮ ರೂಪಿಸುವಲ್ಲಿ ಆಡಳಿತ ವಿಫಲವಾಗಿದೆ ಎಂದರು.ಪುರಸಭೆಗಳ ವೆಚ್ಚದ ನಿಯಮಗಳ ಸಡಿಲ ಮಾಡುವ ಮೂಲಕ ಜನರ ತೆರಿಗೆಗೆ ನ್ಯಾಯ ಒದಗಿಸಬಹುದು. ಪ್ರತಿ ವರ್ಷ ನಾಗರಿಕ ಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಹಣ ತೆಗೆದಿಡಲಾಗಿದೆ. ಆದರೆ ಯಾವುದೂ ಖರ್ಚು ಮಾಡುತ್ತಿಲ್ಲ. ಹಸಿರೀಕರಣಕ್ಕಾಗಿ ಮೀಸಲಿಟ್ಟ ಹಣ ಹಾಗೆ ಉಳಿದಿದೆ, ಬೀದಿಗಳಲ್ಲಿ ಮರ ಬೆಳೆಸುವ ಕಾರ್ಯ ಅಗುತ್ತಿಲ್ಲ ಎಂದು ದೂರಿದ ಅವರು ಬಡವರ ಅಂತ್ಯ ಸಂಸ್ಕಾರಕ್ಕೆ ₹5000 ಬಡರೋಗಿಗಳ ಚಿಕಿತ್ಸೆಗೆ ಸಹಾಯಕ್ಕಾಗಿ ₹10,000 ನಿರ್ಗತಿಕರಿಗೆ ಮಾಸಿಕ ₹10,000 ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹10,000 ನೀಡಲು ಆಯವ್ಯಯದಲ್ಲಿ ಅವಕಾಶ ಮಾಡಿಕೊಳ್ಳಬೇಕು. ಇದಕ್ಕಾಗಿ ₹5 ಲಕ್ಷ ಮೀಸಲಿಡ ಬೇಕು ಎಂದು ಹೇಳಿದರು.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಆಸ್ಪತ್ರೆ, ಕ್ಲಿನಿಕ್, ಕಲ್ಯಾಣ ಮಂದಿರಗಳು, ಹಾರ್ಡ್ ವೇರ್ ಗಳು ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ಷೋ ರೂಂಗಳ ತೆರಿಗೆ ಹೆಚ್ಚಿಸಬೇಕು. ಪೆಟ್ರೋಲ್ ಬಂಕ್ ಮತ್ತು ಆಟೋ ಮೊಬೈಲ್ ಗಳು, ಹೋಟೆಲ್-ವಸತಿ ಗೃಹಗಳು ಹಾಗೂ ಮದ್ಯ ಮಾರಾಟ ಅಂಗಡಿಗಳ ತೆರಿಗೆ ಹಾಗೂ ಉದ್ದಿಮೆ ಪರವಾನಿಗಿಗಳ ಶುಲ್ಕ ಹೆಚ್ಚಿಸಬೇಕು. ಖಾಸಗಿ ಬಸ್ ನಿಲ್ದಾಣಗಳಲ್ಲಿ ಮತ್ತು ಅಗತ್ಯವಿರುವ ಕಡೆ ದ್ವಿಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಿ ಶುಲ್ಕ ವಿಧಿಸಬೇಕು ಎಂದರು.
ಸದಸ್ಯ ಬಸವರಾಜ್ ಮಾತನಾಡಿ ಪಟ್ಟಣದ ಬಿ.ಎಚ್.ರಸ್ತೆ ಸ್ಮಶಾನ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದ್ದರೂ ಅಭಿವೃದ್ಧಿ ಪಡಿಸುತ್ತಿಲ್ಲ. ಇತ್ಯಾದಿ ಮೂಲಸೌಲಭ್ಯ ಒದಗಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.
ಪುರಸಭೆ ನಾಮಿನಿ ಸದಸ್ಯ ಟಿ.ಜಿ.ಮಂಜುನಾಥ್ ಮಾತನಾಡಿ ಶವ ಇಡುವ ಫ್ರೀಜರ್ ಬಾಕ್ಸ್ ಸೌಲಭ್ಯ ಒದಗಿಸಿ ಸಾರ್ವಜ ನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.ಪುರಸಭೆ ಸದಸ್ಯ ರಂಗನಾಥ್, ಗಿರಿಜಾ ಪ್ರಕಾಶ್ ವರ್ಮ, ಆಶಾ ಅರುಣ್ ಕುಮಾರ್ ವಿವಿಧ ಚರ್ಚೆಯಲ್ಲಿ ಭಾಗವಹಿಸಿದ್ದರು. ಪುರಸಭೆ ಅಧ್ಯಕ್ಷ ವಸಂತಕುಮಾರ್, ಉಪಾಧ್ಯಕ್ಷೆ ಗೀತಾ ಗಿರಿರಾಜ್, ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಅನಿಲ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ಎಂ.ರಂಜನ್ ಪುರಸಭೆ ವ್ಯವಸ್ಥಾಪಕ ವಿಜಯಕುಮಾರ್, ಪುರಸಭೆ ಪರಿಸರ ಅಭಿಯಂತರಾದ ತಾಹಿರಾ ತಸ್ನೀಮ್, ಕಂದಾಯ ಅಧಿಕಾರಿ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ತರೀಕೆರೆ ಪುರಸಭೆಯಲ್ಲಿ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಬಾವಿ ಸಭೆಯಲ್ಲಿ ಉಪಾಧ್ಯಕ್ಷೆ ಗೀತಾ ಗಿರಿರಾಜ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮುಖ್ಯಾಧಿಕಾರಿ ಕೆ.ಎಂ.ರಂಜನ್ ಇದ್ದರು.