ಕುಂಟುತ್ತಾ ಸಾಗಿದ ಮುತ್ಕೂರು ಗ್ರಾಪಂ ಘನತ್ಯಾಜ್ಯ ವಿಲೇವಾರಿ ಘಟಕ

KannadaprabhaNewsNetwork |  
Published : Sep 09, 2024, 01:41 AM IST
ಅ | Kannada Prabha

ಸಾರಾಂಶ

ನರೇಗಾ ಯೋಜನೆಯಡಿ ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ.

ಸುರೇಶ ಯಳಕಪ್ಪನವರ

ಹಗರಿಬೊಮ್ಮನಹಳ್ಳಿ: ನರೇಗಾ ಯೋಜನೆಯಡಿ ತಾಲೂಕಿನ ಮುತ್ಕೂರು ಗ್ರಾಪಂ ವ್ಯಾಪ್ತಿಯ ಕಿತ್ನೂರು ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ₹೨೦ ಲಕ್ಷ ಮೊತ್ತದ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿ ಮೂರು ವರ್ಷವಾದರೂ ಪೂರ್ಣಗೊಳ್ಳದೇ ನನೆಗುದಿಗೆ ಬಿದ್ದಿದೆ.

ನರೇಗಾ ಯೋಜನೆಯಡಿ ಪರಿಸರ ಸುಸ್ಥಿರತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವ ಉದ್ದೇಶದಿಂದ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಆದರೆ, ಮುತ್ಕೂರು ಗ್ರಾಪಂನಲ್ಲಿ ತಾಪಂ ಇಒ ಆಡಳಿತಾಧಿಕಾರಿ ಇದ್ದರೂ ಕಿತ್ನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಘನ-ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗರ ಬಡಿದಂತಾಗಿದೆ.

ರಸ್ತೆ ಪಕ್ಕದಲ್ಲೇ ಕಸ:

ಕಸದ ಸಂಗ್ರಹಣೆ, ಸಾಗಣೆ, ಸಂಸ್ಕರಣೆ, ಮರುಬಳಕೆ ಯಾವೊಂದು ಸಮರ್ಪಕವಾಗಿ ನಡೆಯದೇ ರಸ್ತೆಯ ಪಕ್ಕದಲ್ಲಿಯೇ ಕಸವನ್ನು ಬಿಸಾಕುತ್ತಿದ್ದಾರೆ. ಅಸಮರ್ಪಕ ಘನತ್ಯಾಜ್ಯ ವಿಲೇವಾರಿಯಿಂದಾಗಿ ಸಾರ್ವಜನಿಕ ಆರೋಗ್ಯಕ್ಕೆ ಪೆಟ್ಟು ಬೀಳುತ್ತದೆ. ಘನತ್ಯಾಜ್ಯ ವಿಲೇವಾರಿ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಕಿತ್ನೂರು ಗ್ರಾಮಸ್ಥರು ಗ್ರಾಪಂ ಚುನಾವಣೆ ಬಹಿಷ್ಕಾರ ಮಾಡಿರುವುದರಿಂದ ಗ್ರಾಮದ ಅಭಿವೃದ್ಧಿ ಕುಂಠಿತಗೊಂಡಿದೆ. ಗ್ರಾಪಂನಲ್ಲಿ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಅಧಿಕಾರಿಗಳ ಆಡಳಿತ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಮೂರು ವರ್ಷದಿಂದ ನಿರ್ಮಾಣ ಮಾಡುತ್ತಿರುವ ವಿಲೇವಾರಿ ಘಟಕ ಎಂದು ಪೂರ್ಣಗೊಳ್ಳಲಿದೆ? ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.

ವೆಂಡರ್ ಪ್ರಾಬ್ಲಮ್‌ನಿಂದಾಗಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ವಿಳಂಬವಾಗಿದೆ. ಇನ್ನೂ ೨ತಿಂಗಳ ಒಳಗೆ ಪೂರ್ಣಗೊಳಿಸಿ ಕಸ ಸಂಗ್ರಹಣೆ ಮಾಡಲಾಗುವುದು. ಸದ್ಯಕ್ಕೆ ಸರಕಾರಿ ಜಾಗವೊಂದರಲ್ಲಿ ಕಸ ಸಂಗ್ರಹಣೆ ಮಾಡುತ್ತಿದ್ದೇವೆ ಎನ್ನುತ್ತಾರೆ ಮುತ್ಕೂರು ಗ್ರಾಪಂ ಪಿಡಿಒ ರೇವಣಸಿದ್ದಪ್ಪ.

ಮುತ್ಕೂರು ಗ್ರಾ.ಪಂ.ಗೆ ಮೊದಲು ಚುನಾವಣೆ ಆಗಬೇಕು. ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ನೂರಾರು ಸಮಸ್ಯೆಗಳಿವೆ. ತೆಲುಗೋಳಿ ಗ್ರಾಮದಲ್ಲಿ ಶೌಚಾಲಯ, ದೋಬಿಘಾಟ್ ನಿರ್ಮಾಣ ಮಾಡಿ ಎಂದು ಕೇಳಿಕೊಂಡರು, ಅಧಿಕಾರಿಗಳು ಗಮನಹರಿಸಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕವನ್ನು ಕೂಡಲೇ ನಿರ್ಮಿಸಿ ಕಸ ಸಂಗ್ರಹಕ್ಕೆ ಅನುಕೂಲ ಮಾಡಬೇಕು ಎನ್ನುತ್ತಾರೆ ತೆಲುಗೋಳಿ ಗ್ರಾಮದ ಯುವ ಮುಖಂಡ ಎಚ್.ಶಿವರಾಜ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು