ಶಿರಾಲಿ ಸಾರದಹೊಳೆಯಲ್ಲಿ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವ ಆಚರಣೆ
ಕನ್ನಡಪ್ರಭ ವಾರ್ತೆ ಭಟ್ಕಳಜತ್ತಿನೆಲ್ಲಡೆ ಧರ್ಮ, ಅಧರ್ಮ, ನ್ಯಾಯ ಹಾಗೂ ಅನ್ಯಾಯದ ವಿರುದ್ದ ಹೋರಾಟ ನಡೆಯುತ್ತಿದೆ. ಅವೆಲ್ಲವನ್ನು ಕೊನೆಗಾಣಿಸಲು ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶ, ಸಂದೇಶ ಅಳವಡಿಸಿಕೊಂಡರೆ ಈ ಜಗತ್ತು ಶಾಂತಿಯುತವಾಗಿ ಬದುಕಬಹುದಾಗಿದೆ ಎಂದು ರಾಜ್ಯ ನಾರಾಯಣ ಗುರು ವಿಚಾರ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.
ಶಿರಾಲಿಯ ಸಾರದಹೊಳೆಯ ಹಳೇಕೋಟೆ ಹನುಮಂತ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಲಾದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವದಲ್ಲಿ ಮುಖ್ಯ ವಕ್ತಾರರಾಗಿ ಮಾತನಾಡಿದರು.ನಾರಾಯಣಗುರುಗಳು ಮನುಷ್ಯತ್ವದ ದೇವಮಾನವರಾಗಿ, ಜಗತ್ತಿಗೆ ಶಾಂತಿ ಮಂತ್ರ ನೀಡಿದವರು. ಹಿಂದೂ ಧರ್ಮವು ವಿವಿಧ ಜಾತಿಯ ಹೆಸರಿನಲ್ಲಿ ಹಂಚಿಹೋಗಿದ್ದ ಕಾಲದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಧರ್ಮ, ಒಂದೇ ಕುಲ ಎಂಬ ಸಂದೇಶದೊಂದಿಗೆ ಸಮಾಜದಲ್ಲಿ ಜಾತಿ ಪದ್ಧತಿ ವಿರೋಧಿಸಿ ಮಾನವ ಜಾತಿಯ ಒಂದೇ ಎಂದು ಸಾರಿದರು. ಗುರುಗಳ ಸಂದೇಶದಂತೆ ಶಿಕ್ಷಣದಿಂದ ಸ್ವಂತ್ರರಾಗಲು ನಾವು ಇಂದು ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತರೆದು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ನೀಡಿದರೆ ಸಮಾಜವು ಬಲಿಷ್ಠ ಸಮಾಜವಾಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಳೇಕೋಟೆ ಹನುಮಂತ ದೇವಸ್ತಾನದ ಅಧ್ಯಕ್ಷ ಆರ್.ಕೆ. ನಾಯ್ಕ ಮಾತನಾಡಿ, ನಾವು ಹಿಂದುಳಿದವರು ನಮ್ಮಿಂದ ಏನನ್ನು ಸಾಧಿಸಲಾಗದು ಎಂಬ ಭಾವನೆಗಳನ್ನು ಮೊದಲು ನಮ್ಮ ಮನಸ್ಸಿನಿಂದ ತೊಡೆದು ಹಾಕಬೇಕು. ಶ್ರೀ ನಾರಾಯಣ ಗುರುಗಳ ಚಿಂತೆನೆಗಳನ್ನು ಜೀವನದಲ್ಲಿ ಮೈಗೂಡಿಕೊಂಡು ನಾವೆಲ್ಲರೂ ಬಾಳಬೇಕಾಗಿದೆ ಎಂದರು.ಮಾಜಿ ಸಚಿವ ಆರ್.ಎನ್. ನಾಯ್ಕ ಮಾತನಾಡಿ, ನಾರಾಯಣ ಗುರುಗಳ ಒಂದೇ ದೇವರು, ಒಂದೇ ಧರ್ಮ ಎಂಬಂತೆ ನಾವೆಲ್ಲರೂ ನಮ್ಮ ಮೂಲ ದೇವರಿಗೆ ಮೊದಲು ನಡೆದುಕೊಳ್ಳಬೇಕು. ನಮ್ಮ ವ್ಯಕ್ತಿತ್ವವನ್ನು ನಾವೇ ರೂಪಿಸಿಕೊಳ್ಳಬೇಕು. ಬೇರೆಯವರಿಂದ ನಮ್ಮ ವ್ಯಕ್ತಿತ್ವ ಬದಲಾಯಿಸಲು ಸಾಧ್ಯವಿಲ್ಲ ಎಂದರರ್ಲದೇ, ಹಿಂದುಳಿದ ಸಮಾಜದವರಾದ ನಾವು ನಮ್ಮ ಮೂಲ ಧರ್ಮ, ತತ್ವವನ್ನು ಅರಿತು ನಮ್ಮ ಪೂರ್ವಜ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.
ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಜೆ.ಡಿ. ನಾಯ್ಕ, ಹಳೆಕೋಟೆ ಹನುಮಂತ ದೇವಸ್ಥಾನದ ಧರ್ಮದರ್ಶಿ ಸುಬ್ರಾಯ ನಾಯ್ಕ ಮಾತನಾಡಿದರು. ತಾಲೂಕು ಶ್ರೀ ನಾರಾಯಣಗುರು ಸಮಿತಿಯ ಅಧ್ಯಕ್ಷತೆ ಅಧ್ಯಕ್ಷ ಮನಮೋಹನ ನಾಯ್ಕ ವಹಿಸಿದ್ದರು. ವೇದಿಕೆಯಲ್ಲಿ ನಾಮಧಾರಿ ಸಮಾಜದ ಅಬಿವೃದ್ಧಿ ಸಂಘದ ಉಪಾಧ್ಯಕ್ಷ ಎಂ.ಕೆ. ನಾಯ್ಕ, ಮಾವಳ್ಳಿ ನಾಮಧಾರಿ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗೇಂದ್ರ ನಾಯ್ಕ ಉಪಸ್ಥಿತರಿದ್ದರು.ಸಾಮಾಜಿಕ ಪರಿವರ್ತನೆಯಲ್ಲಿ ಶ್ರೀ ನಾರಾಯಣ ಗುರಗಳ ಕೊಡುಗೆ ಎಂಬ ವಿಷಯದ ಬಗ್ಗೆ ಪಿಯು ವಿದ್ಯಾರ್ಥಿಗಳಿಗೆ ನಡೆದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಹಣ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಿವಾನಂದ ಎನ್. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಈಶ್ವರ ನಾಯ್ಕ ವಂದಿಸಿದರು. ಶಿಕ್ಷಕ ನಾರಾಯಣ ನಾಯ್ಕ ನಿರೂಪಿಸಿದರು. ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಹಣ ಬಿಡುಗಡೆಗೆ ಆಗ್ರಹಿಸಿ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಿರಾಲಿಯ ನಾಗಮಾಸ್ತಿ ದೇವಸ್ಥಾನದಿಂದ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆಯೊಂದಿಗೆ ಸಾರದಹೊಳೆ ಸಭಾಭವನಕ್ಕೆ ಒಯ್ಯಲಾಯಿತು.