- ಸಿಎಂ, ಡಿಸಿಎಂ ಬಳಿ ರೈತರ ನಿಯೋಗ ತೆರಳೋಣ ಎಂದು ಅಭಯ ।
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂ ಬಲದಂಡೆ ನಾಲೆ ಸೀಳಿ ಕೈಗೊಂಡಿದ್ದ ಕಾಮಗಾರಿಯನ್ನೂ ಸಂಬಂಧಿಸಿದವರಿಗೆ ಮಾತನಾಡಿ ತಕ್ಷಣದಿಂದಲೇ ಸ್ಥಗಿತ ಮಾಡಿಸಿದ್ದೇನೆ. ಅಚ್ಚುಕಟ್ಟು ಪ್ರದೇಶದ ರೈತ ಮುಖಂಡರು, ರೈತರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬಳಿ ನಿಯೋಗ ಕರೆದೊಯ್ಯುತ್ತೇನೆ. ಆ ಮೂಲಕ ಜಿಲ್ಲೆ ರೈತರ ಹಿತಕಾಯುತ್ತೇನೆ ಎಂದು ಜಿಲ್ಲೆ ಅಚ್ಚುಕಟ್ಟು ರೈತರಿಗೆ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅಭಯ ನೀಡಿದರು.ನಗರದ ತಮ್ಮ ಗೃಹ ಕಚೇರಿ ಶಿವಪಾರ್ವತಿಯಲ್ಲಿ ಮಂಗಳವಾರ ಅಚ್ಚುಕಟ್ಟು ರೈತ ಮುಖಂಡರು, ರೈತರ ಸಭೆಯಲ್ಲಿ ಅಹವಾಲು ಆಲಿಸಿ ಅವರು ಮಾತನಾಡಿದರು. ದಾವಣಗೆರೆ ಜಿಲ್ಲೆಯ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿಷಯವನ್ನೇ ತಿಳಿಸದೇ, ಬರೀ ಚಿತ್ರದುರ್ಗ, ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಸಿ, ತೀರ್ಮಾನ ಕೈಗೊಂಡ ಬಗ್ಗೆಯೂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದೇನೆ. ತಕ್ಷಣವೇ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದೆ. ಅದರಂತೆ ಈಗ ಕಾಮಗಾರಿಯನ್ನೂ ನಿಲ್ಲಿಸಿದ್ದಾರೆ ಎಂದರು.
ಭದ್ರಾ ಡ್ಯಾಂ ಬಳಿ ಕೈಗೊಂಡ ಕಾಮಗಾರಿ ಬಗ್ಗೆ ಆತಂಕ ಬೇಡ. ಬಫರ್ ಝೋನ್ನಲ್ಲಿ ಕೈಗೊಂಡಿದ್ದ ಕಾಮಗಾರಿ ಸ್ಥಗಿತಗೊಳಿಸುವಂತೆ ಸಂಬಂಧಿಸಿದ ಸಚಿವರು, ಅಧಿಕಾರಿಗಳೊಡನೆ ಸಮಾಲೋಚನೆ ಮಾಡಿ, ಕಾಮಗಾರಿ ಸ್ಥಗಿತ ಮಾಡಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನದಂತೆ ಅಧಿಕಾರಿಗಳು ಕಾಮಗಾರಿ ಕೈಗೊಂಡಿದ್ದಾರೆ. ಇದು ಅಧಿಕಾರಿಗಳ ಮಟ್ಟದಲ್ಲಿ ಆಗಿರುವ ನಿರ್ಧಾರ. ಸಿಎಂ, ಡಿಸಿಎಂ ಬಳಿ ಚರ್ಚಿಸೋಣ ಎಂದರು.ಸದ್ಯಕ್ಕೆ ಸಿಎಂ ದೆಹಲಿ ಪ್ರವಾಸದಲ್ಲಿದ್ದು, ಅಲ್ಲಿಂದ ಬರುತ್ತಿದ್ದಂತೆಯೇ ರೈತರ ನಿಯೋಗವನ್ನು ಕರೆದೊಯ್ಯೋಣ. ಸಿಎಂ, ಡಿಸಿಎಂ ಇಬ್ಬರಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡೋಣ. ನಮ್ಮ ಜಿಲ್ಲೆಯ ಅಚ್ಚುಕಟ್ಟು ರೈತರ ಸಮಸ್ಯೆ ಬಗ್ಗೆಯೂ ಸರ್ಕಾರದ ಗಮನಕ್ಕೆ ತರೋಣ. ನಿಮ್ಮ ಜೊತೆಗೆ ನಾವಿದ್ದು, ಯಾವುದೇ ಭಯವೂ ಬೇಡ ಎಂದು ಅವರು ಧೈರ್ಯ ತುಂಬಿದರು.
ಚಿತ್ರದುರ್ಗ ಜಿಲ್ಲೆಯ ಕೆಲ ಪಟ್ಟಣಗಳು, ಚಿಕ್ಕಮಗಳೂರು ತಾಲೂಕಿನ ಕೆಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದಂತೆ 2020ರಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಲ ಸಂಪನ್ಮೂಲ ಇಲಾಖೆ ಅಧ್ಯಕ್ಷತೆಯ ಸಭೆ ತೀರ್ಮಾನದಂತೆ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಅವೈಜ್ಞಾನಿಕವೆಂಬ ನಮ್ಮ ರೈತರ ಅಭಿಪ್ರಾಯದ ಹಿನ್ನೆಲೆ ಈ ಹಿಂದೆಯೇ ಇಂತಹ ಕಾಮಗಾರಿ ತಡೆಹಿಡಿಯುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೆ. ನಮ್ಮ ಜಿಲ್ಲೆಯ ಅನ್ನದಾತರಿಂದ ಕುಡಿಯುವ ನೀರು ಕೊಡಲು ವಿರೋಧವಿಲ್ಲ. ಆದರೆ, ಬಫರ್ ಝೋನ್ನಲ್ಲಿ, ಬಲದಂಡೆ (ಆರ್ಬಿಸಿ) 250 ಮೀಟರ್ನಲ್ಲಿ ಕಾಲುವೆ ಸೀಳಿ ನೀರೊಯ್ಯಲು ವಿರೋಧವಿದೆ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತಿಳಿಸಿದರು.ಭದ್ರಾ ನೀರು ಬಳಕೆಗಾರರ ಮಹಾ ಮಂಡಳದ ಅಧ್ಯಕ್ಷ ದ್ಯಾವಪ್ಪ ರೆಡ್ಡಿ, ಬೇತೂರು ಕೆಂಚಪ್ಪ, ಮುದೇಗೌಡ್ರ ಗಿರೀಶ, ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಕೆ.ಆಂಜನೇಯ, ತಿಪ್ಪೇರುದ್ರಪ್ಪ ಸಿರಿಗೆರೆ, ನಂದಿತಾವರೆ ಮುರುಗೇಂದ್ರಪ್ಪ, ನಂದಿಗಾವಿ ಶ್ರೀನಿವಾಸ, ಹಳೆಬಾತಿ ಶಾಂತಪ್ಪ, ರವಿ, ಮಂಜುನಾಥ ರೆಡ್ಡಿ, ಕುಂಬಳೂರು ಗಿರೀಶ, ಕುಂದೂರು ರಾಜಪ್ಪ, ಮಾಗೋಡು ದೇವೇಂದ್ರಪ್ಪ, ಅಂಜಿ ಬಾಬು, ಕೆ.ಬಿ.ಬಸವಲಿಂಗಪ್ಪ, ಕಲ್ಪನಹಳ್ಳಿ ನಾಗರಾಜ, ಚೇತನ್, ಕೆ.ಎನ್.ಹಳ್ಳಿ ದಿವಾಕರಪ್ಪ, ಬಾತಿ ಉಮೇಶ, ಆಂಜನೇಯ ಸೇರಿದಂತೆ ದಾವಣಗೆರೆ, ಹರಿಹರ, ಹರಪನಹಳ್ಳಿ ತಾಲೂಕಿನ ರೈತರು, ಅಚ್ಚುಕಟ್ಟು ರೈತರು ಭಾಗವಹಿಸಿದ್ದರು.
- - -(ಕೋಟ್) ಬಿಜೆಪಿ ಸರ್ಕಾರವೇ 2020ರಲ್ಲಿ ಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಯೋಜನೆಗಳಿಗೆ ಅನುಮೋದನೆ ನೀಡಿದೆ. ಆಗೆಲ್ಲಾ ಸುಮ್ಮನಿದ್ದ ಮಾಜಿ ಸಂಸದ ಹಾಗೂ ಬಿಜೆಪಿ ಮುಖಂಡರು ಈಗ ದಾವಣಗೆರೆ ಜಿಲ್ಲೆಯ ಮೇಲೆ ಪ್ರೀತಿ ಉಕ್ಕಿದವರಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
- ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಸಚಿವ- - -
-24ಕೆಡಿವಿಜಿ6, 7, 8:ದಾವಣಗೆರೆಯ ಗೃಹ ಕಚೇರಿಯಲ್ಲಿ ನಡೆ ರೈತರ ಸಭೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಮಾತನಾಡಿದರು.