ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ-ನ್ಯಾಕ್ "ಎ " ಶ್ರೇಣಿ ನೀಡಿದೆ ಎಂದು ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು.ಇಲ್ಲಿನ ಆರ್ಎರ್ಜೆಐಟಿ ಕಾಲೇಜಿನ ಸಭಾಂಗಣದಲ್ಲಿ ಮಾತನಾಡಿದ ಅವರು, ಕಳೆದ ವಾರ ಕಾಲೇಜಿಗೆ ಭೇಟಿ ನೀಡಿದ್ದ ತಜ್ಞರ ಸಮಿತಿ ಕಾಲೇಜು ಮೂಲಸೌಕರ್ಯ, ಸಂಶೋಧನೆ ಮತ್ತು ಅಧ್ಯಯನ, ಬೋಧನಾ ಗುಣಮಟ್ಟ, ಪೂರಕ ಸವಲತ್ತು, ವಿದ್ಯಾರ್ಥಿಯ ಶೈಕ್ಷಣಿಕ ಬೆಳವಣಿಗೆ ಮತ್ತು ಪ್ರತಿಕ್ರಿಯೆ, ಸಾಮಾಜಿಕ ಕಾಳಜಿ, ವಸತಿ ನಿಲಯ, ಹಣಕಾಸು ನಿರ್ವಹಣೆ, ಕ್ರೀಡೆ, ಸಾಂಸ್ಕೃತಿಕ ಸವಲತ್ತುಗಳು ಸೇರಿದಂತೆ ವಿವಿಧ ಹಂತಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ ಪರಿಣಾಮಕಾರಿ ಮೌಲ್ಯಾಂಕನದ ಮೂಲಕ ಉತ್ತಮ ಶ್ರೇಣಿಯನ್ನು ನೀಡಿದೆ. 3.24 ಸಿಜಿಪಿಎ ಅಂಕಗಳೊಂದಿಗೆ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ ಎ ಶ್ರೇಣಿ ನೀಡಲಾಗಿದ್ದು, ಮುಂದಿನ 5 ವರ್ಷಗಳವರೆಗೆ ಈ ಮೌಲ್ಯಾಂಕನ ಚಾಲ್ತಿಯಲ್ಲಿರುತ್ತದೆ ಎಂದು ತಿಳಿಸಿದರು.
ತಾಂತ್ರಿಕ ಮಹಾವಿದ್ಯಾಲಯ ಆರಂಭವಾಗಿ 23 ವರ್ಷ ಕಳೆದಿದ್ದು, ಮೊದಲ ಯತ್ನದಲ್ಲೇ ನ್ಯಾಕ್ ಎ ಶ್ರೇಣಿ ಪಡೆದಿರುವ ಆರ್ಎಲ್ಜೆಐಟಿ ಸಾಧನೆ ಅನನ್ಯ. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಆರ್.ಎಲ್.ಜಾಲಪ್ಪ ಅವರ ಸಾಮಾಜಿಕ ಕಾಳಜಿಯ ಆಲೋಚನೆಗಳನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸ್ಥಳೀಯರಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಎಲ್ಲ ಹಂತಗಳಲ್ಲೂ ಕಾಲೇಜು ಉನ್ನತೀಕರಣಗೊಂಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವ್ಯವಹಾರ ನಿರ್ವಹಣಾ ಸ್ನಾತಕೋತ್ತರ ಪದವಿ ಎಂಬಿಎ ಹಾಗೂ ಮುಂಬರುವ ವರ್ಷದಿಂದ ಎಂ.ಟೆಕ್ ಪದವಿಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಕೆ.ವಿಜಯ್ ಕಾರ್ತಿಕ್ ಮಾತನಾಡಿ, ಸತತ ಐದು ವರ್ಷಗಳ ಪರಿಶ್ರಮದ ಕಾರಣ ಈ ರಾಷ್ಟ್ರ ಮಟ್ಟದ ಗೌರವ ನಮ್ಮ ಕಾಲೇಜಿಗೆ ದೊರೆತಿದೆ. ಗುಣಮಟ್ಟದ ಶಿಕ್ಷಣ, ಸೌಲಭ್ಯ ನೀಡುವುದರ ಜೊತೆಗೆ ಸಿಬ್ಬಂದಿ, ಆಡಳಿತ ಮಂಡಳಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
ಮಾನವ ಸಂಪನ್ಮೂಲ ಅಧಿಕಾರಿ ಎನ್.ಎಸ್.ಬಾಬುರೆಡ್ಡಿ ಮಾತನಾಡಿ, ಕಾಲೇಜಿನ ವಾತಾವರಣ, ಸೌಲಭ್ಯ, ಶಿಕ್ಷಣ ಸೇರಿದಂತೆ ಸಿಬ್ಬಂದಿಗಳಿಗೆ ಒದಗಿಸಲಾದ ಸೌಲಭ್ಯ, ವಿದ್ಯಾರ್ಥಿಗಳಿಗೆ ದೊರೆತ ಉದ್ಯೋಗಾವಕಾಶಗಳನ್ನೂ ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದರು.ಕಾರ್ಯನಿರ್ವಾಹಕ ಅಭಿಯಂತರ ಐ.ಎಂ.ರಮೇಶ್ಕುಮಾರ್ ಮಾತನಾಡಿ, ಕ್ಯಾಂಪಸ್ನಲ್ಲಿ ಅತ್ಯಾಧುನಿಕ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಹಸಿರು ಕ್ಯಾಂಪಸ್ ಮನ್ನಣೆಗೆ ಪಾತ್ರವಾಗಿದೆ. 400 ಮೀಟರ್ ಟ್ರಾಕ್, ಕ್ರೀಡಾಂಗಣ ಉನ್ನತೀಕರಣ, ಸೋಲಾರ್, ಬಯೋಗ್ಯಾಸ್ಮ ಈಜು ಕೊಳ, ಹಸಿರು ಮನೆ, ಆರ್ಒ ಘಟಕಗಳನ್ನು ಹೊಸದಾಗಿ ನಿರ್ಮಿಸಲಾಗಿದೆ ಎಂದರು. ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ನ್ಯಾಕ್ ಸಂಯೋಜಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.