ಮಂಗಳೂರು: ಭಾರತೀಯ ಕಲೆಗಳಲ್ಲಿ ಸಿಗುವ ಏಕಾಗ್ರತೆ ಬೇರೆ ಯಾವುದರಲ್ಲೂ ಸಿಗುವುದಿಲ್ಲ, ಹಾಗಾಗಿ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮುಂದುವರಿಸಲು ವಿಶೇಷ ಒತ್ತು ನೀಡಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹೇಳಿದರು. ಮಂಗಳೂರಿನ ಸ್ವರಲಯ ಸಾಧನಾ ಫೌಂಡೇಷನ್ ವತಿಯಿಂದ ಬುಧವಾರ ಇಲ್ಲಿನ ಪುರಭವನದಲ್ಲಿ ನಡೆದ ‘ಸ್ವರ ಸಂಕ್ರಾಂತಿ’ ಉತ್ಸವದಲ್ಲಿ ಹಿಂದೂಸ್ತಾನಿ ಗಾಯಕ, ಪಂಡಿತ್ ಅಜೋಯ್ ಚಕ್ರವರ್ತಿ ಅವರಿಗೆ ‘ಸ್ವರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು.
ನಿಡಸೋಸಿ ದುರದುಂಡೇಶ್ವರ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನದಲ್ಲಿ, ಭಾರತೀಯ ಸಂಸ್ಕೃತಿ ಉಳಿಸಲು ಇಂತಹ ಸಂಗೀತ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಬೆಳೆಸುವುದು ಮುಖ್ಯ. ಈ ಮೂಲಕ ಮಂಗಳೂರಿನಲ್ಲಿ ಸಂಗೀತ ಕ್ರಾಂತಿ ಆಗುತ್ತಿದ್ದು, ಸಂಗೀತವನ್ನು ದೈವತ್ವಕ್ಕೆ ಏರಿಸುವ ಸಿದ್ಧಿ ಪಂಡಿತ್ ಅಜೋಯ್ ಚಕ್ರವರ್ತಿಗೆ ಇದೆ ಎಂದರು. ಸ್ವರಲಯ ಫೌಂಡೇಷನ್ ಮಾರ್ಗದರ್ಶಕ ವಿದ್ವಾನ್ ವಿಠಲ ರಾಮಮೂರ್ತಿ, ಅಧ್ಯಕ್ಷ ಶ್ರೀಕೃಷ್ಣ ಎನ್, ಉಪಾಧ್ಯಕ್ಷ ರಮೇಶ್ ಕೆ.ಜಿ, ಟ್ರಸ್ಟಿ ವಿಶ್ವಾಸ್ಕೃಷ್ಣ ಎಚ್, ಕೋಶಾಧಿಕಾರಿ ಶ್ರೇಷ್ಠಲಕ್ಷ್ಮಿ ಇದ್ದರು.ಸ್ವರಲಯ ಫೌಂಡೇಷನ್ ಉಪ ಕಾರ್ಯದರ್ಶಿ ಆರ್.ಸಿ.ಭಟ್ ವಂದಿಸಿದರು. ಪ್ರದೀಪ್ ಬಡೆಕ್ಕಿಲ ನಿರೂಪಿಸಿದರು. ಬಳಿಕ ರಾಗ್ ಮಧುವಂತಿಯೊಂದಿಗೆ ಸಂಗೀತ ಕಛೇರಿ ಆರಂಭಿಸಿದ ಪಂಡಿತ್ ಅಜೋಯ್ ಚಕ್ರವರ್ತಿ ಅವರು, ರಾಗಗಳಿಗೆ ಸಂಬಂಧಿಸಿದ ಮಾಹಿತಿಯೊಂದಿಗೆ ಗಾಯನ ಪ್ರಸ್ತುತಪಡಿಸಿದರು. ಅಜೋಯ್ ಚಕ್ರವರ್ತಿ ಅವರ ಗಾಯನದ ಸುಧೆ ಕಲಾರಸಿಕರನ್ನು ರಂಜಿಸಿತು.