ಕನ್ನಡಪ್ರಭ ವಾರ್ತೆ ಇಂಡಿ
ಸುದ್ದಿಗಾರರೊಂದಿಗೆ ಮಾತನಾಡಿದ ಬಂಥನಾಳದ ಶ್ರೀ ವೃಷಭಲಿಂಗ ಮಹಾಶಿವಯೋಗಿಗಳು, ತಡವಲಗಾ ಮಠದ ಅಭಿನವ ರಾಚೋಟೇಶ್ವರ ಶ್ರೀ, ಗೋಳಸಾರ ಮಠದ ಅಭಿನವ ಪುಂಡಲಿಂಗ ಶ್ರೀ, ಖೇಡಗಿ ಮಠದ ಶಿವಬಸವರಾಜೇಂದ್ರ ಶ್ರೀ, ಆಳೂರ ಮಠದ ಶಂಕರಾನಂದ ಶ್ರೀಗಳು ಜಂಟಿಯಾಗಿ ಆಗ್ರಹಿಸಿದ್ದಾರೆ. ಇಂಡಿಗೆ ಹಿಂದೆಂದೂ ದೊರೆಯದ ಸಚಿವ ಸ್ಥಾನ ನೀಡಿದರೆ ಇತಿಹಾಸ ದಾಖಲಾಗುತ್ತದೆ. ಶಾಸಕರಾದ ಯಶವಂತರಾಯಗೌಡ ಪಾಟೀಲಗೆ ಫಲ ಸಿಗಲಿ. ಸಚಿವ ಸ್ಥಾನ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಗಡಿ ಭಾಗದಲ್ಲಿರುವ ಇಂಡಿ ಮತಕ್ಷೇತ್ರಕ್ಕೆ ಎಂದೋ ಸಚಿವ ಸ್ಥಾನ ನೀಡಬೇಕಿತ್ತು. ಕಾಲ ಕೂಡಿ ಬಂದಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಹೈಕಮಾಂಡ್ ಇಂಡಿಗೆ ಸಚಿವ ಸ್ಥಾನ ನೀಡಬೇಕು. ಮತದಾರರಿಗೆ ಗೌರವಿಸಲು ಹಿಂದುಳಿದ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.ರಾಜ್ಯದ ಗಡಿ ತಾಲೂಕಾದ ಇಂಡಿ, ಅತಿ ಹಿಂದುಳಿದ ತಾಲೂಕಾಗಿದೆ. ರಾಜಕೀಯ ಅವಕಾಶ ವಂಚಿತವಾಗಿದೆ. ಈಗಲಾದರೂ ಸಚಿವ ಸಂಪುಟದಲ್ಲಿ ಇಂಡಿಗೆ ಸಚಿವ ಸ್ಥಾನ ನೀಡಿದರೆ ಶಾಸಕರಿಗೆ ಅಷ್ಟೇ ಅಲ್ಲ, ಮತದಾರರಿಗೂ ಗೌರವ ನೀಡಿದಂತಾಗುತ್ತದೆ. ದಕ್ಷಿಣ ಕರ್ನಾಟಕ ಭಾಗದ ತಾಲೂಕು ಹಾಗೂ ಕ್ಷೇತ್ರಗಳಿಗೆ ಕೊಡುವಷ್ಟು ರಾಜಕೀಯ ಪ್ರಾತಿನಿಧ್ಯ ಉತ್ತರ ಕರ್ನಾಟಕ ಅದರಲ್ಲೂ ವಿಜಯಪುರ ಜಿಲ್ಲೆಯ ಗಡಿ ಭಾಗ ಇಂಡಿ ಮತಕ್ಷೇತ್ರಕ್ಕೆ ನೀಡುತ್ತಿಲ್ಲ. ಮತದಾರರಿಗೆ ಗೌರವಿಸಬೇಕಾದರೆ ಇಂಡಿಗೆ ಸಚಿವ ಸ್ಥಾನ ನೀಡಬೇಕು ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಕೆಲಸ ಮಾಡಲು ಗಡಿಭಾಗ ಇಂಡಿಯ ಜನಪ್ರತಿನಿಧಿಗಳಿಗೂ ಅವಕಾಶ ನೀಡಬೇಕು. ವಿಜಯಪುರ ಜಿಲ್ಲೆಯಲ್ಲಿಯೇ ಇಂಡಿ ದೊಡ್ಡ ತಾಲೂಕು. ಅದು ಗಡಿ ಭಾಗದಲ್ಲಿ ವಿವಿಧ ಕ್ಷೇತ್ರಗಳಿಂದ ಅಭಿವೃದ್ಧಿ ಕಾಣದೇ ವಂಚಿತಗೊಂಡಿದೆ. ಒಮ್ಮೆಯೂ ಸಚಿವ ಸ್ಥಾನ ಯಾವ ಪಕ್ಷವೂ, ಯಾವ ಸರ್ಕಾರಗಳು ನೀಡಿಲ್ಲ. ಹೀಗಾಗಿ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡಿದರೆ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಶಾಸಕರಾದ ಯಶವಂತರಾಯಗೌಡ ಪಾಟೀಲ ಅವರಿಗೆ ವರಿಷ್ಠರು ಸಚಿವ ಸ್ಥಾನ ನೀಡಿ ಈ ಭಾಗದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.
ಇಂಡಿಯು ಶರಣರು, ಸಂತರು ಜನಸಿದ ಪುಣ್ಯಭೂಮಿಯಾಗಿದೆ. ಸಜ್ಜನ ರಾಜಕಾರಣಿಗಳು ಇಲ್ಲಿ ಜನ್ಮವೆತ್ತಿದ್ದಾರೆ. ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆ ಸಂದರ್ಭ ಬಂದರೆ ಸಚಿವ ಸ್ಥಾನ ವಂಚಿತ ಇಂಡಿಗೆ ಅವಕಾಶ ನೀಡಬೇಕು. ಹಿಂದುಳಿದ ಗಡಿ ತಾಲೂಕು ಸರ್ವತೋಮುಖ ಅಭಿವೃದ್ಧಿ ಸಾಧಿಸಲು ರಾಜಕೀಯ ಪ್ರಾತಿನಿಧ್ಯದಲ್ಲಿ ಸಚಿವ ಸ್ಥಾನ ಮುಖ್ಯ. ಹೀಗಾಗಿ ಈ ಭಾಗ ಸರ್ವ ಕ್ಷೇತ್ರದಲ್ಲಿ ಅಭಿಸಾಧಿಸಲು ಇಂಡಿಗೆ ಸಚಿವ ಸ್ಥಾನ ನೀಡಬೇಕು ಎಂದು ಹೇಳಿದರು.