ಸಂಗೀತ ಹೊಸ ಬದುಕಿಗೆ ಪ್ರೇರಣೆ ನೀಡುವ ಶಕ್ತಿ ಹೊಂದಿದೆ

KannadaprabhaNewsNetwork |  
Published : Apr 02, 2026, 01:45 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಸಂತ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಹಿರಿಯೂರು

ಸಂಗೀತವು ದುಃಖ,ಸಂಕಟ, ವೇದನೆ ದೂರ ಮಾಡಿ ಮನಸ್ಸನ್ನು ಹಗುರ ಗೊಳಿಸಿ ಹೊಸ ಬದುಕಿಗೆ ಪ್ರೇರಣೆ ನೀಡುತ್ತದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಕೆ.ಪ್ರಮೋದ್ ಅಭಿಪ್ರಾಯಪಟ್ಟರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳವಿಭಾಗಿ ಶ್ರೀ ರಂಗನಾಥ ಸ್ವಾಮಿ ಸಾಂಸ್ಕೃತಿಕ ಕಲಾಸಂಘ ಸಕ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರು ಸಂಯುಕ್ತಾಶ್ರಯದಲ್ಲಿ ನಡೆದ ವಸಂತ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಸಂಗೀತ ರಂಗಕಲೆ ಮಾನವ ಬದುಕಿನ ಅವಿಭಾಜ್ಯ ಅಂಗವಾಗಿದ್ದು ನಾಡಿನ ಕಲೆ ಅನಾವರಣಕ್ಕೆ ಕಾರಣವಾಗಿವೆ. ಇವು ಮನುಕುಲಕ್ಕೆ ಬೇಕಾದ ಸೌಹಾರ್ದತೆ, ಸಹಬಾಳ್ವೆ, ಪ್ರೀತಿ, ಪ್ರೇಮ, ಮಮತೆ ಹಾಗೂ ಭಾವೈಕ್ಯತೆಯನ್ನು ತಂದುಕೊಡುತ್ತವೆ ಎಂದರು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಜೆ.ದಿನೇಶ್ ಮಾತನಾಡಿ, ಸಂಗೀತ ಒಂದು ತಪಸ್ಸು.ಸಂಗೀತವನ್ನು ಕೇಳುವುದರಿಂದ ಮತ್ತು ಹಾಡುವುದರಿಂದ ಮಾನಸಿಕ ನೆಮ್ಮದಿ ಏಕಾಗ್ರತೆ ದೊರೆಯುತ್ತದೆ. ಸಂಗೀತಕ್ಕೆ ರೋಗರುಜಿನ ದೂರಮಾಡುವ ಮಳೆ ತರಿಸುವ ಶಕ್ತಿ ಇದೆ. ಆದುದರಿಂದ ಸಂಗೀತ ದಿವ್ಯ ಔಷಧಿ ಆಗಿದೆ ಎಂದರು.

ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಡಿ. ಧರಣೇಂದ್ರಯ್ಯ ಮಾತನಾಡಿ, ಸಂಗೀತ ನಾಡಿನ ಸಾಂಸ್ಕೃತಿಕ ಕಲೆಯಾಗಿದ್ದು ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ನಾವು ಮತ್ತು ನೀವೆಲ್ಲರೂ ಮಾಡಬೇಕಿದೆ. ಶಾಲೆ ಕಾಲೇಜುಗಳಲ್ಲಿ ಪಠ್ಯ ಚಟುವಟಿಕೆಯಷ್ಟು ಪಠ್ಯೇತರ ಚಟುವಟಿಕೆಗಳು ನಡೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕ್ರಿಯಾಶೀಲತೆ ಹೆಚ್ಚುತ್ತದೆ. ಆದಕಾರಣ ರಾಜ್ಯ ಸರ್ಕಾರವು ಪ್ರಾಥಮಿಕ ಪ್ರೌಢ ಪದವಿ ಪೂರ್ವ ಹಾಗೂ ವಸತಿ ಶಾಲೆಗಳಲ್ಲಿ ಖಾಲಿ ಇರುವ ಸಂಗೀತ ಹಾಗೂ ನಾಟಕ ಶಿಕ್ಷಕರನ್ನು ಕೂಡಲೇ ಭರ್ತಿ ಮಾಡಬೇಕು.ಇದರಿಂದ ವಿದ್ಯಾರ್ಥಿಗಳನ್ನು ಉತ್ತಮ ಕಲಾವಿದರನ್ನಾಗಿ ರೂಪಿಸಲು ಸಹಾಯಕವಾಗುತ್ತದೆ ಎಂದರು.

ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಸಂಗೀತಕ್ಕೆ ಮೊದಲು ಯಾವುದೇ ರಾಗ ತಾಳ ಇರಲಿಲ್ಲ. ಕ್ರಿಸ್ತ ಶಕ ಎಂಟನೇ ಶತಮಾನದಲ್ಲಿ ಬದುಕಿದ್ದ ಮಹರ್ಷಿ ಮಾತಂಗ ಮುನಿಯವರು ಹಕ್ಕಿಗಳ ಚಿಲಿಪಿಲಿ ಗಾನ, ಹರಿಯುವ ನದಿಯ ಜುಳು ಜುಳುನಾದ, ಬೀಸುವ ತಣ್ಣನೆಯ ಗಾಳಿಯ ಸುನಾದ ಆಧರಿಸಿ ಮೊದಲಿಗೆ ಸಂಗೀತಕ್ಕೆ ಹೊಸ ರಾಗ ತಾಳ ನೀಡಿದರು. ಇವರು ಕೊಟ್ಟ ರಾಗ ಮತ್ತು ತಾಳಗಳ ಆಧಾರದ ಮೇಲೆ ಇಂದು ಹಿಂದುಸ್ತಾನಿ ಸಂಗೀತ ಕರ್ನಾಟಕ ಸಂಗೀತ ಹಾಗೂ ಪಾಶ್ಚಿಮಾತ್ಯ ಸಂಗೀತ ರೂಪುಗೊಂಡಿದೆ. ಆದುದರಿಂದ ಮಹರ್ಷಿ ಮಾತಂಗಮುನಿಯವರನ್ನು ಸಂಗೀತದ ಪಿತಾಮಹ ಎಂದು ಕರೆಯಲಾಗುತ್ತಿದ್ದು ಸಂಗೀತಕ್ಕೆ ಮಹರ್ಷಿ ಮಾತಂಗ ಮುನಿಯವರ ಕೊಡುಗೆ ಅಪಾರವಾಗಿದೆ ಎಂದರು. ಇದೇ ವೇಳೆ ವಸಂತ ಸಂಗೀತ ಗಾನ ಸಂಭ್ರಮ ಕಾರ್ಯಕ್ರಮದಲ್ಲಿ ಹೊಸದುರ್ಗದ ಓ. ಮೂರ್ತಿ ಮತ್ತು ತಂಡದಿಂದ ಸುಗಮ ಸಂಗೀತ,ಬೋಸೆ ದೇವರಹಟ್ಟಿಯ ಎನ್. ಮಂಜಣ್ಣ ಮತ್ತು ತಂಡದಿಂದ ಕನ್ನಡ ಗೀತ ಗಾಯನ, ಪೀಲಾಪುರದ ಆರ್. ಕಂಠೇಶ್ ಮತ್ತು ತಂಡದಿಂದ ರಂಗಗೀತೆ ಗಾಯನ,ಟಿ. ಸುಲೋಚನಾ ಮತ್ತು ತಂಡದಿಂದ ಕರ್ನಾಟಕ ಸಂಗೀತ, ಎಚ್.ವೇದ ಪುಷ್ಪ ಮತ್ತು ತಂಡದಿಂದ ಜಾನಪದ ಸಂಗೀತ, ಎಚ್.ಆರ್. ಗೀತಾರಾಧಾಕೃಷ್ಣ ಮತ್ತು ತಂಡದಿಂದ ತತ್ವಪದ ಗಾಯನ ವನ್ನು ಪ್ರಸ್ತುತ ಪಡಿಸಲಾಯಿತು.ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಎಚ್ ಟಿ. ವಿಮಾಲಾಕ್ಷಿ,ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರ್ತಿಕೋಟೆ ಮಹಾಸ್ವಾಮಿ,ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಬಿ.ಆರ್. ಹೇಮಲತಾ, ಐಕ್ಯೂಎಸಿ ಸಂಚಾಲಕ ಮಹಮ್ಮದ್ ಸಾದತ್, ಸಹಾಯಕ ಪ್ರಾಧ್ಯಾಪಕರಾದ ಬಸವರಾಜ್ ಟಿ. ಬೆಳಗಟ್ಟ,ಡಾ.ಗಂಗಾಧರ್, ಡಾ. ದೇವಿಕ, ಬಿ.ಎಸ್. ರಾಮಪ್ಪ,ವಲಿ, ಹಾರ್ಮೋನಿಯಂ ವಾದಕ ಎನ್. ಶಿವಲಿಂಗಪ್ಪ, ತಬಲ ವಾದಕ ಸುಬ್ರಹ್ಮಣ್ಯ, ಅಭಿಷೇಕ್,ನವೀನ್,ಮಹಾಲಿಂಗಪ್ಪ,ಸಂಜೀವ್,ಡಾ ಶರಣಪ್ಪ,ಜಯಶ್ರೀ, ಸಂಜಯ್,ರಮೇಶ್, ಅನಿತಾ ಕುಮಾರಿ,ಲಕ್ಷ್ಮಿ ಬಾಯಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ಧಗಂಗಾ ಮಠ ಪ್ರಜಾಪ್ರಭುತ್ವದ ಕೈಗನ್ನಡಿ: ಮುರ್ಮು
ಅಯತೊಲ್ಲಾ ಖಮೇನಿ ನಿಧನಕ್ಕೆ ಕಲಬುರಗಿ ಪಾಲಿಕೆ ಸಂತಾಪ