ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಬೆಸಗರಹಳ್ಳಿ ಅಡ್ಡರಸ್ತೆ ಬಳಿ ಆಗಮಿಸಿದ ನೂರಾರು ಪ್ರತಿಭಟನಾಕಾರರು, ಸ್ಥಳೀಯ ರೈತರು ನೀರಾವರಿ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂದರು.
ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಮದ್ದೂರು-ಕೊಪ್ಪ ಮಾರ್ಗದ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡು ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳದಲ್ಲಿದ್ದ ಪೋಲೀಸರು ಬದಲಿ ಮಾರ್ಗದಲ್ಲಿ ವಾಹನಗಳನ್ನು ಸಂಚರಿಸಲು ಅನುಕೂಲ ಕಲ್ಪಿಸಿದರು.ತಾಲೂಕಿನ ಬೆಸಗರಹಳ್ಳಿ ಕೊನೆ ಭಾಗದ ಜಮೀನುಗಳಿಗೆ ಬುಧವಾರ ಸಂಜೆವರೆಗೂ ನಾಲೆಗಳ ಮೂಲಕ ಹರಿಸಬೇಕಾದ ನೀರನ್ನು ಎರಡು ದಿನ ಮುಂಚಿತವಾಗಿಯೇ ಸ್ಥಗತಗೊಳಿಸಿರುವ ಕ್ರಮವನ್ನು ಖಂಡಿಸಿದರು. ಕೆ.ಆರ್.ಎಸ್. ಅಣೆಕಟ್ಟೆ ಬಳಿ ಒಂದು ದಿನ ಮುಂಚಿತವಾಗಿಯೇ ಗೇಟ್ ಬಂದ್ ಮಾಡಿದ್ದಾರೆ ಎಂದು ದೂರಿದರು.
ಈಗಾಗಲೇ ಬೇಸಿಗೆ ಆರಂಭಗೊಂಡಿದೆ. ಜನಜಾನುವಾರುಗಳಿಗೂ ಕುಡಿಯುವ ನೀರಿಗೆ ತೊಂದರೆ ಬಂದಿರುವ ಜತೆಗೆ ಕೆರೆ ಕಟ್ಟೆಗಳು ಭರ್ತಿಯಾಗದೆ ಪ್ರಾಣಿ ಪಕ್ಷಿಗಳಿಗೂ ತೊಡಕಾಗಿದೆ. ಅಧಿಕಾರಿಗಳ ಬೇಜಾವಾಬ್ಧಾರಿತನದಿಂದ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡದೆ ಏಕಾಏಕಿ ನೀರು ಸ್ಥಗಿತಗೊಳಿಸಿರುವ ಕ್ರಮವನ್ನು ಖಂಡಿಸಿದರು.
ಕೆ.ಆರ್.ಎಸ್. ಜಲಾಶಯದಲ್ಲಿ 104 ಅಡಿ ನೀರಿದ್ದರೂ ರೈತರ ಬೇಸಾಯಕ್ಕೆ ಮತ್ತು ಬೆಳೆಗಳಿಗೆ ನೀರು ಹರಿಸದೆ ಅಧಿಕಾರಿಗಳು ನಿರ್ಲಕ್ಷ ಧೋರಣೆ ಸರಿಯಲ್ಲ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆ ವೇಳೆ ರೈತ ಸಂಘಟನೆ ತಾಲೂಕು ಅಧ್ಯಕ್ಷ ಎಚ್.ಜಿ.ಪ್ರಭುಲಿಂಗು, ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ಸೋ.ಶಿ.ಪ್ರಕಾಶ್, ಶಿವಲಿಂಗು, ಎಚ್.ಎಲ್.ದಯಾನಂದ, ಕೆ.ಜಿ.ಉಮೇಶ್, ಗೋಪಿ, ರಾಮಕೃಷ್ಣ, ಚನ್ನಪ್ಪ, ವೆಂಕಟೇಶ್, ಮುತ್ತರಾಜು, ಜಯರಾಮು, ಶಿವರಾಮು, ರಾಹುಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.