ಭಟ್ಕಳ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನಾಚರಣೆಯನ್ನು ಶಿರಾಲಿಯ ಚಿತ್ರಾಪುರದ ಸಾಹಿತಿ, ಶಿಕ್ಷಕ ಶ್ರೀಧರ್ ಶೇಟ್ ಅವರ ನಿವಾಸ ಕಲಾಸಿರಿಯಲ್ಲಿ ಆಚರಿಸಲಾಯಿತು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.ಸಾಹಿತಿ ಮಾನಾಸುತ ಶಂಭು ಹೆಗಡೆ ಮಾತನಾಡಿ, ಕನ್ನಡ ನಾಡು ನುಡಿಯನ್ನು ಕಟ್ಟುವಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಹಿಂದಿನವರ ಕೊಡುಗೆಗಳನ್ನು ಸದಾ ಸ್ಮರಿಸಬೇಕು ಎಂದು ಹೇಳಿ ಸ್ವರಚಿತ ಕವಿತೆ ವಾಚಿಸಿದರು. ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ನಾಡಿಗೆ ಪ್ರಾತಃ ಸ್ಮರಣೀಯರು. ಈ ನಾಡಿನ ಬೌದ್ಧಿಕ ಪ್ರಗತಿಗಾಗಿ ಮೈಸೂರು ವಿಶ್ವವಿದ್ಯಾಲಯ, ಭೌತಿಕ ಪ್ರಗತಿಗಾಗಿ ಕೃಷ್ಣರಾಜಸಾಗರ ಅಣೆಕಟ್ಟು, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರಗತಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಸಾಮಾಜಿಕ, ಶೈಕ್ಷಣಿಕ, ಉದ್ಯೋಗಿಕ, ಆರ್ಥಿಕವಾಗಿ ಈ ನಾಡನ್ನು ಕಟ್ಟುವಲ್ಲಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಬಹಳ ದೊಡ್ಡದು. ಇವತ್ತು ಬೆಂಗಳೂರು ವಿಶ್ವಮಾನ್ಯವಾಗಿ ಗುರುತಿಸಿಕೊಳ್ಳುವಲ್ಲಿ, ಮೈಸೂರು ಸಾಂಸ್ಕೃತಿಕ ನಗರವಾಗಿ ಗುರುತಿಸಿಕೊಳ್ಳುವಲ್ಲಿ ಒಡೆಯರ್ ಅವರ ದೂರದೃಷ್ಟಿಯಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸೈನಿಕ ಎಂ.ಡಿ. ಪಕ್ಕಿ ಸಾಂದರ್ಭಿಕವಾಗಿ ಮಾತನಾಡಿದರು. ಸಾಹಿತಿ ಶ್ರೀಧರ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳ ಮಾಡಿದರು. ಕವಯತ್ರಿ, ಶಿಕ್ಷಕಿ ಹೇಮಲತಾ ರಾವ್ ವಂದಿಸಿದರು. ಕಾರ್ಯಕ್ರಮದಲ್ಲಿ ಯುವಕವಿ ನಂದನ್ ನಾಯ್ಕ, ಶ್ರೀಶಾ ಶ್ರೀಧರ ಶೇಟ್ ಮುಂತಾದವರಿದ್ದರು.ಶಿರಾಲಿ ಚಿತ್ರಾಪುರದ ಶ್ರೀಧರ ಶೇಟ್ ಅವರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನ ಆಚರಿಸಲಾಯಿತು.