ಹಾವೇರಿ: ಯೋಗಿಗಳ ಪರಂಪರೆಯಲ್ಲಿ ಮುಂಚೂಣಿಯಲ್ಲಿದ್ದ ಮುರುಘೇಂದ್ರ ಶ್ರೀಗಳು ಶಿವಪಥದಲ್ಲಿದ್ದು, ಲೋಕಪಥದತ್ತ ಸಾಗಿದ ಮಹನೀಯರಾಗಿದ್ದರು ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಉತ್ತರ ಕರ್ನಾಟಕದ ಪ್ರಸಿದ್ಧ ಸಿದ್ಧಪುರುಷರಾಗಿದ್ದ ಮುರುಘೇಂದ್ರ ಶಿವಯೋಗಿಗಳು ಜ್ಞಾನ, ಯೋಗ ಹಾಗೂ ಅದ್ಭುತ ವಾಕ್ಸಿದ್ಧಿಯ ಮೂಲಕ ಲಕ್ಷಾಂತರ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಿದ ಮಹಾನ್ ದಾರ್ಶನಿಕರಾಗಿದ್ದರು. ಶಿವಯೋಗಿಗಳಾಗಿ, ಮಹಾತಪಸ್ವಿಗಳಾಗಿ, ಅಂತರಜ್ಞಾನಿಗಳಾಗಿ ಹಾಗೂ ತ್ರಿಕಾಲಜ್ಞಾನಿಗಳಾಗಿ ಆದರ್ಶ ಜೀವನ ನಡೆಸಿ ತಮ್ಮ ಶಿವಪೂಜಾನುಷ್ಠಾನದ ಪ್ರಭಾವಮಯ ಜ್ಯೋತಿಯನ್ನು ಸಮಾಜಕ್ಕೆ ದಯಪಾಲಿಸಿ ಜೀವನ್ಮುಕ್ತರಾಗಿದ್ದರು ಎಂದು ಹೇಳಿದರು.
ಲೋಕಮಾನ್ಯ ತಿಲಕರು ೧೯೧೫ರಲ್ಲಿ ಅಥಣಿಗೆ ಭೇಟಿ ನೀಡಿದ ವೇಳೆ ಮುರುಘೇಂದ್ರ ಶಿವಯೋಗಿಗಳ ದರ್ಶನ ಪಡೆದು ಭಾರತದ ಸ್ವಾತಂತ್ರ್ಯದ ಕುರಿತು ಪ್ರಶ್ನಿಸಿದಾಗ, ''''''''ಸ್ವಾತಂತ್ರ್ಯ ಸಿಗುತ್ತದೆ, ಆದರೆ ಅದನ್ನು ನೀವು ನೋಡುವುದಿಲ್ಲ'''''''' ಎಂದು ಶಿವಯೋಗಿಗಳು ಭವಿಷ್ಯ ನುಡಿದಿದ್ದರೆಂದು ಅವರು ಸ್ಮರಿಸಿದರು. ಆನಂತರ ಸ್ವಾತಂತ್ರ್ಯ ದೊರಕುವ ಮುನ್ನವೇ ತಿಲಕರು ನಿಧನರಾಗಿದ್ದು, ಶಿವಯೋಗಿಗಳ ವಾಕ್ಸಿದ್ಧಿಗೆ ಸಾಕ್ಷಿಯಾಗಿದೆ ಎಂದರು.ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಹಾಗೂ ಮುರುಘೇಂದ್ರ ಶಿವಯೋಗಿಗಳವರು ಶ್ರೀಮಠಕ್ಕೆ ಎರಡು ಕಣ್ಣುಗಳಿದ್ದಂತೆ. ಇಬ್ಬರೂ ಮಹಾನ್ ಯೋಗಿಗಳಾಗಿದ್ದು, ಅವರ ಸ್ಮರಣೆಯಿಂದ ಸಮಾಜಕ್ಕೆ ಒಳಿತು ಉಂಟಾಗುತ್ತದೆ ಎಂಬ ಕಾರಣದಿಂದಲೇ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕಿ ರುದ್ರಮ್ಮ ನೆಲವಿಗಿ ಮಾತನಾಡಿ, ಮಹಾನ್ ಸಾಧಕರ ಜೀವನ ಸಾಧನೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಲಕ್ಕಣ್ಣವರ ಸೋದರಿಯರು ವಚನ ಗಾಯನ ನಡೆಸಿದರು. ಗೂಳಪ್ಪ ಅರಳಿಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿ.ಜಿ. ಯಳಗೇರಿ ಸ್ವಾಗತಿಸಿದರು. ನಿಂಗಪ್ಪ ಆರೇರ ವಂದಿಸಿದರು.