ರಾಷ್ಟ್ರಮಟ್ಟದ ಕಬಡ್ಡಿ: ಬ್ಯಾಡಗಿ ದೇಶದ ಗಮನ ಸೆಳೆಯಲಿದೆ-ಶಾಸಕ ಶಿವಣ್ಣನವರ

KannadaprabhaNewsNetwork |  
Published : Sep 07, 2026, 02:45 AM IST
ಬ್ಯಾಡಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 17 ಮತ್ತು 19 ವರ್ಷ ಒಳಗಿನ ಬಾಲಕ ಬಾಲಕಿಯರ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಕ್ರೀಡಾಕೂಟವನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಭಾಟಿಸಿದರು. | Kannada Prabha

ಸಾರಾಂಶ

ಮೆಣಸಿನಕಾಯಿ ಮಾರುಕಟ್ಟೆ ಮೂಲಕ ವಿಶ್ವದ ಗಮನ ಸೆಳೆದಿರುವ ಬ್ಯಾಡಗಿ, ಕೆಲವೇ ದಿನಗಳಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಆಯೋಜಿಸುವ ಮೂಲಕ ದೇಶದ ಗಮನ ಸೆಳೆಯಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಬ್ಯಾಡಗಿ: ಮೆಣಸಿನಕಾಯಿ ಮಾರುಕಟ್ಟೆ ಮೂಲಕ ವಿಶ್ವದ ಗಮನ ಸೆಳೆದಿರುವ ಬ್ಯಾಡಗಿ, ಕೆಲವೇ ದಿನಗಳಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಆಯೋಜಿಸುವ ಮೂಲಕ ದೇಶದ ಗಮನ ಸೆಳೆಯಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ವಿಜುವೆಲರ್ಸ್ , ಹಾವೇರಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಬ್ಯಾಡಗಿ, ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ದೈಹಿಕ ಶಿಕ್ಷಕರ ಸಂಘದ ತಾಲೂಕು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ 17 ಮತ್ತು 19 ವರ್ಷ ಒಳಗಿನ ಬಾಲಕ-ಬಾಲಕಿಯರ ಹೊನಲು ಬೆಳಕಿನ ಆಹ್ವಾನಿತ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯಾಡಗಿ ಮೆಣಸಿನಕಾಯಿ ವ್ಯಾಪಾರದಿಂದ ದೇಶ-ವಿದೇಶಗಳಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ, ಇದೇ ರೀತಿಯಲ್ಲಿ ಇಲ್ಲಿನ ಯುವ ಕ್ರೀಡಾಪಟುಗಳ ಪ್ರತಿಭೆಗೂ ಸೂಕ್ತ ವೇದಿಕೆ ದೊರೆತರೆ ಕ್ರೀಡಾಕ್ಷೇತ್ರದಲ್ಲಿಯೂ ಬ್ಯಾಡಗಿ ತನ್ನದೇ ಛಾಪು ಮೂಡಿಸಲಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದರೂ ಸೂಕ್ತ ಅವಕಾಶ ಹಾಗೂ ತರಬೇತಿಯ ಕೊರತೆಯಿಂದ ಪ್ರತಿಭೆಗಳು ಅನಾವರಣಗೊಳ್ಳುತ್ತಿಲ್ಲ, ವಿಜುವೆಲರ್ಸ್ ನಡೆಸುತ್ತಿರುವ ಇಂತಹ ಕ್ರೀಡಾಕೂಟಗಳು ಪ್ರತಿಭಾವಂತ ಮಕ್ಕಳನ್ನು ಗುರ್ತಿಸಲು ಉತ್ತಮ ವೇದಿಕೆಯಾಗಿವೆ ಎಂದರು.

ನಿರಂತರ ತರಬೇತಿ ಅಗತ್ಯ: ಮಾಜಿ ಶಾಸಕ ಹಾಗೂ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಮಾತನಾಡಿ, ಕಬಡ್ಡಿ ಒಂದು ದಿನದ ತರಬೇತಿ ಪಡೆದು ಆಡುವ ಆಟವಲ್ಲ. ನಿರಂತರ ಅಭ್ಯಾಸ, ದೈಹಿಕ ಸದೃಢತೆ, ಶಿಸ್ತು ಹಾಗೂ ಮಾನಸಿಕ ಸ್ಥೈರ್ಯದಿಂದ ಮಾತ್ರ ಕಬಡ್ಡಿಯಲ್ಲಿ ಸಾಧನೆ ಮಾಡಲು ಸಾಧ್ಯ, ಇಂದಿನ ಯುವಜನತೆ ಗುಟಕಾ ಸೇರಿದಂತೆ ವಿವಿಧ ದುಶ್ಚಟಗಳಿಗೆ ಹಾಗೂ ಮೊಬೈಲ್ ಬಳಕೆಯ ಅತಿಯಾದ ವ್ಯಸನಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಇಂತಹ ಪರಿಸ್ಥಿತಿಯಲ್ಲಿ ಕಬಡ್ಡಿಯಂತಹ ಅಪ್ಪಟ ದೇಶಿ ಕ್ರೀಡೆಗಳು ಯುವಜನರನ್ನು ಆರೋಗ್ಯಕರ ಜೀವನಶೈಲಿಯತ್ತ ಕೊಂಡೊಯ್ಯಬಲ್ಲವು ಎಂದರು.

ಗ್ರಾಮೀಣ ಪ್ರತಿಭೆಗಳಿಗೆ ದೊಡ್ಡ ವೇದಿಕೆ: ಹಾವೇರಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ಕ್ರೀಡೆ ಕೇವಲ ಮನರಂಜನೆಗೆ ಸೀಮಿತವಾಗದೆ ಮಕ್ಕಳಲ್ಲಿ ಶಿಸ್ತು, ಸಮಯಪ್ರಜ್ಞೆ, ಆತ್ಮವಿಶ್ವಾಸ, ನಾಯಕತ್ವ ಗುಣ ಹಾಗೂ ದೈಹಿಕ ಸದೃಢತೆಯನ್ನು ಬೆಳೆಸುತ್ತದೆ. ಆದ್ದರಿಂದ ಪೋಷಕರು ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಗ್ರಾಮೀಣ ಭಾಗದಲ್ಲಿರುವ ಪ್ರತಿಭೆಗಳಿಗೆ ದೊಡ್ಡಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಬಡ್ಡಿ ಅಸೋಸಿಯೇಶನ್ ಕಳೆದ 25 ವರ್ಷಗಳಿಂದ ವಿವಿಧ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿದ್ದು. ಕಬಡ್ಡಿ ಕ್ರೀಡೆಯನ್ನು ಗ್ರಾಮೀಣ ಮಟ್ಟದಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ಮುನ್ನಡಿ ಇಡುತ್ತಿದೆ ಎಂದರು.

ವಿ.ಜುವೆಲರ್ಸ್ ಪಾರ್ಟನರ ಉಮೇಶ ವರ್ಣೇಕರ ಮಾತನಾಡಿ, ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ ಹೊರತರುವ ಉದ್ದೇಶದಿಂದ ಕಬಡ್ಡಿ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಹಾವೇರಿ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಸಿ.ಜಿ. ಚಕ್ರಸಾಲಿ, ಅಂತಾರಾಷ್ಟ್ರೀಯ ತೀರ್ಪುಗಾರ ಎಚ್.ಎಲ್.ಶ್ಯಾಮಣ್ಣಗೌಡ, ಅಂತಾರಾಷ್ಟ್ರೀಯ ತರಬೇತುದಾರ, ಎಲ್.ಮಹಮ್ಮದ ಇಸ್ಮಾಯಿಲ್, ಆಶ್ರಯ ಸಮಿತಿಯ ಅಬ್ದುಲ್ ಮುನಾಫ ಯರೇಶಿಮಿ, ಪಿಎಸ್‌ಐ ಭಾರತಿ ಕುರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ ಬಸಪ್ಪನವರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಬಸವರಾಜಪ್ಪ, ಗಣೇಶ ವರ್ಣೆಕರ, ಉದಯ ವರ್ಣೆಕರ, ಕೋಚ್ ಮಂಜುಳ ಭಜಂತ್ರಿ, ಪ್ರಕಾಶ ತಾವರಗಿ, ಎ.ಟಿ. ಪೀಠದ, ಬಿ.ಎಂ. ದೊಡ್ಮನಿ, ಸುಭಾಸ್ ಎಲಿ, ಮಹದೇ ಕರಿಯಣ್ಣನವರ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ದೈಹಿಕ ಶಿಕ್ಷಣ ಶಿಕ್ಷಕರು, ಕ್ರೀಡಾಪಟುಗಳು, ತರಬೇತುದಾರರು, ವಿವಿಧ ಸಂಘ-ಸಂಸ್ಥೆ ಗಳ ಪದಾಧಿಕಾರಿಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ಬರುವ ಡಿಸೆಂಬರ್‌ 16ರಿಂದ 20ರ ವರೆಗೆ ಸುಮಾರು 1 ಕೋಟಿ ವೆಚ್ಚದಲ್ಲಿ 19 ವರ್ಷ ಒಳಗಿನ ಬಾಲಕಿಯರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಕೂಟ ಬ್ಯಾಡಗಿಯಲ್ಲಿ ಆಯೋಜಿಸಲಾಗುತ್ತಿದ್ದು, ದೇಶದ ವಿವಿಧ ಭಾಗಗಳಿಂದ ತಂಡಗಳು ಆಗಮಿಸಲಿವೆ. ಕ್ರೀಡಾಕೂಟದ ಮೂಲಕ ಬ್ಯಾಡಗಿ ಮತ್ತಷ್ಟು ಕ್ರೀಡಾ ಕ್ಷೇತ್ರದಲ್ಲಿ ಬೆಳಗಲಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾವ್ಯಕ್ಕಿದೆ ಅಮಂಗಳ ನಾಶ ಮಾಡುವ ಶಕ್ತಿ: ಸ್ವರ್ಣವಲ್ಲೀ ಶ್ರೀ
ಪ್ಲಾಸ್ಟಿಕನಲ್ಲಿ ಸಂಗ್ರಹಿಸಿದ ನೀರು ಆರೋಗ್ಯಕ್ಕೆ ಮಾರಕ: ರಾಘವೇಶ್ವರ ಶ್ರೀ