ಧಾರವಾಡ:
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಸರಿಯಲ್ಲ. ಕಳಂಕಿತರನ್ನು ಸಚಿವ ಸಂಪುಟದಿಂದ ಕಾಂಗ್ರೆಸ್ ಸರ್ಕಾರ ತಕ್ಷಣ ಕೈಬಿಡಬೇಕು ಹಾಗೂ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.
ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ಬಡವರು, ಪರಿಶಿಷ್ಟ ಪಂಗಡದವರು ಹಾಗೂ ದುರ್ಬಲ ವರ್ಗಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವು ಯಾರೊಬ್ಬರ ವೈಯಕ್ತಿಕ ಹಣವಲ್ಲ. ಅದು ಜನರ ಹಣ. ಆ ಹಣವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ. ಜನರ ಹಣದ ದುರ್ಬಳಕೆ ಹಾಗೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮದ ಪ್ರಕರಣ ಇಡೀ ಕರ್ನಾಟಕದ ಜನತೆಯ ಮನಸ್ಸನ್ನು ಕಲುಕಿದೆ. ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಕೋಟ್ಯಂತರ ರೂಪಾಯಿಗಳ ಅಕ್ರಮ ಹಣ ವರ್ಗಾವಣೆಯ ಗಂಭೀರ ಆರೋಪಗಳು ದಾಖಲಾಗಿರುವ ಸಂದರ್ಭದಲ್ಲಿ, ಸಂಬಂಧಿಸಿದ ಮಾಜಿ ಸಚಿವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಸರ್ಕಾರದ ನಡೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಹೇಳಿದರು.
ಮಾಜಿ ಮೇಯರ್ ಜ್ಯೋತಿ ಪಾಟೀಲ, ಜಯತೀರ್ಥ ಕಟ್ಟಿ ಮಾತನಾಡಿದರು. ಬಸವರಾಜ ಕುಂದಗೋಳಮಠ, ಶಿವು ಮೆಣಸಿನಕಾಯಿ, ಬಸವರಾಜ ಗರಗ, ನಿಂಗಪ್ಪ ಸುತಗಟ್ಟೆ, ಗುರು ಪಾಟೀಲ, ರಾಜೇಶ್ವರಿ ಸಾಲಗಟ್ಟಿ, ಮಾಲತಿ ಹುಲಿಕಟ್ಟಿ, ನೀಲವ್ವ ಆರವಾಲದ, ವಿಜಯಾನಂದ ಶೆಟ್ಟಿ, ಸಂಜಯ ಕಪಟಕರ, ಮಂಜುನಾಥ ಮಲ್ಲಿಗವಾಡ, ನಾಗರಾಜ ನಾಯಿಕ, ಪ್ರಮೋದ ಕಾರಕೂನ, ರಮೇಶ ದೋಡವಾಡ ಇದ್ದರು.