ಮುರುಘಾಮಠ ಜಾತ್ರೆ: ವಿಜೃಂಭಣೆಯ ಜಂಗಿ ನಿಖಾಲಿ ಕುಸ್ತಿ

KannadaprabhaNewsNetwork | Published : Feb 19, 2024 1:34 AM

ಸಾರಾಂಶ

ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು. ಹರಿಯಾಣ ಮತ್ತು ಮಹಾರಾಷ್ಟ್ರದ ಪೈಲ್ವಾನರು ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಮಹಿಳಾ ಕುಸ್ತಿಪಟುಗಳು ಆಗಮಿಸಿದ್ದು ವಿಶೇಷವಾಗಿತ್ತು.

ಧಾರವಾಡ: ಇಲ್ಲಿಯ ಮಧಥನಿ ಮುರುಘೇಂದ್ರ ಶಿವಯೋಗಿಗಳ ಜಾತ್ರಾಮಹೋತ್ಸವ ಅಂಗವಾಗಿ ಮುರಘಾಮಠದ ಆವರಣದಲ್ಲಿ ರಾಜ್ಯ ಮಟ್ಟದ ಜಂಗಿ ನಿಖಾಲಿ ಕುಸ್ತಿಗಳು ವಿಜೃಂಭನೆಯಿಂದ ಜರುಗಿದವು.

ಶ್ರೀಮಠದ ಅಪ್ಪಗಳ ಗದ್ದುಗೆಯಲ್ಲಿ ಗದೆಗಳಿಗೆ ಪೂಜೆ ಸಲ್ಲಿಸಿ ವಾದ್ಯಮೇಳಗಳೊಂದಿಗೆ ಮೆರವಣಿಗೆಯ ಮುಖಾಂತರ ಆವರಣದಲ್ಲಿ ನಿರ್ಮಿಸಿದ ಅಖಾಡಕ್ಕೆ ತರಲಾಯಿತು. ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು. ಹರಿಯಾಣ ಮತ್ತು ಮಹಾರಾಷ್ಟ್ರದ ಪೈಲ್ವಾನರು ಹಾಗೂ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಮಹಿಳಾ ಕುಸ್ತಿಪಟುಗಳು ಆಗಮಿಸಿದ್ದು ವಿಶೇಷವಾಗಿತ್ತು. ಮುರುಘಾಮಠದ ತ್ರಿವಳಿ ಪೂಜ್ಯರ ಹೆಸರಿನಲ್ಲಿ, ಮುರುಘೇಂದ್ರ ಶಿವಯೋಗಿ ಕೇಸರಿ, ಮೃತ್ಯುಂಜಯ ಶಿವಯೋಗಿ ಕೇಸರಿ, ಮಹಾಂತ ಶಿವಯೋಗಿ ಕೇಸರಿ ಎಂದು ವೈಶುದೀಪ ಫೌಂಡೇಶನ್ ಅಧ್ಯಕ್ಷರಾದ ಶಿವಲೀಲಾ ವಿನಯ ಕುಲಕರ್ಣಿಯವರು ನಾಲ್ಕು ಬೆಳ್ಳಿ ಗಧೆಗಳನ್ನು ವಿಜೇತರಿಗೆ ಕೊಡುಗೆಯಾಗಿ ನೀಡಿದರು.

ಭಾರೀ ತುರುಸಿನ ಜಿದ್ದಾಜಿದ್ದಿಯಿಂದ ಸೆಣಸಿದ ಕುಸ್ತಿಪಟುಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನು ತಮ್ಮ ಪಟ್ಟುಗಳಿಂದ ರೋಮಾಂಚನಗೊಳ್ಳುವಂತೆ ಅಖಾಡದಲ್ಲಿ ಮಿಂಚಿದರು. ಕರ್ನಾಟಕ ಕೇಸರಿ ಗೋಪಾಲ ಕೋಳಿ ಹಾಗೂ ಹರಿಯಾಣಾ ಕೇಸರಿ ನವೀನಕುಮಾರ ಅವರ ಸೆಣಸಾಟ ಮದಗಜಗಳ ಸೆಣಸಾಟದಂತೆ ಕಂಡಿತು. ಕೊನೆಯಲ್ಲಿ ಗೋಪಾಲ ಕೋಳಿ ಗೆದ್ದು ಬೀಗಿದರು. ಈ ಸಂಧರ್ಭದಲ್ಲಿ ವಿಜೇತ ಕುಸ್ತಿಪಟುಗಳಿಗೆ ನಗದು ಬಹುಮಾನ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಾಜಿ ಕುಸ್ತಿಪಟುಗಳನ್ನು ಸನ್ಮಾನಿಸಲಾಯಿತು.

ವೈಶಾಲಿ ಕುಲಕರ್ಣಿ, ಅರವಿಂದ ಏಗನಗೌಡರ, ರಾಜಶೇಖರ ಕಮತಿ, ಮಾಜಿ ಕುಸ್ತಿ ಪಟು ಅಶೋಕ ಏಣಗಿ, ನಿಂಗಪ್ಪ ಕಲ್ಲೂರ, ಮುಕ್ತುಮಸಾಬ ಶಿಂಗನಳ್ಳಿ, ರಂಜಾನಸಾಬ ಲೋಕೂರ, ಸುರೇಶ ಮುನವಳ್ಳಿ, ದ್ಯಾಮಣ್ಣ ತಡಸಿನಕೊಪ್ಪ, ಸಂಜೀವ ಲಕಮನಹಳ್ಳಿ, ದೀಪಕ ಇಂಡಿ, ಅಶೋಕ ಸೂರ್ಯವಂಶಿ, ಕಿಶೋರ ಬಡಿಗೇರ, ಮೃತ್ಯುಂಜಯ ಶಿದ್ನಾಳ, ಈಶ್ವರ ಮಾಲಗಾರ, ಮಂಜು ಮಲ್ಲಿಗವಾಡ, ವಿರೂಪಾಕ್ಷಿ ಮಲ್ಲಿಗವಾಡ, ಹನುಮಂತ ತಡಸಿನಕೊಪ್ಪ, ಫಕ್ಕೀರ ತಡಸಿನಕೊಪ್ಪ ಹಾಗೂ ವೀರಭದ್ರೇಶ್ವರ ಸೇವಾ ಸಮಿತಿ ಸದಸ್ಯರು ಇದ್ದರು.

Share this article