ಕನ್ನಡಪ್ರಭ ವಾರ್ತೆ ಶಿರಾ ಪೌರ ಕಾರ್ಮಿಕರು ನಾಗರಿಕ ಸಮಾಜದ ಬೆನ್ನೆಲುಬಾಗಿದ್ದಾರೆ. ನಗರದ ಸ್ವಚ್ಛತೆ, ಆರೋಗ್ಯಕರ ವಾತಾವರಣ ನಿರ್ಮಾಣಕ್ಕೆ ಹಗಲು ರಾತ್ರಿ ಎನ್ನದೆ ಶ್ರಮಿಸುತ್ತಾರೆ. ಅಂತಹ ಮಹತ್ತರ ಕಾರ್ಯ ಮಾಡುವ ಪೌರ ಕಾರ್ಮಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ ಅವರಿಗೆ ಕನ್ನಡಕ ನೀಡುವ ಮೂಲಕ ಮಾರಕ್ಕ ಟೀಚರ್ ಸೇವಾ ಟ್ರಸ್ಟ್ ಉದ್ಘಾಟಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಪೌರಾಯುಕ್ತ ರುದ್ರೇಶ್.ಕೆ. ಅವರು ಹೇಳಿದರು. ಅವರು ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಮಾರಕ್ಕ ಟೀಚರ್ ಸೇವಾ ಟ್ರಸ್ಟ್ ಉದ್ಘಾಟನೆ ಪ್ರಯುಕ್ತ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪರೀಕ್ಷಾ ಮತ್ತು ಉಚಿತ ಕನ್ನಡಕ ವಿತರಣಾ ಶಿಬಿರ, ಮಧುಮೇಹ, ರಕ್ತದೊತ್ತಡ ಪರೀಕ್ಷಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜ ನಮಗೆ, ಶಿಕ್ಷಣ, ಆರೋಗ್ಯ ಸೇರಿದಂತೆ ಎಲ್ಲವನ್ನೂ ನೀಡಿದೆ. ನಾವು ಅದೇ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಸಂಘ, ಸಂಸ್ಥೆಗಳು ಸಮಾಜದಲ್ಲಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವುದರ ಜತೆಗೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಅಂತಹ ಕೆಲಸವನ್ನು ಮಾರಕ್ಕ ಟೀಚರ್ ಸೇವಾ ಟ್ರಸ್ಟ್ ಮಾಡಲಿ ಎಂದು ಹಾರೈಸಿದರು. ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೆರೆ ಮಹೇಶ್ ಮಾತನಾಡಿ, ಮಾರಕ್ಕ ಅವರು ಸರಕಾರಿ ಶಾಲೆಯ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರವೂ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಮಾರಕ್ಕ ಟೀಚರ್ ಮಾತನಾಡಿ ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ. ನಾವು ಮಾಡುವ ಕಾರ್ಯದಲ್ಲಿ ನಿಷ್ಠೆ ಇದ್ದರೆ ಎಲ್ಲರಿಗೂ ಒಳಿತಾಗಲಿದೆ. ನಿಮ್ಮ ಸೇವೆಯ ಪ್ರತಿಫಲ ನಿಮಗೆ ಸಿಗಲಿದೆ ಎಂದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ಮಾತನಾಡಿ ಪೌರ ಕಾರ್ಮಿಕರು ಸೈನಿಕರಿದ್ದಂತೆ ಅವರಿಗೆ ಹೆಚ್ಚಿನ ಕೆಲಸದ ಒತ್ತಡ ಇರುತ್ತದೆ. ಇದರ ನಡುವೆ ಅವರು ಆರೋಗ್ಯದ ಕಡೆ ಗಮನ ಕೊಡುವುದಿಲ್ಲ. ಆದ್ದರಿಂದ ಪೌರ ಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಕೊಡಿ ಎಂದರು.