ಹಾವೇರಿ: ಕನ್ನಡ ನಾಡಿನಲ್ಲಿ ವಿಶಿಷ್ಟವಾಗಿ ಆಚರಿಸುವ ನಾಡಹಬ್ಬವು ನಾಡಿನ ಭವ್ಯ ಸಂಸ್ಕೃತಿ, ಸಂಸ್ಕಾರಗಳ ಅಭಿವ್ಯಕ್ತಿಯ ಆಶಯಗಳನ್ನು ಹೊಂದಿದ್ದು, ಅದರ ಮೂಲ ನೆಲೆಗಟ್ಟನ್ನು ಉಳಿಸಿ, ಬೆಳೆಸಿ ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ ಎಂದು ಶಿಗ್ಗಾಂವಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.ನಗರದ ಗೆಳೆಯರ ಬಳಗದ ಲೋಡಾಯಾ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹಾವೇರಿ, ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಹಾಗೂ ನಾಡಹಬ್ಬ ಉತ್ಸವ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿರುವ 28ನೇ ನಾಡಹಬ್ಬ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಾವು ಆಚರಿಸುವ ಹಬ್ಬಗಳು ನಮ್ಮ ಸುತ್ತಮುತ್ತಲಿನ ಪ್ರಕೃತಿಯನ್ನು ಆರಾಧಿಸುವ ಹಾಗೂ ಕೃತಜ್ಞತೆ ಸಲ್ಲಿಸುವ ಮೂಲ ಆಶಯವನ್ನು ಹೊಂದಿದ್ದು, ಆದರೆ ಇತ್ತೀಚೆಗೆ ಅವುಗಳ ಸ್ವರೂಪ ಬದಲಾಗುತ್ತಿದೆ. ದೇಶಿ ಪರಂಪರೆಯ ನಮ್ಮ ಮಣ್ಣಿನ ಸತ್ವವನ್ನು ಕಳೆದುಕೊಂಡು, ವಿದೇಶಿ ಸಂಸ್ಕೃತಿಯ ಅನುಕರಣೆ ಹೆಚ್ಚಾಗುತ್ತಿದೆ. ಕನ್ನಡ ಭಾಷಾ ಸಾಹಿತ್ಯವು ಪಂಪನಿಂದ ಹಿಡಿದು ಇಂದಿನವರೆಗೂ ನಮ್ಮ ಭವ್ಯ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸ ಮಾಡಿದೆ. ಯುವಜನರಲ್ಲಿ ಸಾಹಿತ್ಯದ ಓದು ಕಡಿಮೆಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು.ಮಾಜಿ ಶಾಸಕ ನೆಹರು ಓಲೇಕಾರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಮ್ಮೇಳನಕ್ಕೆ ಮಾತ್ರ ಸೀಮಿತವಾಗದೇ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಪ್ರತಿಭಟಿಸುತ್ತದೆ ಹಾಗೂ ಹೋರಾಟಕ್ಕೂ ಸಿದ್ಧವಾಗಿದೆ. ನಾಡಹಬ್ಬ ಕಾರ್ಯಕ್ರಮಕ್ಕೆ ಸರ್ಕಾರದ ಯಾವುದೇ ಅನುದಾನ ಇಲ್ಲದಿದ್ದರೂ ಎಲ್ಲ ಕನ್ನಡಾಭಿಮಾನಿಗಳು ಸೇರಿ ಈ ಕಾರ್ಯಕ್ರಮ ಹಮ್ಮಿಕೊಂಡು ಆಚರಿಸುವುದು ಕನ್ನಡ ಭಾಷೆಗೆ ಇರುವ ಅಭಿಮಾನವನ್ನು ತೋರಿಸುತ್ತದೆ ಎಂದು ಹೇಳಿದರು.ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಈ ಬಾರಿ ಕನ್ನಡ ಭಾಷೆಯು ಬೂಕರ್ ಪ್ರಶಸ್ತಿಯನ್ನು ಪಡೆದಿದೆ. ಇದು ಕನ್ನಡಿಗರ ಹೆಮ್ಮೆಯಾಗಿದ್ದು, ಜಗತ್ತಿಗೆ ಕನ್ನಡ ಭಾಷೆಯ ಪ್ರಾಚೀನತೆ ಪರಿಚಯವಾಗಲು ಇದು ಸಕಾಲವಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಉತ್ತಮಸೇವೆ ಸಲ್ಲಿಸಿದ ಡಾ. ಸುದೀಪ ಪಂಡಿತ, ಶಂಕ್ರಪ್ಪ ಮಾಂತು, ಐ.ಬಿ.ಬೆಟದೂರ, ಶಿವಯೋಗಿ ಬೆನ್ನೂರ, ಹನುಮಂತಪ್ಪ ಚೂರಿ, ಮುತ್ತಣ್ಣ ಚುರ್ಚಿ, ಮಹ್ಮದಅಲಿ ಇಂಗಳಗಿ ಅವರನ್ನುಉತ್ಸವ ಸಮಿತಿ ಪರವಾಗಿ ಸನ್ಮಾನಿಲಾಯಿತು.ಸಮಾರಂಭದ ಸಾನ್ನಿಧ್ಯವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ವಹಿಸಿದ್ದರು. ಅಧ್ಯಕ್ಷತೆಯನ್ನು ನಾಡಹಬ್ಬ ಉತ್ಸವ ಸಮಿತಿಯ ಅಧ್ಯಕ್ಷ ಎನ್.ಬಿ. ಕಾಳೆ ವಹಿಸಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಎಸ್.ಎನ್. ದೊಡ್ಡಗೌಡರ, ಈರಣ್ಣ ಬೆಳವಡಿ, ಮಾಲತೇಶ ಅಂಗೂರ ಇತರರು ಇದ್ದರು. ಪೃಥ್ವಿರಾಜ್ ಬೆಟಗೇರಿ ಸ್ವಾಗತಿಸಿದರು. ಕಸಾಪ ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ನಾಗರಾಜ ದೇಸಳ್ಳಿ ವಂದಿಸಿದರು. ಕಾರ್ಯಕ್ರಮದ ನಂತರ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.