ಕಬಡ್ಡಿ ಕ್ರೀಡಾಪಟುಗಳ ಬದುಕು ಜನರ ಮನದಲ್ಲಿ ಪ್ರಶ್ನಾರ್ಥಕವಾಗಿ ಉಳಿಯಬಾರದು. ಕ್ರೀಡೆಗಳಲ್ಲಿ ಜಯ ಸಾಧಿಸಿದ ರೀತಿಯಲ್ಲಿ ವೈಯಕ್ತಿಕ ಬದುಕಿನಲ್ಲಿಯೂ ಸಹ ಯಶಸ್ಸು ಸಾಧಿಸುವಂತೆ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಆಶಯ ವ್ಯಕ್ತಪಡಿಸಿದರು.
ಬ್ಯಾಡಗಿ: ಕಬಡ್ಡಿ ಕ್ರೀಡಾಪಟುಗಳ ಬದುಕು ಜನರ ಮನದಲ್ಲಿ ಪ್ರಶ್ನಾರ್ಥಕವಾಗಿ ಉಳಿಯಬಾರದು. ಕ್ರೀಡೆಗಳಲ್ಲಿ ಜಯ ಸಾಧಿಸಿದ ರೀತಿಯಲ್ಲಿ ವೈಯಕ್ತಿಕ ಬದುಕಿನಲ್ಲಿಯೂ ಸಹ ಯಶಸ್ಸು ಸಾಧಿಸುವಂತೆ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಆಶಯ ವ್ಯಕ್ತಪಡಿಸಿದರು.ಸ್ಥಳೀಯ ಎಸ್ಜೆಜೆಎಂ ತಾಲೂಕು ಕ್ರೀಡಾಂಗಣದಲ್ಲಿ ಬಿಇಎಸ್ಎಂ ಪದವಿ ಕಾಲೇಜು ಮತ್ತು ಹಾವೇರಿ ಜಿಲ್ಲಾ ಅಮೆ ಚೂರ ಕಬಡ್ಡಿ ಅಸೋಸಿಯೇಶನ್ ಸಂಯುಕ್ತಾಶ್ರಯದಲ್ಲಿ ಆರಂಭವಾದ ಹಾವೇರಿ ವಿಶ್ವವಿದ್ಯಾಲಯ ಪುರುಷರ ತಂಡದ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತದ ಮಟ್ಟಿಗೆ ಕ್ರೀಡೆ, ಶಿಕ್ಷಣ ನಾಣ್ಯದ 2 ಮುಖಗಳಿದ್ದಂತೆ. ಅದರಲ್ಲೂ ಕಬಡ್ಡಿ ಕ್ರೀಡಾ ಜಗತ್ತಿಗೆ ಕಾಲಿಡುವ ವಿದ್ಯಾ ರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುತ್ತಾರೆ ಎಂಬ ಅಪಖ್ಯಾತಿಯಿದ್ದು, ಇದನ್ನು ಸುಳ್ಳಾಗಿಸುವಷ್ಟರ ಮಟ್ಟಿಗೆ ನಿಮ್ಮ ಸಾಧನೆಯ ಶಿಖರ ತಲುಪಬೇಕಾಗಿದೆ ಎಂದರು.
ಪ್ರತಿಭೆಗಳಿಗೆ ಮಾರ್ಗದರ್ಶನ ಬೇಕು: ಉಪನ್ಯಾಸಕ ದೇವೇಂದ್ರಪ್ಪ ಮಾತನಾಡಿ, ಜಿಲ್ಲೆಯಲ್ಲಿ ಕಬಡ್ಡಿ ಕ್ರೀಡಾ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಆದರೆ ಅವರಿಗೆ ಸೂಕ್ತಮಾರ್ಗದರ್ಶನದ ಅವಶ್ಯಕತೆಯಿದೆ. ಶಾಲಾ, ಕಾಲೇಜುಗಳು ಸೇರಿದಂತೆ ಕಬಡ್ಡಿ ಅಸೋಸಿಯೇಶನ್ ಸಹಕಾರದಿಂದ ಕಳೆದ 25 ವರ್ಷದಲ್ಲಿ ನೂರಾರು ಕ್ರೀಡಾಪಟುಗಳು ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದ್ದಾರೆ ಎಂದರು.ಕ್ರೀಡಾಪಟುಗಳ ನೆರವಿಗೆ ಸದಾ ಸಿದ್ಧ: ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಎನ್.ಎಸ್. ಪ್ರಶಾಂತ ಮಾತನಾಡಿ, ಹಾವೇರಿ ವಿವಿಯ ಎಲ್ಲಾ ಕಬಡ್ಡಿ ಕಾರ್ಯಕ್ರಮಗಳನ್ನು ಕಳೆದ ವರ್ಷವೂ ಬಹಳಷ್ಟು ಅಚ್ಚುಕಟ್ಟಾಗಿ ನೆರವೇರಿಸಿದ್ದು ಪ್ರಸಕ್ತ ವರ್ಷವೂ ಮುಂದುವರೆದಿದೆ. ಹಾವೇರಿ ಕುಲಪತಿಗಳು ಹಾಗೂ ಕ್ರೀಡಾ ನಿರ್ದೇಶಕರು ಸೂಚನೆ ನೀಡಿದಲ್ಲಿ ಆಡಳಿತ ಮಂಡಳಿ ಸಹಕಾರದೊಂದಿಗೆ ಕ್ರೀಡಾಪಟುಗಳ ಬಿಇಎಸ್ ಕಾಲೇಜು ಅತ್ಯಂತ ಸಂತೋಷದಿಂದ ನೆರವಿಗೆ ಬರಲಿದೆ ಎಂದರು.ಸಹಕಾರ ಮರೆಯಲು ಸಾಧ್ಯವಿಲ್ಲ: ತರಬೇತುದಾರ ಡಾ. ಬಸನಗೌಡ ಲಕ್ಷ್ಮೇಶ್ವರ ಮಾತನಾಡಿ, ಬ್ಯಾಡಗಿ ಪಟ್ಟಣದ ಮಣ್ಣಿನಲ್ಲಿ ಕಬಡ್ಡಿ ಸೇರ್ಪಡೆಗೊಂಡಿದೆ. ಇದನ್ನು ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯ ತರಬೇತುದಾರರಾಗಿ ನಾನು ಕೆಲಸ ನಿರ್ವಹಿಸಿದರೂ ಸಹ ಪಟ್ಟಣದ ಕಬಡ್ಡಿ ಅಭಿಮಾನಿಗಳ ಸಹಕಾರ ಮರೆಯಲು ಸಾಧ್ಯವಿಲ್ಲ, ಕ್ರೀಡಾಪಟುಗಳಿಗೆ ಕೊಟ್ಟಿರುವ ಸೌಲಭ್ಯಗಳು ನಿಜಕ್ಕೂ ಶ್ಲಾಘನೀಯ. ಇದೊಂದು ಐತಿಹಾಸಿಕ ತರಬೇತಿ ಶಿಬಿರವಾಗಿದೆ ಎಂದರು.ಈ ವೇಳೆ ಉಪನ್ಯಾಸಕ ಡಾ. ಸುರೇಶಕುಮಾರ ಪಾಂಗಿ, ಡಾ. ಪ್ರಭು ದೊಡ್ಮನಿ, ರಾಷ್ಟ್ರಮಟ್ಟದ ಕಬಡ್ಡಿ ತೀರ್ಪುಗಾರ ಮಲ್ಲಿಕಾರ್ಜುನ ಕೋಡಿಹಳ್ಳಿ, ಕಬಡ್ಡಿ ಕೋಚ್ ಮಂಜುಳ ಭಜಂತ್ರಿ, ದೈಹಿಕ ನಿರ್ದೇಶಕ ಶಶಿಧರ ಮಾಗೋಡ, ಉಪನ್ಯಾಸಕ ಶಾಹೀದ ಆಫ್ರಿದಿ ಇಟಗಿ, ಚೇತನ ತಿಳವಳ್ಳಿ, ನಾಗರಾಜ ಹರಿಜನ ಹಾಗೂ ಇನ್ನಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.