ಸರ್ವಧರ್ಮೀಯರ ವಧು ವರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಸಲಹೆ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಹೆಣ್ಣಿಗೆ ಹಠ ಹಾಗೂ ಗಂಡಿಗೆ ಚಟ ಇದ್ದರೆ ಸಂಸಾರ ನೌಕೆ ಸಾಗದೆಂದು ದಾವಣಗೆರೆ ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.ಬಸವಕೇಂದ್ರ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಬಸವೇಶ್ವರರ ವಧು ವರರ ಮಾಹಿತಿ ಕೇಂದ್ರದಿಂದ ಭಾನುವಾರ ಆಯೋಜಿಸಿದ್ದ ಸರ್ವಧರ್ಮೀಯರ ವಧು ವರರ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಪತಿ ಹಾಗೂ ಪತ್ನಿಯರಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯ. ಒಮ್ಮೆ ಆತ, ಮತ್ತೊಮ್ಮೆ ಆಕೆ ಸೋತು ಮುನ್ನಡಯಬೇಕು ಎಂದರು.ಹೆಣ್ಣು ಭ್ರೂಣ ಹತ್ಯೆಗಳಿಂದಾಗಿ ಇಂದು ಮದುವೆಯಾಗಲು ಗಂಡುಮಕ್ಕಳಿಗೆ ಹೆಣ್ಣು ಸಿಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ. 20 ವರ್ಷದ ಹಿಂದೆ ನಡೆದ ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಇಂದು ಯುವಕರಿಗೆ ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ. ಅದರಲ್ಲೂ ರೈತರ ಮಕ್ಕಳಿಗೆ ಕನ್ಯೆ ಕೊಡುತ್ತಿಲ್ಲ ಎಂದರು.ಪ್ರತಿ ವ್ಯಕ್ತಿಯ ಜೀವನದಲ್ಲಿ ಮದುವೆ ಮಹತ್ತರ ಘಟ್ಟ. ನೌಕರಿ ಇರಬೇಕು, ಒಳ್ಳೆ ಸಂಬಳ ತರುವವರಿಗೆ ಮಾತ್ರ ಹೆಣ್ಣು ಕೊಡುತ್ತಿದ್ದಾರೆ. ಜೊತೆಗೆ ಆಸ್ತಿ, ಅಂತಸ್ಥು ಕೂಡಾ ಲೋಡಲಾಗುತ್ತಿದೆ ಎಂದು ಹೇಳಿದರು.ಪ್ರತಿಷ್ಠಿತರ ಕುಟುಂಬಗಳ ನಡುವೆ ನೆಂಟಸ್ತಿಕೆ ನಡೆದು ಮದುವೆಯಾದ ನಂತರವೂ ದಾಂಪತ್ಯ ಚೆನ್ನಾಗಿರುತ್ತದೆ ಎಂದು ಹೇಳಲಾಗದು. ಅಹಂಕಾರ, ನಾನು ಹೆಚ್ಚು ಎಂಬ ಸರ್ವಾಧಿಕಾರಿ ಧೋರಣೆಯಿಂದ ವಿಚ್ಛೇದನ ಆಗುತ್ತಿವೆ. ಕೋಪ ಬಂದಾಗ ಇಬ್ಬರೂ ಸಹನೆ ತಂದುಕೊಳ್ಳಬೇಕು. ಎಷ್ಟೇ ವಿದ್ಯಾವಂತರಾದರೂ ಸತಿ-ಪತಿ ನಡುವೆ ಪ್ರೀತಿ ಇರಬೇಕು, ಅರ್ಥ ಮಾಡಿಕೊಳ್ಳಬೇಕು ಅಂದಾಗ ಮಾತ್ರ ಸಂಸಾರ ಚೆನ್ನಾಗಿರುತ್ತದೆ ಎಂದು ತಿಳಿಸಿದರು.ಬಸವೇಶ್ವರ ವಧು ವರರ ಕೇಂದ್ರದ ವ್ಯವಸ್ಥಾಪಕ ಜಂಬಯ್ಯ, ದಾವಣಗೆರೆ ವಿರಕ್ತ ಮಠದ ಕಾರ್ಯದರ್ಶಿ ಮುರುಗೇಶಣ್ಣ, ನ್ಯಾಯವಾದಿ ಎಂ.ಉಮೇಶ್, ಎಸ್ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಎಲ್.ಶಿವಾನಂದಸ್ವಾಮಿ ಇದ್ದರು.