ಎಚ್.ಎನ್ .ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಮುತ್ತತ್ತಿ ಗ್ರಾಮದ ಆರಾಧ್ಯ ದೈವ ಶ್ರೀಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಭಕ್ತಿ ಭಾವ ಪೂರಕವಾಗಿ ಅಪಾರ ಭಕ್ತಾದಿಗಳ ಸಮ್ಮುಖದಲ್ಲಿ ವೈಭವಯುತವಾಗಿ ನಡೆಯಿತು.
ಗುರುವಾರ ಬೆಳಗ್ಗೆ ಕಾವೇರಿ ನದಿಯಿಂದ ನೀರನ್ನು ತಂದು ದೇವರಮೂರ್ತಿಯನ್ನು ಶುಚಿಗೊಳಿಸಿ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ಗಣಹೋಮ ನಡೆದ ನಂತರ ವಿವಿಧ ಪುಷ್ಪಗಳಿಂದ ದೇವರ ಮೂರ್ತಿಯನ್ನು ಅಲಂಕರಿಸಿ ಪೂಜಾ ಪುನಸ್ಕಾರಗಳನ್ನು ನಡೆಸಿ ಮಹಾ ಮಂಗಳಾರತಿ ನಂತರ ಭಕ್ತರಿಗೆ ಪ್ರಸಾದ ವಿನಯೋಗಿಸಲಾಯಿತು.ಅಪಾರ ಸಂಖ್ಯೆಯಲ್ಲಿ ರಾಮನಗರ, ಚಾಮರಾಜನಗರ, ಕನಕಪುರ, ತಮಿಳುನಾಡಿನ ದಕಣಿಕೋಟೆ ಮತ್ತು ಇತರ ಜಿಲ್ಲೆಗಳಿಂದಲೂ ಭಾಗವಹಿಸಿದ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ದೇವಸ್ಥಾನದ ಒಳಾಂಗಣದ ಆವರಣವನ್ನು ತುಳಿಸಿ ಹಾರದಿಂದ ಸಿಂಗರಿಸಿ ಅದರ ನಡುವೆ ವಿವಿಧ ರೀತಿಯ ಹಣ್ಣು ಹಂಪಲಗಳನ್ನು ಕಟ್ಟಿ ವಿಶೇಷವಾಗಿ ದೇವಸ್ಥಾನವನ್ನು ಅಲಂಕರಿಸಲಾಗಿತ್ತು.
ಮಧ್ಯಾಹ್ನ 12ರ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ದಿವ್ಯ ರಥೋತ್ಸವ ಮೆರವಣಿಗೆಯಲ್ಲಿ ಅಪಾರ ಭಕ್ತಾದಿಗಳು ಶ್ರೀರಮಣ ಗೋವಿಂದ ಗೋವಿಂದ ಎಂಬ ಘೋಷಗಳನ್ನು ಕೂಗುತ್ತಾ ದೇವಸ್ಥಾನದ ಆವರಣದ ಸುತ್ತು ಬಂದ ರಥೋತ್ಸವ ನಂತರ ಗ್ರಾಮದಲ್ಲೂ ಸಹ ಮೆರವಣಿಗೆ ಹೊರಟಾಗ ಪೂಜಾ ಕುಣಿತ, ಡೋಲು ಕುಣಿತ, ಚಿಲಿಪಿಲಿ ಬೊಂಬೆ, ವೀರಗಾಸೆ ಪೂಜಾ ಕುಣಿತ ಜೊತೆಯಲ್ಲಿ ಸಾಗಿದವು.ಅರ್ಚಕರಾದ ಹನುಮಂತು ಮತ್ತು ಅವರ ಸಹಾಯಕರು ಮಡಿವಾಳ ಹಾಸಿದ ಮಡಿ ಮೇಲೆ ದೇವಸ್ಥಾನದ ತಳಿಗೆ ಮನೆಗೆ ತೆರಳಿ ದೇವರ ಪ್ರಸಾದವನ್ನು ತಂದು ದೇವರಿಗೆ ನೈವೇದ್ಯ ಮಾಡಿದರು. ನಂತರ ದೇವಸ್ಥಾನದ ಆವರಣದಲ್ಲಿ ಅರಳಿ ಮರಕ್ಕೆ ಮಡಿಕೆಯೊಳಗೆ ಹಾಲು ಮೊಸರು ಹಾಕಿ ಅದನ್ನು ಹಗ್ಗದಿಂದ ಕಟ್ಟಿ ದೇವಸ್ಥಾನದ ಅರ್ಚಕರು ಮರವನ್ನೇರಿ ಆ ಮಡಿಕೆಯನ್ನು ಉಯ್ಯಾಲೆ ರೀತಿಯಲ್ಲಿ ಆಟವಾಡುತ್ತಾರೆ.
ಈ ವೇಳೆ ಆದಿಜಾಂಬವ ಜನಾಂಗದವರು ಬಿದಿರುಕೊಲನ್ನು ಹಿಡಿದುಕೊಂಡು ಅರ್ಚಕರು ಆಡಿಸುತ್ತಿರುವ ಹಾಲರವಿ ಮಡಿಕೆಯನ್ನು ಒಡೆಯುವ ದೃಶ್ಯವನ್ನು ನೋಡಲು ಒಂದು ವಿಶೇಷ ಜಾತ್ರೆಯ ದಿವಸ. ಇದು ಬಂದ ಭಕ್ತರಿಗೆ ಪ್ರಸಾದ ಮತ್ತು ಮನರಂಜನೆ ಹಾಗೂ ವಿಶೇಷವಾದ ಕಾರ್ಯಕ್ರಮವಾಗಿದೆ.ನಂತರ ಅರ್ಚಕರು ತೆಂಗಿನಕಾಯಿಗೆ ಹಗ್ಗವನ್ನು ಕಟ್ಟಿ ರಸ್ತೆಗೆ ಎಸೆಯುವುದು, ಬಿದಿರುಕೊಲನ್ನು ಚೂಪಾಗಿ ಮಾಡಿಕೊಂಡು ಅದರಿಂದ ತೆಂಗಿನಕಾಯಿ ಸಿಪ್ಪೆಯನ್ನು ಸುಲಿಯಲು ಯುವಕರು ಪ್ರಯತ್ನಿಸುತ್ತಿರುವಾಗ ಅರ್ಚಕರು ಹಗ್ಗವನ್ನು ಎಳೆದು ತೆಂಗಿನಕಾಯಿ ಅವರಿಗೆ ಸಿಗದಂತೆ ಮಾಡುವುದು ಒಂದು ವಿಶೇಷವಾಗಿದೆ.
ಕಾರ್ಯಕ್ರಮಗಳು ನಡೆಯುವ ವೇಳೆ ಮಳೆರಾಯನ ಆಗಮನದಿಂದ ಸ್ವಲ್ಪ ತಡವಾದರೂ ಮಳೆಯನ್ನು ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಮಳೆಯಲ್ಲೇ ನೆನೆಯುತ್ತಾ ಹುಲಿವಾಹನ ಸೇವೆ ಮತ್ತು ಇತರ ಕಾರ್ಯಕ್ರಮಗಳನ್ನು ನೋಡಿ ಕಣ್ತುಂಬಿ ಕೊಂಡರು. ರಾತ್ರಿ ದೇವರ ಪಲ್ಲಕ್ಕಿ ಉತ್ಸವ ವೈಭವದಿಂದ ಜರಗಿತು.ದೇವಸ್ಥಾನದ ಅರ್ಚಕರಾದ ರವಿ ಮಾತನಾಡಿ, ಮುತ್ತತ್ತಿರಾಯನ ಸನ್ನಿಧಿಗೆ ಸುಮಾರು 5000 ಹೆಚ್ಚು ಭಕ್ತಾದಿಗಳು ಬಂದು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದು, ಶುಕ್ರವಾರ ಬೆಳಗ್ಗೆ ಪೊಲೀಸ್ ಪೂಜೆ ಮುಗಿದ ನಂತರ ಜಾತ್ರೆ ಮುಕ್ತಾಯಗೊಳ್ಳುತ್ತದೆ ಎಂದರು.
ಉದ್ಯಮಿ ಎಚ್.ಎಮ್. ಆನಂದ್ ಕುಮಾರ್ ಮಾತನಾಡಿ, ಪ್ರತಿವರ್ಷವೂ ಗೋಕಲಾಷ್ಟಮಿ ದಿನದಂದು ನಡೆಯುವ ಈ ಜಾತ್ರೆಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಜಾತ್ರೆ ದಿನ ಮಳೆ ಬರುವುದು ವಾಡಿಕೆ. ಅದೇ ರೀತಿ ದೇವರ ಕೃಪೆಯಿಂದ ಈ ದಿನವೂ ಸಹ ಮಳೆಯಾಗಿದೆ. ಮಳೆಯನ್ನು ಲೆಕ್ಕಿಸದೆ ಭಕ್ತರು ದೇವರ ದರ್ಶನ ಪಡೆಯಲು ತಾಳ್ಮೆಯಿಂದ ಸಾಲಾಗಿ ನಿಂತು ದೇವರ ದರ್ಶನ ಪಡೆದರು ಎಂದರು.ವರನಟ ದಿ.ಡಾ.ರಾಜಕುಮಾರ್ ಅವರ ಮನೆದೇವರಾಗಿರುವ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭಾಗವಹಿಸಿ ಪೂಜೆ ಸಲ್ಲಿಸುತ್ತಾರೆ. ಶಕ್ತಿ ದೇವರಾದ ಈ ಆಂಜನೇಯಸ್ವಾಮಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಾನೆ ಎಂಬ ನಂಬಿಕೆ ಇದೆ. ಶ್ರಾವಣ ಮಾಸದ ಪ್ರತಿ ಶನಿವಾರ ವಿಶೇಷ ಪೂಜೆ ನಡೆಯುತ್ತದೆ ಎಂದು ತಿಳಿಸಿದರು.