ಕೊಪ್ಪಳ: ಮೊದಲು ಭಾಗ್ಯನಗರದಲ್ಲಿ ಎರಡು ಹಬ್ಬಗಳು ನಡೆಯುತ್ತಿದ್ದವು. ಒಂದು ಸಾಹಿತ್ಯದ ಹಬ್ಬ, ಇನ್ನೊಂದು ಸಂಗೀತದ ಹಬ್ಬ. ಸಂಗೀತದ ಹಬ್ಬ ಈಗಲೂ ಚಾಲ್ತಿಯಲ್ಲಿದೆ, ಅದಕ್ಕೆ ಮುಖ್ಯ ಕಾರಣ ರಾಮಚಂದ್ರಪ್ಪ ಉಪ್ಪಾರ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎ.ಎಂ. ಮದರಿ ಹೇಳಿದರು.ಭಾಗ್ಯನಗರದ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ಗಂಗಮ್ಮ ಲಕ್ಷ್ಮಣಸಾ ಖೋಡೆ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀಗುರು ಪಂಚಾಕ್ಷರಿ ಸಂಗೀತೋತ್ಸವ ವಿಶೇಷ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಭಾಗ್ಯನಗರದಲ್ಲಿ ಸಂಗೀತ ಜೀವಂತವಾಗಿರುವುದು ರಾಮಚಂದ್ರಪ್ಪ ಉಪ್ಪಾರರಿಂದ ಮಾತ್ರ, ಸುಮಾರು 40 ವರ್ಷದಿಂದ ಭಾಗ್ಯನಗರದಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟರು.ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಸಂಸ್ಥೆ ಸ್ಥಾಪನೆ ಆಗಿ 22 ವರ್ಷವಾಗಿದೆ. ಕೊಪ್ಪಳದ ಮೊಟ್ಟ ಮೊದಲ ಸಂಗೀತಗಾರ ಹಾಗೂ ಭಾಗ್ಯನಗರದ ಮೊದಲ ಸಂಗೀತ ಸಂಸ್ಥೆ ಶ್ರೀಗುರು ಪಂಚಾಕ್ಷರಿ ಸಂಗೀತ ಸೇವಾ ಸಂಸ್ಥೆ, ಈ ಹಿಂದೆ ಕುದುರಿಮೋತಿ ಹೋರಾಟದ ಹಾಡುಗಳನ್ನು ಸಂಗೀತ ನಿರ್ದೇಶನ ಮಾಡಿದವರು ರಾಮಚಂದ್ರಪ್ಪ ಉಪ್ಪಾರ. ಯಾರು ನಿರಂತರ ಪ್ರಯತ್ನ ಮಾಡುತ್ತಾರೆ ಅವರಿಗೆ ಮಾತ್ರ ಸಂಗೀತ ಒಲಿಯುತ್ತದೆ. ಮೊದಲ ಪ್ರಯತ್ನ ಮಾಡಬೇಕು. ಅದಕ್ಕೆ ಪ್ರಯತ್ನಂ ಸರ್ವ ಸಿದ್ದಿ ಸಾಧನೆ ಎಂದು ಹೇಳುತ್ತಾರೆ, ಪ್ರಯತ್ನಕ್ಕೆ ಫಲ ಸಿಕ್ಕೇ ಸಿಗುತ್ತೆ ಎಂದು ಹೇಳಿದರು.ಅಲ್ಲಮಪ್ರಭು ಬೆಟ್ಟದೂರು, ಎ.ಎಂ. ಮದರಿ, ದಾನಪ್ಪ ಜಿ.ಕೆ. ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಮಚಂದ್ರಪ್ಪ ಉಪ್ಪಾರ ವಹಿಸಿದ್ದರು. ಹೊನ್ನೂರುಸಾಬ ಭೈರಾಪುರ, ಭಾಗ್ಯನಗರ ಪಪಂ ಸದಸ್ಯ, ರಾಘವೇಂದ್ರ ಕೋಣಿ ಭಾಗ್ಯನಗರ ಉಪಸ್ಥಿತರಿದ್ದರು.ಮಂಗಲವಾದ್ಯ ಹರೀಶ್ ಕುಮಾರ್ ತುಮಕೂರು, ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬದ್ರಿನಾಥ್ ನರಗುಂದ, ತಬಲಾ ಸೋಲೋ ರಿಜ್ವಾನ್ ಗಂಗಾವತಿ, ಸುಗಮ ಸಂಗೀತ ಕವಿತಾ ಗಂಗೂರ ಬಳ್ಳಾರಿ, ತತ್ವಪದ ವಸಂತಕುಮಾರ್ ಕೆ. ಬಳ್ಳಾರಿ, ದಾಸವಾಣಿ ಸುಬ್ರಹ್ಮಣ್ಯಶರ್ಮ ಕಾರಟಗಿ, ಜಾನಪದ ಗೀತೆ ಸ್ನೇಹ ಕೆ.ಎಂ. ಗಂಗಾವತಿ, ಬಾನ್ಸುರಿ ವಾದನ ಪುಟ್ಟರಾಜ ಬಣ್ಣದ, ಸಮೂಹ ನೃತ್ಯ ಅಪರ್ಣಾ ಹೆಗಡೆ ಹಾಗೂ ತಂಡದಿಂದ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರಪ್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲಾದಲ್ಲಿ ಮಾರುತಿ ದೊಡ್ಡಮನಿ ಗದಗ, ರಿದಂ ಪ್ಯಾಡ್ನಲ್ಲಿ ನಂದೀಶ್ ಹೀರೆಮಠ ಬೆಂಗಳೂರು, ಗಿಟಾರ್ನಲ್ಲಿ ತಿಪ್ಪೇಶ್ ಹಿರೇಮಠ ಬೆಂಗಳೂರು, ಡೊಲಕ್ನಲ್ಲಿ ಮುನ್ನಾ ಚಿತ್ರದುರ್ಗ, ತಾಳವಾದ್ಯದಲ್ಲಿ ಕೃಷ್ಣ ಸೊರಟೂರ ಮೆರುಗು ನೀಡಿದರು.