ನಾಮಫಲಕ ಅವಘಡ: ನಿರ್ಲಕ್ಷ್ಯ ಅಧಿಕಾರಿಗಳ ಅಮಾನತಿಗೆ ಬಿಜೆಪಿ ಆಗ್ರಹ

KannadaprabhaNewsNetwork |  
Published : Feb 24, 2026, 03:45 AM IST
ಕಂಪ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬಿಎಲ್‌ಎ–1 ಜಿ. ಶ್ರೀನಿವಾಸುಲು ಮಾತನಾಡಿದರು. ಪ್ರಮುಖರಾದ ಎನ್. ಮನೋಜಗೌಡ, ಕೆ. ಪ್ರಶಾಂತ, ಎಂ. ಭಾಸ್ಕರ, ಕೆ. ಬಸವಪ್ರಭು ಸೇರಿದಂತೆ ಇತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಕೋಟೆ ಸೇತುವೆ ಸಮೀಪ ಸ್ವಾಗತ ನಾಮಫಲಕ ಅಳವಡಿಸುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಪುರಸಭೆ ಆಡಳಿತದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ

ಕಂಪ್ಲಿ: ಪಟ್ಟಣದ ಕೋಟೆ ಸೇತುವೆ ಸಮೀಪ ಸ್ವಾಗತ ನಾಮಫಲಕ ಅಳವಡಿಸುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಕಾರ್ಮಿಕನೊಬ್ಬ ಪ್ರಾಣ ಕಳೆದುಕೊಂಡಿರುವುದು ಪುರಸಭೆ ಆಡಳಿತದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಬಿಜೆಪಿ ಮುಖಂಡ ಜಿ.ಶ್ರೀನಿವಾಸುಲು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮೃತ ಕಾರ್ಮಿಕನ ಕುಟುಂಬಕ್ಕೆ ತಕ್ಷಣವೇ ₹50 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ ತಲಾ ₹25 ಲಕ್ಷ ಪರಿಹಾರವನ್ನು ಸರ್ಕಾರ ಘೋಷಿಸಬೇಕು ಎಂದು ಆಗ್ರಹಿಸಿದರು.

ಇಲ್ಲಿನ ಮಾಜಿ ಶಾಸಕ ಟಿ.ಎಚ್. ಸುರೇಶ್‌ಬಾಬು ಅವರ ಕಚೇರಿ ಆವರಣದಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಾಮಫಲಕ ಅಳವಡಿಸುವ ವೇಳೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ನಿರ್ಲಕ್ಷ್ಯ ತೋರಿದ ಪ್ರಭಾರ ಮುಖ್ಯಾಧಿಕಾರಿ ಹಾಗೂ ಸಂಬಂಧಿಸಿದ ಅಭಿಯಂತರರನ್ನು ತಕ್ಷಣ ಅಮಾನತುಗೊಳಿಸಬೇಕು. ಈ ದುರ್ಘಟನೆ ಕೇವಲ ಅಪಘಾತವಲ್ಲ, ಅಧಿಕಾರಿಗಳ ಅಜಾಗರೂಕತೆ ಮತ್ತು ಆಡಳಿತ ವೈಫಲ್ಯದ ಪರಿಣಾಮ ಎಂದು ಆರೋಪಿಸಿದರು.

ಗುತ್ತಿಗೆದಾರ ಸಂಸ್ಥೆಯ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕ ಹಣ ಬಳಸಿ ಕೈಗೊಂಡ ಕಾಮಗಾರಿಯಲ್ಲಿ ಗುಣಮಟ್ಟ ಹಾಗೂ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.

ಕಂಪ್ಲಿ ಪುರಸಭೆಗೆ ಕೆಎಂಎಎಸ್ ದರ್ಜೆಯ ಶಾಶ್ವತ ಮುಖ್ಯಾಧಿಕಾರಿಯನ್ನು ತಕ್ಷಣ ನೇಮಕ ಮಾಡಬೇಕು. ಆಡಳಿತ ಯಂತ್ರ ನಿರ್ಲಕ್ಷ್ಯ ಮುಂದುವರಿದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಎನ್. ಮನೋಜಗೌಡ, ಮಂಡಲ ಪ್ರಧಾನ ಕಾರ್ಯದರ್ಶಿ ಕೆ.ಪ್ರಶಾಂತ, ನಗರ ಉಪಾಧ್ಯಕ್ಷ ಎಂ.ಭಾಸ್ಕರ, ನಗರ ಪ್ರಧಾನ ಕಾರ್ಯದರ್ಶಿಗಳಾದ ಕೆ. ಬಸವಪ್ರಭು, ಕಟ್ಟೆ ವಿಶ್ವನಾಥ ಸೇರಿದಂತೆ ಕಾರ್ಯಕರ್ತರಾದ ಸಿ.ಎ. ಚನ್ನಪ್ಪ, ಶಂಶುದ್ದೀನ್, ಮಾಜಿ ಶಾಸಕರ ಆಪ್ತ ಸಹಾಯಕ ಎಚ್.ಎಂ. ವಿರುಪಾಕ್ಷಯ್ಯಸ್ವಾಮಿ ಹಾಗೂ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಂದಲಗಳಿಗೆ ಶೀಘ್ರ ತೆರೆ: ಸತೀಶ್ ಜಾರಕಿಹೊಳಿ
ಪೌಷ್ಟಿಕ ಆಹಾರ ಸೇವಿಸಿ ಸದೃಢರಾಗಿ: ಡಾ. ಪ್ರಕಾಶ ಸಂಕನೂರ