ಕನ್ನಡಪ್ರಭ ವಾರ್ತೆ ಮದ್ದೂರು
ರಾಷ್ಟ್ರೀಯ, ರಾಜ್ಯ, ಜಿಲ್ಲಾ ಕಾನೂನು ಸೇವಾ ಸಮಿತಿ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಅದಾಲತ್ನಲ್ಲಿ 140 ಐಪಿಸಿ, 53 ಚೆಕ್ ಬೌನ್ಸ್, ಅಪಘಾತ ಪ್ರಕರಣ 69 ಹಾಗೂ 63 ಸಿವಿಲ್ ವ್ಯಾಜ್ಯಗಳನ್ನು ರಾಜೀಸಂಧಾನದ ಮೂಲಕ ಬಗೆಹರಿಸಿದ ನ್ಯಾಯಾಧೀಶರು ಕಕ್ಷಿಧಾರರಿಗೆ 7,26,84,422 ರು.ಗಳ ಪರಿಹಾರಕ್ಕೆ ಆದೇಶ ನೀಡಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 36, ಒಂದನೇ ಅಪರ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ 57, ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ 72, ಒಂದನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 18, ಎರಡನೆಯ ಅಪರ ಸಿವಿಲ್ ನ್ಯಾಯಾಲಯದಲ್ಲಿ 53, ಮೂರನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 84 ಹಾಗೂ ನಾಲ್ಕನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ 5 ಪ್ರಕರಣಗಳು ಒಳಗೊಂಡಂತೆ ಒಟ್ಟು 325 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು.ನ್ಯಾಯಾಧೀಶರಾದ ಎಂ.ಎಸ್.ಹರಿಣಿ, ಸಿ.ಎಂ.ಪಾರ್ವತಿ, ಎನ್.ಬಿ.ಮೋಹನ್ ಕುಮಾರಿ, ಕೆ.ಗೋಪಾಲಕೃಷ್ಣ, ಎಸ್.ಆರ್.ನಂದಿನಿ ಹಾಗೂ ಎಂ.ಶ್ರುತಿ ಅವರುಗಳು ತಮ್ಮ ವ್ಯಾಪ್ತಿಯ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಆಗುವ ಪ್ರಯೋಜನಗಳನ್ನು ಕುರಿತು ಉಭಯ ಕಕ್ಷಿದಾರರಿಗೆ ಮನವರಿಕೆ ಮಾಡುವ ಮೂಲಕ ವಿವಾದಗಳನ್ನು ಬಗೆಹರಿಸಿದರು.
ಪತಿಯೊಂದಿಗೆ ಒಂದಾಗಿ ಬಾಳ್ವೆ ನಡೆಸಲು ಸಮ್ಮತಿ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನ ಮನೆ ತೊರೆದು ಜೀವನಾಂಶ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಹಿಳೆಗೆ ಬುದ್ಧಿ ಮಾತು ಹೇಳಿದ ಹಿನ್ನೆಲೆಯಲ್ಲಿ ಮನಸೋತು ಪತಿಯೊಂದಿಗೆ ಒಂದಾಗಿ ಬಾಳ್ವೆ ನಡೆಸಲು ಸಮ್ಮತಿ ಸೂಚಿಸಿದ ಪ್ರಸಂಗ ಪಟ್ಟಣದ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಶನಿವಾರ ನಡೆಯಿತು.
ತಾಲೂಕು ಅಣ್ಣೂರು ಗ್ರಾಮದ ಸಿಂಧು 2013ರಲ್ಲಿ ಮಹದೇವಸ್ವಾಮಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸಿಂಧು ಅತ್ತೆ-ಮಾವ ಮತ್ತು ಸೊಸೆ ನಡುವಿನ ಹೊಂದಾಣಿಕೆ ಕೊರತೆಯಿಂದ ಗಂಡನ ಮನೆ ತೊರೆದು ಬೇರೆ ಜೀವನ ನಡೆಸುತ್ತಿದ್ದರು.
ಈ ವೇಳೆ ಸಿಂಧು ತಮ್ಮ ಗಂಡನ ಮನೆಯಲ್ಲಿ ಅತ್ತೆ ಮಾವಂದಿರೊಂದಿಗೆ ಹೊಂದಾಣಿಕೆ ಕೊರತೆ ಇದೆ. ಹೀಗಾಗಿ ಬೇರೆ ಮನೆ ಮಾಡುವುದು, ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದರೆ ಗಂಡನೊಂದಿಗೆ ಜೀವನ ನಡೆಸಲು ಸಿದ್ದ ಎಂದು ಹೇಳಿಕೆ ನೀಡಿದರು.
ನಂತರ ದಂಪತಿ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ತಿಂಗಳ ಕಾಲ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಜೀವನಾಂಶದ ಪ್ರಕರಣದ ಅರ್ಜಿ ವಿಚಾರಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಕಕ್ಷಿಧಾರರ ಪರ ವಕೀಲರಾದ ಮಂಜುಳಾ ಹಾಗೂ ಯೋಗಾನಂದ ಕದಲೂರು ಹಾಜರಿದ್ದರು.