ಕನ್ನಡಪ್ರಭ ವಾರ್ತೆ ಬ್ಯಾಟರಾಯನಪುರ

ಕ್ಷೇತ್ರದ ಹುಣಸಮಾರನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ರಥೋತ್ಸವ ಅಪಾರ ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯ ಮೂಲಕ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವ ಕುರಿತು ಮಾತನಾಡಿದ ಹುಣಸಮಾರನಹಳ್ಳಿ ಶ್ರೀಮಠದ ಪಟ್ಟದ ಶ್ರೀ ಗುರುನಂಜೇಶ್ವರ ಶಿವಾಚಾರ್ಯ ಸ್ವಾಮಿಗಳು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಪ್ರತಿ ವರ್ಷ ಸ್ವಾಮಿಯ ಇಚ್ಛೆಯಂತೆ, ಪಟ್ಟದ ಶ್ರೀ ಪರ್ವತರಾಜ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದದೊಂದಿಗೆ ರಥೋತ್ಸವದ ಅಂಗವಾಗಿ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.ರಥೋತ್ಸವದ ಈ ದೈವ ಕಾರ್ಯದಲ್ಲಿ ನಗರದ ಗಂಜಾಂ ಮಠದ ಸ್ವಾಮೀಜಿ, ಅಮೃತಕುಮಾರಶ್ರೀ, ತಮಿಳುನಾಡಿನ ಗುಮ್ಮಳಾಪುರ ಮಠದ ಶ್ರೀ ಶಿವಾನಂದ ಶಿವಾಚಾರ್ಯಶ್ರೀ, ತಮಿಳುನಾಡಿನ ಬಳ್ಳನಪುರ ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯಶ್ರೀ, ಮಾಲೂರಿನ ಬೆಳ್ಳಾವಿ ಮಠದ ಶ್ರೀ ಮಹಾಂತ ಶಿವಾಚಾರ್ಯ ಶ್ರೀ, ವಿಜಯಪುರ ಮಠದ ಶ್ರೀ ಮಹಾದೇವ ಶ್ರೀ, ತಮಿಳುನಾಡಿನ ಶ್ರೀ ಶಿವಪಂಚಾಕ್ಷರಿ ಶ್ರೀ, ಖಾನೆ ಮಠದ ಸ್ವಾಮೀಜಿ ಸೇರಿ ಹಲವು ಗಣ್ಯರು, ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡು ರಥೋತ್ಸವಕ್ಕೆ ವಿಶೇಷತೆಯ ಮೆರುಗು ನೀಡಿದರು.