-ವಿವಿಧೆಡೆ ನಾಗನಕಟ್ಟೆಗಳಲ್ಲಿ ವಿಶೇಷ ಪೂಜೆ । ನಾಗರಾಜನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ
ಕನ್ನಡಪ್ರಭ ವಾರ್ತೆ ರಾಯಚೂರು
ಹಿಂದೂಗಳ ಪವಿತ್ರ ಮಾಸವಾದ ಶ್ರಾವಣ ಈಗಾಗಲೇ ಆರಂಭ ಕಂಡಿದ್ದು, ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಜಿಲ್ಲೆಯಾದ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು, ಹೋಬಳಿ ಹಾಗೂ ಗ್ರಾಮೀಣ ಭಾಗದಲ್ಲಿ ಮೊದಲ ಶ್ರಾವಣ ಸೋಮವಾರ ಹಾಗೂ ನಾಗರ ಪಂಚಮಿಯನ್ನು ಪ್ರಯುಕ್ತ ನಾಗಪ್ಪ ಕಟ್ಟೆಗಳಿಗೆ ತೆರಳಿ ಹಾಲನ್ನೆರೆದು ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಶ್ರಾವಣ ಮೊದಲ ಸೋಮವಾರದ ನಿಮಿತ್ತ ವಿವಿಧ ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳಿಗೆ ಹಾಲು, ಮೊಸರು, ಜೇನು, ತುಪ್ಪದಿಂದ ರುದ್ರಾಭಿಷೇಕ ನೆರವೇರಿಸಲಾಯಿತು. ಮಹಿಳೆಯರು ಬಿಲ್ವಪತ್ರೆ, ಅರಿಶಿನ, ಕುಂಕುಮದಿಂದ ಪೂಜಿಸಿ ಪ್ರಾರ್ಥಿಸಿದರು. ನಾಗಪಂಚಮಿ ಹಬ್ಬವು ಸಹ ಜಿಲ್ಲೆಯ ಹಳ್ಳಿಗಳಲ್ಲಿ ವಿಶೇಷವಾಗಿ ಆಚರಿಸಲಾಯಿತು, ರೈತರು ತಮ್ಮ ಹೊಲದ ಬದಿಯಲ್ಲಿರುವ ಹುತ್ತಕ್ಕೆ ಹಾಲು, ಅರಿಶಿನ ಬೆರೆಸಿದ ನೀರು ಎರೆಯುವ ಮೂಲಕ ನಾಗದೇವರನ್ನು ಆರಾಧಿಸಿದರು. ದೇವದುರ್ಗ, ಲಿಂಗಸುಗೂರು, ಸಿಂಧನೂರು, ಮಸ್ಕಿ, ಸಿರವಾರ, ಅರಕೇರಾ ಹಾಗೂ ಮಾನ್ವಿ ಭಾಗದ ಗ್ರಾಮಗಳಲ್ಲಿ ಮಹಿಳೆಯರು ಹುತ್ತಕ್ಕೆ ಹೂವು, ಅಕ್ಷತೆ ಅರ್ಪಿಸಿ, ನಾಗನ ಹಾಡುಗಳನ್ನು ಹಾಡಿದರು.
ಲಿಂಗಸುಗೂರುಲ್ಲಿ ನಾಗರ ಪಂಚಮಿ
ಪಟ್ಟಣದ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆ ಮಾಡಿದ ನಾಗದೇವತೆ ಮೂರ್ತಿಗಳಿಗೆ ಮಹಿಳೆಯರು ಮಡಿಯಿಂದ ತಯಾರಿಸಿದ ಎಳ್ಳು, ಶೇಂಗಾ, ಪುಟಾಣಿ, ಉಂಡಿಗಳ ತಯಾರಿಸಿ, ಗೋದಿ ಹುಗ್ಗಿ ಮಾಡಿ, ಕಡ್ಲೆಕಾಳು ಜೋಳದ ಹರಳು ಹುರಿದು, ಗೊಬ್ಬರಿ ಬಟ್ಟಲಿನಲ್ಲಿ ಬೆಲ್ಲ-ಹಾಲು ಹತ್ತಿಯಿಂದ ನಿರ್ಮಿಸಿದ ಅಂಗನೂಲು ಮಾಲೆಯೊಂದಿಗೆ ತೆರಳಿ ತಾಯಿ-ತಂದೆ ಪಾಲು, ಅಣ್ಣ-ತಮ್ಮನ ಪಾಲು, ಅಕ್ಕ-ತಂಗಿಯ ಪಾಲು ಸರ್ವರು ಪಾಲು ಎಂದು ಹೇಳುತ್ತಾ ನಾಗಪ್ಪ ಹಾಲೆರೆದರು.
--ಬಾಕ್ಸ್ 02--------
ಮುದಗಲ್: ಪಟ್ಟಣದ ಕಿಲ್ಲಾದಲ್ಲಿರುವ ಹಿರೇವಾಡ ನಾಗರಾಜ ದೇವಸ್ಥಾನದಲ್ಲಿ ನಾಗರ ಪಂಚಮಿ ಪ್ರಯಕ್ತ ಸೋಮವಾರ ವಿಶೇಷ ಪೂಜೆ ಕಾರ್ಯಕ್ರಮಗಳು ಜರುಗಿದವು. ಹಿರೇವಾಡ ನಾಗರಾಜ ಸ್ವಾಮಿ ದೇಗುದಲ್ಲಿ ನಾಗರ ಪಂಚಮಿ ಪ್ರಯುಕ್ತ 13 ರಂದು ಆಶ್ಲೇಷ ಬಲಿ ಪ್ರಧಾನ ಪೂಜೆ, 14 ಸಂಪ್ರೋಕ್ಷಣಾ, ಮತ್ತು ಧ್ವಜಾರೋಹಣ, ಬ್ರಹ್ಮಕಲಶ ಸ್ಥಾಪನಾ, 15 ರಂದು ಬ್ರಹ್ಮಕಲಶದಿಂದ ಕುಂಭಾಬಿಷೇಕ, ನಾಗರಾಜ ಸ್ವಾಮಿ ಮೂರ್ತಿಗೆ 108 ಕುಂಭಗಳ ಅಭಿಷೇಕ, ಪಂಚಾಮೃತ ಅಭಿಷೇಕ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಧರ್ಮದರ್ಶಿ ವೇದ ಬ್ರಹ್ಮಶ್ರೀ ಸೋಮನಾಥ ಜೋಷಿ ಅವರ ಸಾನಿಧ್ಯದಲ್ಲಿ ಅರ್ಚಕ ಬಳಗದ ಪ್ರದೀಪ್ ಜೋಷಿ, ಪ್ರಸನ್ನ ಕುಮಾರ್ ಜೋಷಿ ದಂಪತಿಗಳು, ಬಾಲಸುಬ್ರಮಣ್ಯ ಜೋಷಿ , ಬದ್ರಿನಾರಾಯಣ ಶರ್ಮಾ ಅವರ ನೇತೃತ್ವದೊಂದಿಗೆ ಚೌತಿಯ ಎಲ್ಲ ಧರ್ಮಿಕ ಪೂಜಾ ಕಾರ್ಯಗಳು ನೆರವೇರಿದವು.
----ಫೋಟೊ-----17ಕೆಪಿಆರ್ಸಿಆರ್ 03: ರಾಯಚೂರಿನಲ್ಲಿ ಮಹಿಳೆಯರು, ಮಕ್ಕಳು ಕುಟುಂಬ ಸಮೇತರಾಗಿ ಆಗಮಿಸಿ ನಾಗಪ್ಪಕಟ್ಟೆಗೆ ಹಾಲೆರೆದು ನಾಗರ ಪಂಚಮಿ ಆಚರಿಸಿದರು.
17ಕೆಪಿಎಂಡಿಎಲ್ 03: ಮುದಗಲ್ ನ ಅಂದ್ರೋನಿ ಕಿಲ್ಲಾದಲ್ಲಿನ ಹಿರೇವಾಡ ನಾಗರಾಜ ಸ್ವಾಮಿ ದೇಗುಲದಲ್ಲಿ ನಾಗಪಂಚಮಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನಗಳು, ಅನ್ನಸಂತರ್ಪಣೆ ಸೋಮವಾರ ಜರುಗಿತು.