ಚನ್ನಪಟ್ಟಣ: ತಾಲೂಕಿನ ನೀಲಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ ಮಾಡುವ ಆಟೋ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸೌಮ್ಯ ದೆಹಲಿಯ ಎಚ್ಸಿಎಲ್ ಫೌಂಡೇಶನ್, ಸಾಹಸ್ ಸಂಸ್ಥೆಯ ಸಹಯೋಗದಲ್ಲಿ ನೀಡುವ 2024ನೇ ಸಾಲಿನ ಘನತ್ಯಾಜ್ಯ ನಿರ್ವಹಣಾ ವಿಭಾಗದಲ್ಲಿ ಉತ್ತಮ ಮಹಿಳಾ ಚಾಲಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪಂಚಾಯತ್ ರಾಜ್ ಇಲಾಖೆ 2021ರಲ್ಲಿ ಗ್ರಾಮೀಣ ಭಾಗದಲ್ಲಿ ಘನತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಅನುಷ್ಠಾನಗೊಳಿಸಿತು. ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ತೆರಳಿ ಘನತ್ಯಾಜ್ಯ ಸಂಗ್ರಹಿಸಿ ಅದನ್ನು ಸಂಸ್ಕರಣೆ ಮಾಡಿ, ತಾಲೂಕು ಮಟ್ಟದ ಎಂಆರ್ಎಫ್ ಘಟಕಕ್ಕೆ ರವಾನೆ ಮಾಡಿ ಅದನ್ನು ಮರುಬಳಕೆಗೆ ಯೋಗ್ಯವಾಗುವಂತೆ ಸಂಸ್ಕರಣೆ ಮಾಡಲಾಗುತ್ತಿದೆ.
ಈ ಕಾರ್ಯಕ್ಕೆ ಗ್ರಾಮೀಣ ಭಾಗದಲ್ಲಿ ಕಸಸಂಗ್ರಹಣೆ ಮಾಡುವ ಮಹಿಳೆಯರೇ ಮುಖ್ಯ ಆಧಾರವಾಗಿದ್ದಾರೆ. ಮಹಿಳೆಯರಿಂದಲೇ ಕಸ ಸಂಗ್ರಹಣೆ ಮಾಡಿಸುತ್ತಿದ್ದು, ಗ್ರಾಪಂ ನೀಡಿರುವ ಆಟೋಗಳನ್ನು ಮಹಿಳೆಯರೇ ಚಾಲನೆ ಮಾಡಿಕೊಂಡು ಮನೆ ಮನೆಗೆ ತೆರಳಿ ಕಸಸಂಗ್ರಹಣೆ ಮಾಡುತ್ತಾರೆ. ಈ ರೀತಿ ರಾಜ್ಯದಲ್ಲಿ 10ಕ್ಕೂ ಹೆಚ್ಚು ಮಹಿಳೆಯರನ್ನು ಸಾಹಸ್ ಎನ್ಜಿಒ ವತಿಯಿಂದ ಪ್ರಶಸ್ತಿಗೆ ನಾಮಕರಣ ಮಾಡಲಾಗಿತ್ತಾದರೂ, ಅಂತಿಮವಾಗಿ ಸೌಮ್ಯ ಅವರನ್ನು ಆಯ್ಕೆಮಾಡಲಾಗಿದೆ.ಅಭಿನಂದನೆ: